ಸುಳ್ಯ:ರಾಜಕೀಯ ವೇದಿಕೆಯಲ್ಲಿ ಅದರಲ್ಲೂ ಚುನಾವಣಾ ಸಂದರ್ಭದಲ್ಲಿ ಅಭಿವೃದ್ಧಿ ವಿಚಾರಗಳು ಚರ್ಚೆಯಾಗುವುದು ಸಾಮಾನ್ಯ. ಇಂದು ಸುಳ್ಯಸಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿಯೂ ಅಭಿವೃದ್ಧಿ ಕುರಿತ ಭಾಷಣಗಳು ಹೇಳಿಕೆಗಳು ತುಂಬಿದ್ದವು. ಶಾಸಕಿ ಭಾಗೀರಥಿ ಮುರುಳ್ಯ ಅವರು ತಮ್ಮ ಭಾಷಣದಲ್ಲಿ ಸುಳ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿಲ್ಲ, ಸರಿಯಾಗಿ ಅನುದಾನಗಳು ನೀಡದೆ ಸರಕಾರಗಳು ಮೀಸಲು ಕ್ಷೇತ್ರವನ್ನು
ಕಡೆಗಣಿಸಿವೆ. ಕ್ಷೇತ್ರದ ಬಹುತೇಕ ಗ್ರಾಮಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಾಣದೇ ಕುಗ್ರಾಮಗಳಾಗಿಯೇ ಉಳಿದಿದೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಎಲ್ಲಾ ಗ್ರಾಮಗಳಲ್ಲಿಯೂ ಸಾಕಷ್ಟು ಅಭಿವೃದ್ಧಿ ಬೇಡಿಕೆಗಳು ಇನ್ನೂ ಇದೆ ಎಂದು ಹೇಳಿದರು
ಇದಕ್ಕೆ ತಮ್ಮ ಭಾಷಣದಲ್ಲಿ ಉತ್ತರಿಸಿದ ಮಾಜಿ ಸಚಿವ ಎಸ್.ಅಂಗಾರ ದಕ್ಷಿಣ ಕನ್ಬಡ ಜಿಲ್ಲೆಯ ಇತರ ಯಾವುದೇ ಕ್ಷೇತ್ರಗಳಲ್ಲಿ ಆಗಿರುವುದಕ್ಕಿಂತ ಹೆಚ್ಚಿನ ಅಭಿವೃದ್ಧಿ ಸುಳ್ಯ ಕ್ಷೇತ್ರದಲ್ಲಿ ಆಗಿದೆ. ಇದನ್ನು ಅಂಕಿ ಅಂಶಗಳ ಸಮೇತ ಸಾಬೀತು ಮಾಡಲು ಸಿದ್ಧ ಎಂದು
ಹೇಳಿದರು.1994ಕ್ಕಿಂತ ಮೊದಲು ಸುಳ್ಯ ಕ್ಷೇತ್ರ ಯಾವ ರೀತಿ ಇತ್ತು, ಆ ಬಳಿಕ ಎಷ್ಟು ಅಭಿವೃದ್ಧಿ ಆಗಿದೆ ಎಂಬುದು ಎಲ್ಲರ ಮುಂದಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಅತೀ ಹೆಚ್ಚಿನ ಅನುದಾನ ಬಂದಿದೆ.ಎಲ್ಲಾ ಸರಕಾರಗಳೂ ತನಗೆ ಅನುದಾನ ನೀಡಿದೆ ಎಂದ ಅವರು ತನ್ನ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಂಕಿ ಅಂಶಗಳ ಸಮೇತ ಸಾಬೀತು ಮಾಡಲು ಸಿದ್ಧ, ಅಭಿವೃದ್ಧಿ ಆಗಿಲ್ಲ ಎಂದು ಹೇಳುವವರಿಗೆ ಈ ಅಂಕಿ ಅಂಶಗಳೇ ಉತ್ತರ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ತನ್ನ ಭಾಷಣದಲ್ಲಿ ಅಭಿವೃದ್ಧಿ ವಿಚಾರ ಉಲ್ಲೇಖಿಸಿದರು. ದಕ್ಷಿಣ ಕನ್ನಡ ಜಿಲ್ಲೆಗೆ ನರೇಂದ್ರ ಮೋದಿ ಸರಕಾರದ ಅವಧಿಯಲ್ಲಿ ಒಂದು ಲಕ್ಷ ಕೋಟಿಗೂ ಮಿಕ್ಕಿ ಅನುದಾನ ಬಂದಿದೆ ಎಂದು ಹೇಳಿದರು. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಯೋಜನೆಗಳಡಿಯಲ್ಲಿ ಕೇಂದ್ರ ಸರಕಾರದಿಂದ ಮೂರು ಸಾವಿರ ಕೋಟಿ ಅನುದಾನ ಬಂದಿದೆ ಎಂದರು.