ಅಹಮದಾಬಾದ್: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಭಾನುವಾರ) ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.ಆದರೆ ಇನ್ನೇನು ಪಂದ್ಯ ಆರಂಭವಾಗಲಿದೆ ಎನ್ನುವಷ್ಟರಷ್ಟರಲ್ಲಿ ಭಾರಿ ಮಳೆ ಸುರಿಯಲಾರಂಭಿಸಿದೆ. ಇದರಿಂದಾಗಿ ಪಂದ್ಯ ಆರಂಭಕ್ಕೆ
ಅಡಚಣೆ ಉಂಟಾಗಿದೆ. ಅಹದದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಚೊಚ್ಚಲ ಟ್ರೋಫಿಯ ಕನಸು ಕಾಣುತ್ತಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸುತ್ತಿದೆ.ಈ ಪಂದ್ಯದಲ್ಲಿ ಗೆದ್ದವರು ಫೈನಲ್ ಪ್ರವೇಶಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಹೊರತಾಗಿಯೂ ಮೊದಲನೇ ಕ್ವಾಲಿಫೈಯರ್ನಲ್ಲಿ ಆರ್ಸಿಬಿ ವಿರುದ್ಧ ಪಂಜಾಬ್ ಮುಗ್ಗರಿಸಿತ್ತು. ಇದೀಗ ಫೈನಲ್ ತಲುಪಲು ಮಗದೊಂದು ಅವಕಾಶ ಗಿಟ್ಟಿಸಿಕೊಂಡಿದೆ.
ಮತ್ತೊಂದೆಡೆ ಎಲಿಮಿನೇಟರ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ಮುಂಬೈ ಎರಡನೇ ಕ್ವಾಲಿಫೈಯರ್ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು.
ಹಾಗೊಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಪಂಜಾಬ್ ಹಾಗೂ ಮುಂಬೈ ತಂಡಗಳ ಪೈಕಿ ಯಾವ ತಂಡವು ಫೈನಲ್ಗೆ ಪ್ರವೇಶಿಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಒಂದು ವೇಳೆ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಮುಂಬೈಗಿಂತಲೂ ಉತ್ತಮ ಸ್ಥಾನದಲ್ಲಿರುವ ಪಂಜಾಬ್ ಫೈನಲ್ಗೆ ಲಗ್ಗೆ ಇಡಲಿದೆ.
ಎಲ್ಲ 14 ಲೀಗ್ ಪಂದ್ಯಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ಅಗ್ರಸ್ಥಾನ ಗಳಿಸಿದ್ದರೆ ಮುಂಬೈ, ನಾಲ್ಕನೇ ತಂಡವಾಗಿ ಪ್ಲೇ-ಆಫ್ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು.ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಯಾವುದೇ ಮೀಸಲು ದಿನ ಇರುವುದಿಲ್ಲ. 120 ನಿಮಿಷಗಳ ಬಳಿಕ ಓವರ್ಗಳ ಸಂಖ್ಯೆಯಲ್ಲೂ ಕಡಿತವುಂಟಾಗದಲಿದೆ.
ನಿಗದಿತ ಅವಧಿಯಲ್ಲಿ ಪಂದ್ಯ ಪೂರ್ಣಗೊಳಿಸಲು ಪ್ರಯತ್ನ ನಡೆಯಲಿದೆ. ಕನಿಷ್ಠ ಐದು ಓವರ್ಗಳ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಪಂದ್ಯ ರದ್ದಾಗಲಿದೆ.