ಸುಳ್ಯ:ಜೀವನದಲ್ಲಿ ಉತ್ತಮ ಸ್ಥಾನ ಮಾನ ಗಳಿಸಲು ಗುರುಗಳು ಮಾರ್ಗದರ್ಶನ, ಜೀವನದ ಗುರಿ ಸಾಧನೆಗೆ ಗುರು ದಾರಿ ದೀಪ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಬೆಂಗಳೂರಿನ ಪ್ರಣವ್ ಫೌಂಡೇಶನ್ , ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ‘ಗುರುವಂದನಾ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು. ಮಾತನಾಡಿದರು. ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯವಾಗಲು ಉತ್ತಮ
ಶಿಕ್ಷಕರ ಅಗತ್ಯವಿದೆ. ಅಂಗನವಾಡಿ ಶಿಕ್ಷಕಿಯರು ಮಕ್ಕಳಲ್ಲಿರುವ ಪ್ರಾಥಮಿಕ ಹಂತದ ಭಯವನ್ನು ಹೋಗಲಾಡಿಸಿ ಶಾಲಾ ಶಿಕ್ಷಣಕ್ಕೆ ತಯಾರು ಮಾಡುವ ಉನ್ನತ ಸೇವೆ ನೀಡುತ್ತಾರೆ. ವಿಶೇಷ ಶಾಲಾ ಶಿಕ್ಷಕರು ಮಕ್ಕಳಿಗೆ ತಾಯಿಯ ಪ್ರೀತಿ ನೀಡಿ ಸಾಕಿ ಸಲಹುತ್ತಾರೆ ಎಂದು ಅವರು ಹೇಳಿದರು.
![](https://thesulliamirror.com/wp-content/uploads/2023/09/IMG_20230930_190248.jpg)
ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿದ ಎಲಿಮಲೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ತಳೂರು ಮಾತನಾಡಿ ನಮ್ಮದು ಗುರುಪರಂಪರೆಯ ದೇಶ, ಗುರುಗಳಿಗೆ ಅಪಾರವಾದ ಗೌರವ ನೀಡುತ್ತೇವೆ. ಗುರುಗಳು ನಮ್ಮ ಕಣ್ಣಿಗೆ ಕಾಣುವ ದೇವರು ಎಂದು ಹೇಳಿದರು.
ಅಭಿನಂದನಾ ಭಾಷಣ ಮಾಡಿದ ನಿವೃತ್ತ ಶಿಕ್ಷಕ ಪುರುಷೋತ್ತಮ ಕಿರ್ಲಾಯ ‘ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ತಾವು ಮಾಡುವ ಕೈಂಕರ್ಯವೇ ದೊಡ್ಡ ಪುರಸ್ಕಾರ ಎಂದರು.
ಸಮಾರಂಭದಲ್ಲಿ 60 ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸುಳ್ಯ ತಾಲೂಕಿನ ಅನುದಾನಿತ, ಅನುದಾನರಹಿತ, ಸರಕಾರಿ ಶಾಲೆ ಸೇರಿ ಒಟ್ಟು 20 ಶಿಕ್ಷಕರನ್ನು, ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ 20 ಮಂದಿ ಅಂಗನವಾಡಿ ಕಾರ್ಯಕರ್ತೆಯವರನ್ನು, 20 ಮಂದಿ ವಿಶೇಷ ಶಾಲೆಯ ಶಿಕ್ಷಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
![](https://thesulliamirror.com/wp-content/uploads/2023/09/IMG_20230930_190304.jpg)
ಮುಖ್ಯ ಅತಿಥಿಗಳಾಗಿ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಜಿ.ಪಂ.ಮಾಜಿ ಸದಸ್ಯರಾದ ಹರೀಶ್ ಕಂಜಿಪಿಲಿ,ಎಸ್.ಎನ್.ಮನ್ಮಥ, ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಚಾಲಕ ಸುಧಾಕರ ಕಾಮತ್, ಸುಳ್ಯ ಸಿಡಿಪಿಒ ಶೈಲಜಾ ದಿನೇಶ್,ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ಪ್ರಣವ್ ಫೌಂಡೇಷನ್ ಗೌರವ ಸಲಹಗಾರರಾದ ಪ್ರಸಾದ್ ಜೋಷಿ, ಟ್ರಸ್ಟಿ ಡಾ. ಅನುರಾಧಾ ಮಧುಗಿರಿ ಭಾಗವಹಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ಸ್ವಾಗತಿಸಿದರು.ಪ್ರಣವ್ ಫೌಂಡೇಶನ್ನ ಕಾರ್ಯದರ್ಶಿ ನಾಗರಾಜ್ ಹೆಬ್ಬಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕರಾದ ಮಹೇಶ್ ಕುಮಾರ್ ರೈ ಮೇನಾಲ ವಂದಿಸಿದರು. ಶಿಕ್ಷಕಿ ಮಮತಾ ಪ್ರಾರ್ಥಿಸಿದರು. ಶಿಕ್ಷಕಿಯರಾದ ಮಮತಾ ಹಾಗೂ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.