ತಿರುವನಂತಪುರ: ‘ಕೇರಳವು ಕಡುಬಡತನ ಮುಕ್ತ ರಾಜ್ಯವಾಗಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಘೋಷಿಸಿದ್ದಾರೆ.
ಕೇರಳ ರಾಜ್ಯ ರಚನೆಯಾದ ದಿನಾಚರಣೆ (ಕೇರಳ ಪಿರವಿ) ಅಂಗವಾಗಿ ಕರೆಯಲಾಗಿದ್ದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಅವರು ಈ ಘೋಷಣೆ ಮಾಡಿದರು. ‘ಮುಖ್ಯಮಂತ್ರಿ ಮಾಡಿರುವ ಘೋಷಣೆ ಅಸಂಬದ್ಧ’ ಎಂದು ಟೀಕಿಸಿದ ಕಾಂಗ್ರೆಸ್ ನೇತೃತ್ವದ ವಿಪಕ್ಷ ಪಾಳಯದ
ಶಾಸಕರು, ಸರ್ಕಾರದ ನಿಲುವನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿದ ಘಟನೆಗೂ ಸದನ ಸಾಕ್ಷಿಯಾಯಿತು.
ಈ ಕುರಿತು ಮುಖ್ಯಮಂತ್ರಿ ಘೋಷಣೆ ಮಾಡಿದ ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ನ ವಿ.ಡಿ.ಸತೀಶನ್, ‘ಮುಖ್ಯಮಂತ್ರಿಯವರ ಹೇಳಿಕೆ ಅಸಂಬದ್ಧ ಎಂದು ಟೀಕಿಸಿದರು.
‘ಈ ಅಧಿವೇಶನದಲ್ಲಿ ನಾವು ಭಾಗವಹಿಸುವುದಿಲ್ಲ ಹಾಗೂ ಸಭಾತ್ಯಾಗ ಮಾಡುತ್ತೇವೆ’ ಎಂದು ಸತೀಶನ್ ಹೇಳಿದರು.
ವಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್,
‘ಯಾವುದನ್ನು ಜಾರಿಗೊಳಿಸಲು ಸಾಧ್ಯವೋ ಅಂಥ ಭರವಸೆಗಳನ್ನಷ್ಟೇ ನಾವು ನೀಡುತ್ತೇವೆ. ನಾವು ನೀಡಿದ ಭರವಸೆಗಳ ಅನುಷ್ಠಾನವನ್ನೂ ಮಾಡಿದ್ದೇವೆ. ಇದು ವಿಪಕ್ಷಗಳಿಗೆ ನಮ್ಮ ಉತ್ತರ’ ಎಂದರು. 62 ಲಕ್ಷ ಕುಟುಂಬಗಳಿಗೆ ಪಿಂಚಣಿ, ಮನೆ ಇಲ್ಲದ ಕುಟುಂಬಗಳಿಗೆ 4.70 ಲಕ್ಷ ಮನೆಗಳು, ಆರು ಸಾವಿರ ಸಾರ್ವಜನಿಕ ಆರೋಗ್ಯ ಕೇಂದ್ರಗಳು, 43 ಲಕ್ಷ ಕುಟುಂಬಗಳಿಗೆ ಉಚಿತ ವಿಮೆ ಮತ್ತು ನಾಲ್ಕು ಲಕ್ಷ ಕುಟುಂಬಗಳಿಗೆ ಭೂಮಿಯನ್ನು ಒದಗಿಸಲಾಗಿದೆ. ಇಂತಹ ಜನಪರ ಯೋಜನೆಗಳಿಂದ ಕೇರಳದಲ್ಲಿ ಕಡುಬಡತವನ್ನು ಹೋಗಲಾಡಿಸಲಾಗಿದೆ ಎಂದು ಪ್ರತಿಪಾದಿಸಿದರು.















