ಸುಳ್ಯ:ಕಲಿಯುಗದ ಪ್ರತ್ಯಕ್ಷ ದೈವ, ಅಭಯ ವರದಾಯಕ ಶ್ರೀ ವಯನಾಟ್ ಕುಲವನ್ ಕೋಲ ರೂಪದಲ್ಲಿ ಅವತರಿಸಿ ನೆರೆದ ಸಾವಿರಾರು ಭಕ್ತರನ್ನು ಹರಸಿತು. ನೆರೆದ ಭಕ್ತ ಸಮೂಹ ಭಕ್ತಿ ಭಾವದಿಂದ ವಯನಾಟ್ ಕುಲವನ್ ದೈವವನ್ನು ಕಣ್ತುಂಬಿಕೊಂಡರು.ಭೂಮಿಯಲ್ಲಿ ಅವತರಿಸಿದ ಚೈತನ್ಯ ಮೂರ್ತಿ ಪರಮಶಿವನ ಅಂಶಾವತಾರ ಶ್ರೀ ವಯನಾಟ್ ಕುಲವನ್ ದೈವದ ಅನುಗ್ರಹ ಪಡೆದು ನೆರೆದ ಸಾವಿರಾರು
ಮಂದಿ ಕೃತಾರ್ಥರಾದರು. ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ದೈವಗಳ ಕೊಲ ನಡೆಯುವುದರೊಂದಿಗೆ ಸುಳ್ಯ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಸಂಪನ್ನಗೊಂಡಿತು. ಮಾ.18 ರಂದು ಬೆಳಗ್ಗಿನಿಂದ ಕಾರ್ನೋನ್ ದೈವ, ಕೊರಚ್ಛನ್ ದೈವ, ಅತ್ಯಂತ ವಿಶೇಷವಾದ ಕಂಡನಾರ್ ಕೇಳನ್ ದೈವಗಳು ನಡೆದು ಸಂಜೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ನಡೆಯಿತು. ಮುಸ್ಸಂಜೆಯ ಹೊತ್ತಿನಲ್ಲಿ ಚೆಂಡೆ ಮೇಳದ ಅಬ್ಬರದ ಮಧ್ಯೆ

ವೈಭವೋಪೇತವಾಗಿ ಅಂಗಣ ಪ್ರವೇಶಿಸಿದ ವಯನಾಟ್ ಕುಲವನ್ ದೈವಕ್ಕೆ ಸೂಟೆ ಸಮರ್ಪಣೆ ಮಾಡಲಾಯಿತು. ಬಳಿಕ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ಮಾಡಿ ಭಕ್ತ ಸಮೂಹವನ್ನು ಹರಸಿತು. ವಯನಾಟು ಕುಲವನ್ ದೈವ- ವಿಷ್ಣುಮೂರ್ತಿ ದೈವಗಳ ಸಮಾಗಮಕ್ಕೂ ದೈವಸ್ಥಾನದ ಅಂಗಣ ಸಾಕ್ಷಿಯಾಯಿತು. ಸಾವಿರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು. ಮಾ.15ರಿಂದ ಆರಂಭಗೊಂಡು ನಾಲ್ಕು ದಿನಗಳ ಕಾಲ ವಿವಿಧ ದೈವಗಳು ಕೋಲ ರೂಪದಲ್ಲಿ ವಿಜ್ರಂಭಿಸಿ ಭಕ್ತರನ್ನು ಭಕ್ತಿ ಭಾವದ

ಸಂಭ್ರಮದಲ್ಲಿ ತೇಲಾಡಿಸಿತು. ಮೂರು ಶತಮಾನದ ಬಳಿಕ ನಡೆದ ದೈವಂಕಟ್ಟು ಮಹೋತ್ಸವ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕೇರಳ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರ ಗಡಣವೇ ಆಗಮಿಸಿ ಉತ್ಸವಕ್ಕೆ ಸಾಕ್ಷಿಯಾದರು. ರಾತ್ರಿ ಮರ ಪಿಳರ್ಕಲ್ ಕಾರ್ಯಕ್ರಮ ನಡೆದು,ಕೈವೀದ್ನೊಂದಿಗೆ ದೈವಂಕಟ್ಟು ಮಹೋತ್ಸವಕ್ಕೆ ಸಮಾಪ್ತಿಯಾಗಲಿದೆ.
