ಸುಳ್ಯ:ಹಯಾತುಲ್ ಇಸ್ಲಾಂ ಕಮಿಟಿ ಜಟ್ಟಿಪಳ್ಳ ಇದರ ವತಿಯಿಂದ ವಾರ್ಷಿಕ ಜಲಾಲಿಯ್ಯಾ ರಾತೀಬ್ ಮತ್ತು ದ್ಸಿಕ್ಸ್ ದುಆಃ ಮಜ್ಲಿಸ್ ಕಾರ್ಯಕ್ರಮ ಫೆ.10ರಂದು ರಾತ್ರಿ 7 ರಿಂದ ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿನಡೆಯಲಿದೆ ಎಂದು ಹಯಾತುಲ್ ಇಸ್ಲಾಂ ಕಮಿಟಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಯಾತುಲ್ ಇಸ್ಲಾಂ ಕಮಿಟಿಯ
ಮಾಜಿ ಅಧ್ಯಕ್ಷ, ಸಂಘಟಕ ಶರೀಫ್ ಜಟ್ಟಿಪಳ್ಳ ಕಳೆದ 20 ವರ್ಷಗಳಿಂದ ಪ್ರತಿ ತಿಂಗಳು ಜಲಾಲಿಯ್ಯ ರಾತೀಬ್ ನಡೆಸಲಾಗುತ್ತಿದ್ದು, ಪ್ರತಿ ತಿಂಗಳು ನೂರಾರು ಮಂದಿ ಈ ಆಧ್ಯಾತ್ಮಿಕ ಪ್ರಾರ್ಥನಾ ಸಂಗಮದಲ್ಲಿ ಭಾಗವಹಿಸುತ್ತಿದ್ದಾರೆ. ವಾರ್ಷಿಕ ಮಜ್ಲಿಸ್ನಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.
ಜನರ ಕಷ್ಟ, ದುಃಖಗಳಿಗೆ ಪರಿಹಾರ ನೀಡಿ, ಮನಶಾಂತಿ ದೊರೆಯಲು ಈ ರೀತಿಯ ಆಧ್ಯಾತ್ಮಿಕ ಸಂಗಮ ಸಹಾಯಕವಾಗಿದೆ.ಜಟ್ಟಿಪಳ್ಳ ಪರಿಸರದ ಜನತೆಗೆ ಜಲಾಲಿಯ್ಯಾ ರಾತೀಬ್ ಒಂದು ಔಷಧಿ ರೂಪದಲ್ಲಿ ಕಾರ್ಯನಿರ್ವಹಿಸುವಂತಹ ಆಧ್ಯಾತ್ಮಿಕ ಸಂಗಮವಾಗಿದೆ. ನೂರಾರು ಜನರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರವನ್ನು ಒದಗಿಸಿಕೊಟ್ಟ ಮಜ್ಲೀಸ್ ಈ ಜಲಾಲಿಯ ರಾತೀಬ್.ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಪ್ರತಿ ತಿಂಗಳು ಈ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದ್ದು ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ವಾರ್ಷಿಕ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಸಂಘಟನೆಯ ವತಿಯಿಂದ ತೀರ್ಮಾನ ಕೈಗೊಂಡಿದ್ದೇವೆ.

ಈ ಕಾರ್ಯಕ್ರಮದ ನೇತೃತ್ವವನ್ನು ಅಸ್ಸಯ್ಯದ್ ಜಹ್ಫರ್ ಸ್ವಾದಿಕ್ ತಂಙಳ್ ರವರು ನಿರ್ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ಸಯ್ಯದ್ ಕುಂಞಿ ಕೋಯ ಸಅದಿ ತಂಙಳ್ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ಥಳೀಯ ಮಸೀದಿ ಮುಅಲ್ಲಿಮರುಗಳಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಹಾಗೂ ಸಿರಾಜ್ ಸಅದಿ ಅಲೆಕ್ಕಾಡಿ ಸೇರಿದಂತೆ ಕೇಂದ್ರ ಮಸೀದಿಗಳಾದ ಗಾಂಧಿನಗರ ಹಾಗೂ ಮೊಗರ್ಪಣೆಯ ಆಡಳಿತ ಸಮಿತಿಯ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ಉಸ್ತಾದರುಗಳು ಭಾಗವಹಿಸಲಿದ್ದು ವಿವಿಧ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾಜಿ ಅಧ್ಯಕ್ಷ ರಶೀದ್ ಜಟ್ಟಿಪಳ್ಳ ಮಾತನಾಡಿ ಈ ಒಂದು ಮಜ್ಲೀಸ್ ಕಾರ್ಯಕ್ರಮಕ್ಕೆ ಊರಿನಲ್ಲಿ ಜಾತಿ ಮತ ಮರೆತು ಜನರು ಸಹಕಾರ ನೀಡುತ್ತಾರೆ. ಅಲ್ಲದೆ ಈ ಒಂದು ಕಾರ್ಯಕ್ರಮದಿಂದಾಗಿ ಊರಿನಲ್ಲಿ ಸೌಹಾರ್ದತೆಯ ವಾತಾವರಣವೂ ಕೂಡ ನಮ್ಮಲ್ಲಿ ಕಂಡು ಬರುತ್ತದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಎಲ್ಲರೂ ಯಶಸ್ವಿಗೊಳಿಸುವಂತೆ ಅವರು ವಿನಂತಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕರವರು ಮಾತನಾಡಿ ಕಾರ್ಯಕ್ರಮಕ್ಕೆ ಯಶಸ್ವಿಗಾಗಿ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಹಯಾತುಲ್ ಇಸ್ಲಾಂ ಕಮಿಟಿ ಜಟ್ಟಿಪಳ್ಳ ಇದರ ಅಧ್ಯಕ್ಷ ಬಶೀರ್ ಬಿ.ಎ, ಕೋಶಾಧಿಕಾರಿ ಹಾಗೂ ಜಲಾಲಿಯ್ಯಾ ರಾತೀಬ್ ಕಾರ್ಯಕ್ರಮದ ಸಂಚಾಲಕರಾದ ಎನ್.ಎ.ಅಬ್ದುಲ್ಲಾ, ಪ್ರಧಾನ ಕಾರ್ಯದರ್ಶಿ ಫೈಸಲ್, ಮಾಜಿ ಅಧ್ಯಕ್ಷರಾದ ವಿ.ಕೆ.ಅಬೂಬಕ್ಕರ್ ಹಾಜಿ, ಜಲಾಲಿಯ್ಯಾ ಉಸ್ತುವಾರಿ ತಾಜುದ್ದೀನ್ ಎಂ.ಎಸ್. ಉಪಸ್ಥಿತರಿದ್ದರು.