ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಯೋಜನೆಗಳಲ್ಲಿ ಕೇಂದ್ರ ಸರಕಾರದಿಂದ ಸುಮಾರು 3 ಸಾವಿರ ಕೋಟಿ ರೂ ಅನುದಾನ ಬಂದಿದೆ ಎಂದು ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಜಲಜೀವನ್ ಮಿಷನ್ ಯೋಜನೆಯಲ್ಲಿ ಸುಳ್ಯ ಹಾಗೂ ಕಡಬಕ್ಕೆ ದೊಡ್ಡ ಯೋಜನೆಗಳು ಬಂದಿದೆ. ರೈಲ್ವೇ ವಿದ್ಯುದೀಕರಣ ಮಾಡಲು ಅನುದಾನ ಬಂದಿದೆ. ಸುಬ್ರಹ್ಮಣ್ಯ ರೈಲ್ವೇ
ನಿಲ್ದಾಣ ಮೇಲ್ದರ್ಜೆಗೇರಿಸಿ ಅಭಿವೃದ್ಧಿಗೆ, ಎಡಮಂಗಲ ರೈಲ್ವೇ ಸ್ಟೇಷನ್ ಅಭಿವೃದ್ಧಿಗೆ ಅನುದಾನ ಬಂದಿದೆ. ಸಿಆರ್ಎಫ್, ಪಿಎಂಜಿಎಸ್ವೈ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ, ಕ್ಷೇತ್ರದಲ್ಲಿ ವಿವಿಧ ಕಡೆ ಟವರ್ಗಳ ನಿರ್ಮಾಣಕ್ಕೆ ಅನುದಾನ ಬಂದಿದೆ ಎಂದರು. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ಬಂದಿದೆ. ಮಾಣಿ-ಮೈಸೂರು ರಸ್ತೆ ಅಭಿವೃದ್ಧಿಗೆ ಡಿಪಿಆರ್ ಟೆಂಡರ್ ಆಗಿದೆ. ಬಿಸಿ ರೋಡ್, ಅಡ್ಡಹೊಳೆ ಅಭಿವೃದ್ಧಿ ಪ್ರಗತಿಯಲ್ಲಿದೆ ಎಂದು ಹೇಳಿದರು. ಮೇ ತಿಂಗಳಲ್ಲಿ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಾಟ ಆರಂಭಿಸಲಿದೆ. 22 ಕಿ.ಕಿ.ಇಲೆಕ್ಟ್ರಿಫಿಕೇಶನ್ ಬಾಕಿ ಇದೆ. ಅದು ಮುಗಿದ ಕೂಡಲೇ ಆರಂಭ ಅಗಲಿದೆ. ಸುಬ್ರಹ್ಮಣ್ಯ-ಮಂಗಳೂರು ಮಧ್ಯೆ ಪ್ಯಾಸೆಂಜರ್ ರೈಲು ಬೇಡಿಕೆ ಇದೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ವಿಳಂಬ ಆಗಿದೆ. ಮುಂದಿನ ದಿನಗಳಲ್ಲಿ ಆರಂಭ ಆಗಲಿದೆ ಎಂದರು. ನರೇಂದ್ರ ಮೋದಿ ಅವರ ಅಧಿಕಾರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 1.13 ಲಕ್ಷ ಕೋಟಿ ಅನುದಾನ ಬಂದಿದೆ ಎಂದರು.
ಕೇರಳ ಬಿಜೆಪಿ ಚುನಾವಣೆಯ ಸಹ ಪ್ರಭಾರಿ ಹುದ್ದೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸುತ್ತೇನೆ. ನಾಳೆಯಿಂದ ಕೇರಳ ಪ್ರವಾಸ ಆರಂಭಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂವೆ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಶ್ರೀನಾಥ್ ಬಾಳಿಲ ಮತ್ತಿತರರು ಉಪಸ್ಥಿತರಿದ್ದರು.