ಸುಳ್ಯ:ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಲದ ಬೆಳ್ಳಿ ಹಬ್ಬ ‘ರಜತ ಸಂಭ್ರಮ’ಕ್ಕೆ ಮೇ.10 ರಂದು ಚಾಲನೆ ನೀಡಲಾಯಿತು. ಜಟ್ಟಿಪಳ್ಳದ ಯುವ ಸದನದಲ್ಲಿ ನಡೆಯುತ್ತಿರುವ ಎರಡು ದಿನಗಳ ರಜತ ಸಂಭ್ರಮ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಉಪಾಧ್ಯಕ್ಷೆ ಶೋಭಾ ಚಿದಾನಂದ ಉದ್ಘಾಟಿಸಿದರು. ಮಹಿಳೆಯರು ಯಾವುದೇ ಕಾರ್ಯವನ್ನು ನನ್ನಿಂದ ಅಸಾಧ್ಯ ಎಂಬ ನಕಾರಾತ್ಮಕ
ಚಿಂತನೆಯನ್ನು ಬಿಟ್ಟು ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಂಡು ಯಾವುದೇ ಕೆಲಸ ಮಾಡಿದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಅವರು ಹೇಳಿದರು. ಮನೆಯ, ಕುಟುಂಬದ ವ್ಯವಸ್ಥೆಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಸಾರ್ವಜನಿಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಇನ್ನಷ್ಟು ಸಂತೋಷ, ನೆಮ್ಮದಿ, ತೃಪ್ತಿ ದೊರೆಯಲು ಸಾಧ್ಯ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಬೆಳ್ಳಿಹಬ್ಬ ಆಚರಣಾ ಸಮಿತಿಯ ಗೌರವಾಧ್ಯಕ್ಷೆ ಸರೋಜಿನಿ ಪೆಲತ್ತಡ್ಕ ವಹಿಸಿದ್ದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಲಯನ್ಸ್ ವಲಯಾಧ್ಯಕ್ಷೆ ರೂಪಶ್ರೀ ಜೆ.ರೈ ಮುಖ್ಯ ಅತಿಥಿಗಳಾಗಿದ್ದರು.

ಈ ಹಿಂದೆ ಮಹಿಳಾ ಮಂಡಲದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರನ್ನು ಹಾಗೂ ಹಾಲಿ ಸದಸ್ಯರನ್ನು ಸನ್ಮಾನಿಸಲಾಯಿತು. ಕ್ರೀಡಾ ಹಾಗೂ ಸಾಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಾನಸ ಮಹಿಳಾ ಮಂಡಲದ ಗೌರವಾಧ್ಯಕ್ಷೆ , ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷೆ ಚಂದ್ರಾಕ್ಷಿ ಕೆ.ರೈ ಸ್ವಾಗತಿಸಿ, ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಕಾರ್ಯದರ್ಶಿ ಶೈಲಜ ಪಿ. ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಅನನ್ಯ ಅನಿಲ್ ಹಾಗೂ ಗೌರವ ಸಲಹೆಗಾರ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿತಾ ರಾಮಚಂದ್ರ, ಕೋಶಾಧಿಕಾರಿ ಸವಿತ ಲಕ್ಷ್ಮಣ ಆಚಾರ್ಯ, ಶ್ರೀಮತಿ ರಾಜೇಶ್ವರಿ ಶುಭಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನೆಗೆ ಮುನ್ನ ಆಕರ್ಷಕ ಮೆರವಣಿಗೆ ನಡೆಯಿತು. ಜಟ್ಟಿಪಳ್ಳದ ಸ್ವಾಗತ ಫಲಕದ ಬಳಿ ಜಂಕ್ಷನ್ನಿಂದ ಯುವಸದನ ವಠಾರದವರೆಗೆ ಸದಸ್ಯರು ಸಮವಸ್ತ್ರದಲ್ಲಿ ಪಥಸಂಚಲನ ನಡೆಸಿದರು. ಕುಣಿತ ಭಜನೆಯ ತಂಡ, ಚೆಂಡೆವಾದನ, ಸುಡುಮದ್ದು, ಬೊಂಬೆ ಪ್ರದರ್ಶನಗಳು ಮೆರವಣಿಗೆ ಸಾಥ್ ನೀಡಿದವು. ಮುಳಿಯ ಜ್ಯುವೆಲ್ಲರ್ಸ್ ಮಾಲಕ ಮುಳಿಯ ಗೋವಿಂದ ಭಟ್ ಮೆರವಣಿಗೆಗೆ ಚಾಲನೆ ನೀಡದರು. ಜಟ್ಟಿಪಳ್ಳ ಸ.ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯಿನಿ ಸ್ವರ್ಣ ಕಲಾ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಯುವಸದನ ಕಟ್ಟಡದ ಬಳಿ 3.5 ಲಕ್ಷದಲ್ಲಿ ನಿರ್ಮಿಸಿದ ತಡೆಗೋಡೆಯ ಉದ್ಘಾಟನೆ ಹಾಗೂ ಸಾರ್ವಜನಿಕ ಶೌಚಾಲಯಕ್ಕೆ ಗುದ್ದಲಿ ಪೂಜೆಯನ್ನು ಸರೋಜಿನಿ ಪೆಲ್ತಡ್ಕ ನೆರವೇರಿಸಿದರು. ರಾತ್ರಿ ಶಾಲಾ ವಿದ್ಯಾರ್ಥಿಗಳಿಂದ ಸ್ಥಳೀಯ ಪ್ರತಿಭೆಗಳಿಂದ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾಮಂದಿರ ಬೆಳ್ಳಾರೆಯವರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.