ಸುಳ್ಯ:ಮಾಯಾವಿ ಕುದ್ರೋಳಿ ಗಣೇಶ್ ಅವರಿಂದ ಜಾದೂ ಲೋಕದ ವಿಸ್ಮಯ ‘ಮೈಂಡ್ ಮಿಸ್ಟರಿ’ ಕಾರ್ಯಕ್ರಮ ಎ.26 ರಂದು ಶನಿವಾರ ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆಯಿತು. ‘ಮೈಂಡ್ ಮಿಸ್ಟರಿ’ ಮೂಲಕ ಸುಪ್ತ ಮನಸ್ಸಿನ ಶಕ್ತಿಯ ಅನಾವರಣ ನೋಡುಗರನ್ನು ವಿಸ್ಮಯ ಲೋಕಕ್ಕೆ ಕರೆದೊಯ್ದಿತು. ವಿಜ್ಞಾನ – ಮನಶಾಸ್ತ್ರ ಹಾಗೂ ಮ್ಯಾಜಿಕ್ ಕಲೆಯ ಸಂಗಮದ ‘ಮೆಂಟಲಿಸಮ್’ ಎಂಬ ಹೊಸ ಪ್ರಯೋಗ ನೆರೆದ ಪ್ರೇಕ್ಷರನ್ನು
ಮೂಕ ವಿಸ್ಮಿತರನ್ನಾಗಿಸಿತು.ಮೈಂಡ್ ರೀಡಿಂಗ್, ಭವಿಷ್ಯವಾಣಿ,
ಸಮ್ಮೋಹಿನಿ,ಎನ್ ಎಲ್ ಪಿ,ಟೆಲಿಪತಿ, ಅಗೋಚರ ಸಂಪರ್ಕ, ಆರನೇ ಇಂದ್ರಿಯದ ಅನುಭೂತಿಯ ರಂಗರೂಪಾತ್ಮಕ ಪ್ರಯೋಗ ವಿಶೇಷ ಗಮನ ಸೆಳೆಯಿತು.ಮೆಂಟಲಿಸಮ್ ಎಂಬ ವಿಜ್ಞಾನ ಮನಶಾಸ್ತ್ರ- ಜಾದೂ ಕಲೆಯ ಸಂಗಮದ ಮನರಂಜನಾ ಕಲಾ ಪ್ರಕಾರವನ್ನು ಮೆಂಟಲಿಸ್ಟ್ ಕುದ್ರೋಳಿ ಗಣೇಶ್ ಅವರು ಪ್ರೇಕ್ಷಕರ ಮನಸ್ಸಿನ ಭಾವ, ವ್ಯಕ್ತಿತ್ವದ ವರ್ತನೆ, ಮನೋ ಕಲ್ಪನೆಯ ಸ್ವರೂಪವನ್ನು ಅಭ್ಯಸಿಸಿ ತರ್ಕಕ್ಕೆ ನಿಲುಕದ ಪ್ರಯೋಗಗಳನ್ನು

ಪ್ರದರ್ಶಿಸಿದರು. ಮೆಂಟಲಿಸಮ್ ಕಲೆಯ ಹೊಚ್ಚ ಹೊಸ ಪ್ರಯೋಗವಾಗಿರುವ ” ಮೈಂಡ್ ಮಿಸ್ಟರಿ ” ಪ್ರದರ್ಶನದ ಮೂಲಕ ಪ್ರೇಕ್ಷಕರಿಗೆ ಅಚ್ಚರಿಯ ಲೋಕ ತೆರೆದಿಟ್ಟರು. – ಮನಸ್ಸಿನ ತರ್ಕವನ್ನೇ ಪ್ರಶ್ನಿಸುವ ಹತ್ತು ಹಲವು ಮನೋ ಭ್ರಮೆಗಳಿಂದ ತುಂಬಿರುವ 120 ನಿಮಿಷಗಳ ಪ್ರದರ್ಶನ ನೋಡುಗರನ್ನು ಅದ್ಭುತ ಲೋಕದಲ್ಲಿ ತೇಲಾಡಿಸಿತು. ಮನಸ್ಸನ್ನು ಓದುವ ಮೈಂಡ್ ರೀಡಿಂಗ್, ಮನಸ್ಸು ಮನಸ್ಸುಗಳ ಮಧ್ಯದ ಅಗೋಚರ ಸಂಪರ್ಕದ ಟೆಲಿಪತಿ, ವ್ಯಕಿಯ

ವರ್ತನೆಯ ಮೇಲೆ ಪ್ರಭಾವ ಬೀರುವ ಎನ್.ಎಲ್.ಪಿ, ಮುಂದಾಗುವ ವಿಚಾರಗಳನ್ನು ಮೊದಲೇ ಸೂಚಿಸುವ ಭವಿಷ್ಯವಾಣಿ ಮುಂತಾದ ಹಲವು ಚಮತ್ಕಾರಗಳು ಮೈಂಡ್ ಮಿಸ್ಟರಿಯಲ್ಲಿ ತೆರೆದುಕೊಂಡಿತು.
ಕಾರ್ಯಕ್ರಮದ ಸಂಯೋಜಕರಾದ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.