ಸುಳ್ಯ:ಕರ್ನಾಟಕ ರಾಜ್ಯ ಲೋಕಾಯುಕ್ತ ಪೋಲಿಸ್ ಅಧಿಕಾರಿಗಳು ಸುಳ್ಯ ತಾಲೂಕು ಕಛೇರಿಗೆ ಭೇಟಿ ನೀಡಿ ನಡೆಸುತ್ತಿರುವ ಪರಿಶೀಲನೆ
ಮುಂದುವರಿದಿದೆ. ಬೆಳ್ಳಂಬೆಳಗ್ಗೆ ಕಚೇರಿಗೆ ಆಗಮಿಸಿದ ಅಧಿಕಾರಿಗಳು ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿದರು. ಮಧ್ಯಾಹ್ನದ ಬಳಿಕವೂ ಕಡತಗಳ ಪರಿಶೀಲನೆ ಮುಂದುವರಿಸಿದ್ದಾರೆ. ವಿವಿಧ ಸೆಕ್ಷನ್ಗಳಲ್ಲಿ ಕಡತಗಳನ್ನು ಪರಿಶೀಲಿಸಿದ
ಲೋಕಾಯುಕ್ತ ಅಧಿಕಾರಿಗಳು ತಹಶೀಲ್ದಾರ್, ಉಪತಹಶೀಲ್ದಾರ್ ಹಾಗು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾರ್ವಜನಿಕರಿಂದ ಸ್ವೀಕರಿದ ಅರ್ಜಿಗಳು,ಉಳಿದ ಅರ್ಜಿಗಳು, ವಿಲೇವಾರಿ ಮಾಡಿದ ಅರ್ಜಿಗಳ ಕುರಿತು ಮಾಹಿತಿ ಪಡೆದರು. ಕೆಲವು ಶಾಖೆಗಳಲ್ಲಿ ಹಲವು ಸಮಯದಿಂದ

ಕಡತಗಳು ಬಾಕಿ ಇರುವುದು ಕಂಡು ಬಂದಿದ್ದು, ಇಷ್ಟು ಸಮಯದಿಂದ ಯಾಕೆ ಪೆಂಡಿಂಗ್ ಇಟ್ಟಿದ್ದೀರಿ ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಶ್ನಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿ ಸಿಬ್ಬಂದಿಗಳಿಂದ ಮಾಹಿತಿ ಪಡೆದು,ಪರಿಶೀಲಿಸಿ ದಾಖಲಿಸಿದರು. ಕಚೇರಿಗೆ ಬಂದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕಚೇರಿಯ ವ್ಯವಸ್ಥೆ ಬಗ್ಗೆಯೂ ಪರಿಶೀಲನೆ ನಡೆಸಿ ದಾಖಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ತಾಲೂಕು ಕಚೇರಿಗಳಲ್ಲಿ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.





























