ಸುಳ್ಯ: ಮನೋಶಕ್ತಿಯನ್ನು ಗಟ್ಟಿಗೊಳಿಸಲು ಮತ್ತು ಮನೋಶಕ್ತಿಯನ್ನು ಜಾಗೃತಗೊಳಿಸಿ ಬದುಕಿನಲ್ಲಿ ಯಶಸ್ಸು ಗಳಿಸಲು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಉಪಾಸನಾ ಫೌಂಡೇಷನ್ ನೇತೃತ್ವದಲ್ಲಿ
ಸದ್ಗುರು ಶ್ರೀರಾಮರವರ ದಿವ್ಯ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ ಫೆ.9ರಂದು ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯಭವನದಲ್ಲಿ ನಡೆಯಲಿದೆ ಎಂದು ಕಾರ್ಯಾಗಾರದ
ಸಂಘಟಕರಾದ ಧರ್ಮತೇಜ ಎನ್.ಪಿ. ತಿಳಿಸಿದ್ದಾರೆ. ಸುಳ್ಯ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಗುರುಗಳಾದ ಕುಂಡಲಿನಿಯೋಗಿ ಸದ್ಗುರು ಶ್ರೀ ರಾಮರವರು ನಡೆಸಿಕೊಡುವ ಮನೋಶಕ್ತಿ ಕಾರ್ಯಾಗಾರ ನಡೆಯುತಿದೆ.
ಸದ್ಗುರುಶ್ರೀಗಳು ಮೂಲತಃ ಬೆಂಗಳೂರಿನವರಾಗಿದ್ದು, ತಮ್ಮ ಆಧ್ಯಾತ್ಮಿಕ ಜೀವನದ ಬಹುಪಾಲನ್ನು ಹಿಮಾಲಯದ ಪರ್ವತ ಶ್ರಣಿಯಲ್ಲಿ ಸಾಧು ಸಂತರ ಜೊತೆ ಕಳೆದು ಆಧ್ಯಾತ್ಮಿಕತೆಯ ಉನ್ನತ ಹಂತದಲ್ಲಿ ಆತ್ಮ ಸಾಕ್ಷಾತ್ಕಾರ ಕಂಡುಕೊಂಡವರು. ತನ್ಮುಖೇನ ಸಾಧನೆ, ಸೇವೆ ಮತ್ತು ಪ್ರೀತಿ ಎಂಬ ಮೂರು ಮನುಷ್ಯ ಸಹಜ ಗುಣಗಳನ್ನು ಆಸಕ್ತರಿಗೆ ಬೋಧಿಸುವ ನಿಟ್ಟಿನಲ್ಲಿ ಉಪಾಸನ ಫೌಂಡೇಶನ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ಸ್ವಸ್ಥ ವ್ಯಕ್ತಿ, ಸ್ವಸ್ಥ ಕುಟುಂಬ ಮತ್ತು ಸ್ವಸ್ಥ ಸಮಾಜ ನಿರ್ಮಾಣದ ಧ್ಯೇಯವನ್ನು ಇಟ್ಟುಕೊಂಡಿದ್ದಾರೆ. ನಮ್ಮ ದೇಶ ಹಾಗೂ ಪರದೇಶಗಳ ಹಲವು ವ್ಯಕ್ತಿಗಳು, ಕುಟುಂಬಗಳು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಅವರು ವಿವರಿಸಿದರು.
ಈ ಕಾರ್ಯಾಗಾರದಲ್ಲಿ ಸಂಕಲ್ಪದ ಸರಿಯಾದ ಕ್ರಮ ಸುಪ್ತವಾದ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸುವುದು
ಮನೋಶಕ್ತಿಯ ಅರಿವು ಹಾಗೂ ಅದನ್ನು ಬಳಸಿ ಯಶಸ್ಸು ಗಳಿಸುವುದು ಹೇಗೆ?ಶ್ವಾಸಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಮುದ್ರೆ, ಗುರಿಯ ನಿರ್ಣಯ, ನಿರ್ಣಯಿಸಿದ ಗುರಿಯನ್ನು ತಲುಪುವ ಹಾದಿ, ಭಾವನೆ ಹಾಗೂ ಬದುಕನ್ನು ಯಾವ ರೀತಿ ದೃಢಪಡಿಸುವುದು ಸೇರಿದಂತೆ
ಅನೇಕ ವಿಚಾರಗಳನ್ನು ಹೇಳಿಕೊಡುತ್ತಾರೆ. ಮತ್ತು ಇದರ ಅಭ್ಯಾಸಕ್ಕೆ ಆಡಿಯೋ ಫೈಲ್ ಅನ್ನು ಕೂಡಾ ಕೊಡುತ್ತೇವೆ. ಆ ಮೂಲಕ ನಿಶ್ಚಿತ ಗುರಿಯನ್ನು ತಲುಪಿ ಇಚ್ಛಿಸಿದನ್ನು ಪಡೆದು ಸುಂದರ ಜೀವನವನ್ನು

ಕಟ್ಟಿಕೊಳ್ಳಬಹುದು. ಫೆ.9ರಂದು ಬೆಳಿಗ್ಗೆ 9:30ಕ್ಕೆ ಕಾರ್ಯಾಗಾರ ಆರಂಭಗೊಂಡು ಸಂಜೆ 4 ಗಂಟೆಗೆ ಕೊನೆಗೊಳ್ಳುತ್ತದೆ.
ಸದ್ಗುರುಶ್ರೀಯವರ ನೇರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಾಗಾರಕ್ಕೆ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಯವರು ಭಾಗವಹಿಸಲಿದ್ದಾರೆ. ಕಾರ್ಯಾಗಾರಕ್ಕೆ ಅಗತ್ಯವಿರುವ ಪರಿಕರಗಳಾದ ಪುಸ್ತಕ ಪೆನ್ನು ಹಾಗೂ ಐಡಿ ಕಾರ್ಡ್ಗಳನ್ನು ವಿತರಿಸುತ್ತೇವೆ. ಮಧ್ಯಾಹ್ನ ಭೋಜನದ ವ್ಯವಸ್ಥೆ, ಜ್ಯೂಸ್ ಹಾಗೂ ಸಂಜೆ ಟೀ ಕಾಫಿ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು
ನೋಂದಣಿ ಮಾಡಲು ಮತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಸದ್ಗುರುಶ್ರೀ ಯವರು ಆಸಕ್ತರಿಗೆ ಉಪಾಸನ ಫೌಂಡೇಶನ್ ನಲ್ಲಿ ಕ್ರಿಯಾಯೋಗ, ಮನೋಶಕ್ತಿ, ಸಮೂಹನ ತಂತ್ರ, ಶಕ್ತಿ ಕ್ರಿಯಾ, ಕುಂಡಲಿನಿ ದೀಕ್ಷೆ, ದೇವಿ ಸಾಧನ ದೀಕ್ಷೆ ಅನ್ನೋ ವಿದ್ಯೆಗಳನ್ನು ಧಾರೆಯೆರೆಯುತ್ತಿದ್ದಾರೆ ಎಂದು ಧರ್ಮತೇಜ ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಧುಮಿತ ಎನ್.ಡಿ, ನಟರಾಜ ಭಟ್, ರಾಕೇಶ್ ಬೆಂಗಳೂರು, ಯಶ್ವಂತ್ ಬೆಂಗಳೂರು, ಪವಿತ್ರ, ಮಂಜುನಾಥ್ ಉಪಸ್ಥಿತರಿದ್ದರು.
