ಸುಳ್ಯ:ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಪಟ್ಟಿ ಅಂತಿಮಗೊಂಡಿದ್ದು ಭಾನುವಾರ ಸಂಜೆ ಅಥವಾ ಸೋಮವಾರ ಬೆಳಿಗ್ಗೆ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆಧ್ಯಕ್ಷತೆಗೆ ಆಕಾಂಕ್ಷೆಗಳ ಸಂಖ್ಯೆ ಹೆಚ್ಚಿದ್ದು ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಮುಖಂಡರು ಸಭೆ ನಡೆಸಿ ಅಧ್ಯಕ್ಷತೆ ವಿಚಾರದಲ್ಲಿ ಸಮನ್ವತೆ ಸಾಧಿಸಿದ ಬಳಿಕ
ಘೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ಭಾನುವಾರ ಸಂಜೆ ಪ್ರಮುಖರ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ಉಸ್ತುವಾರಿ ಸಚಿವರಿಂದ ಮುಜರಾಯಿ ಸಚಿವರಿಗೆ ಸಲ್ಲಿಸಿದ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಪಟ್ಟಿ ಘೋಷಣೆ ವಿಳಂಬವಾಗಿತ್ತು.
ವೈರಲ್ ಆದ ಪಟ್ಟಿಯಲ್ಲಿದ್ದ ಎನ್. ಜಯಪ್ರಕಾಶ್ ರೈ ಬದಲಿಗೆ ಹೊಸ ಪಟ್ಟಿಯಲ್ಲಿ ಸೌಮ್ಯ ಭರತ್ ಅವರ ಹೆಸರು ಸೇರ್ಪಡೆಗೊಂಡಿರುವುದಾಗಿ ತಿಳಿದುಬಂದಿದೆ. ಅಧ್ಯಕ್ಷತೆಗೆ ಮಹೇಶ್ ಕುಮಾರ್ ಕರಿಕ್ಕಳ, ಅಶೋಕ್ ನೆಕ್ರಾಜೆ, ಡಾ. ರಘು, ಹರೀಶ್ ಇಂಜಾಡಿಯವರು ಆಕಾಂಕ್ಷಿಗಳಾಗಿರುವ ಹಿನ್ನಲೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಪಟ್ಟಿ ಬಿಡುಗಡೆ ವಿಳಂಬವಾಗಿದೆ ಎಂದು ಹೇಳಲಾಗುತಿದೆ. ಮಾಜಿ ಸಚಿವ ರಮಾನಾಥ ರೈ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತಿತರ ಪ್ರಮುಖರ ಸಮ್ಮುಖದಲ್ಲಿ ಚರ್ಚೆ ನಡೆಸಿ ಅಧ್ಯಕ್ಷರ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಭಾನುವಾರ ಸಂಜೆ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.
ಈ ಮಧ್ಯೆ ಹಿಂದಿನ ಪಟ್ಟಿಯಲ್ಲಿ ಹೆಸರಿದ್ದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಅವರ ಹೆಸರನ್ನು ಕೈ ಬಿಡಲಾಗಿದೆ ಎಂದು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇದು ತೀವ್ರ ಚರ್ಚೆಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಹೆಸರು ಸೇರ್ಪಡೆಯಾಗಬಹುದು ಎಂದು ನಿರೀಕ್ಷಿಸಲಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೆಸರು ಕೂಡ ಸೇರಿಲ್ಲ ಎಂದು ತಿಳಿದು ಬಂದಿದೆ.
ಹೊಸ ಪಟ್ಟಿಯಲ್ಲಿ ಡಾ.ಬಿ.ರಘು, ಅಶೋಕ್ ನೆಕ್ರಾಜೆ, ಮಹೇಶ್ ಕುಮಾರ್ ಕರಿಕ್ಕಳ, ಹರೀಶ್ ಇಂಜಾಡಿ, ಲೀಲಾ ಮನಮೋಹನ, ಪ್ರವೀಣ ಮರುವಂಜ, ಸೌಮ್ಯ ಭರತ್, ಅಜಿತ್ ಅವರು ಹೆಸರುಗಳು ಇದೆ ಎಂದು ಹೇಳಲಾಗಿದೆ.