ವಿಟ್ಲ: ಸಮಾನಮನಸ್ಕ ಒಕ್ಕಲಿಗ ಗೌಡ ಸಮಾಜದ ಯುವ ಮನಸ್ಸುಗಳು ಒಂದಾಗಿ ಸೇವಾ ಚಟುವಟಿಕೆ ಪ್ರಾರಂಭಿಸಿರುವುದು ಸದ್ವಿಚಾರ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಎಲ್ಲಾ ವಿಧದಲ್ಲಿ ಸ್ಪಂದಿಸುವ ಗುಣವನ್ನು ನಾವು ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಕರೆ ನೀಡಿದರು.ವಿಟ್ಲ ಮುಡ್ನೂರು ಗ್ರಾಮದ ಅಲಂಗಾರು ತೀರ್ಥರಾಮಗೌಡ ಪಾಂಬಾರು ಅವರಿಗೆ ಮನೆನಿರ್ಮಾಣಕ್ಕೆ ಕೆಂಪುಕಲ್ಲು ಹಸ್ತಾಂತರ ಕಾರ್ಯಕ್ರಮ ಮತ್ತು
ನೂತನ ದ.ಕ.ಒಕ್ಕಲಿಗ ಗೌಡ ಸೇವಾವಾಹಿನಿ ಟ್ರಸ್ಟ್ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿ, ಒಕ್ಕಲಿಗ ಗೌಡ ಸೇವಾ ವಾಹಿನಿ ಟ್ರಸ್ಟ್ ನೊಂದವರ ಬಾಳಿನ ಆಶಾಕಿರಣ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬುದನ್ನು ಟ್ರಸ್ಟ್ ನ ಉತ್ಸಾಹಿ ಯುವಕರು ಕೇವಲ ಮಾತಾಗದೆ ಅರ್ಥಪೂರ್ಣವಾಗಿ ಅಳವಡಿಸಿಕೊಂಡಿದ್ದಾರೆ. ಎಂದು ಅಭಿಪ್ರಾಯಪಟ್ಟರು.
ವಿಟ್ಲಮುಡ್ನೂರು ಗ್ರಾ.ಪಂ. ಅಧ್ಯಕ್ಷ ಪುನೀತ್ ಮಾಡತ್ತಾರು,
ಸಮಾಜದ ಹಿರಿಯರಾದ ಬೋಜಪ್ಪಗೌಡ ಮಾಡತ್ತಾರು, ಕಿಶೋರ್ ಪುಣಚ ವೇದಿಕೆಯಲ್ಲಿದ್ದರು. ಜಯರಾಮ್ ಕಲ್ಲಾಜೆ ನಿರೂಪಿಸಿದರು. ಅಲಂಗಾರು ಹಾಗೂ ಪುಣಚ, ಮಾಡತ್ತಡ್ಕ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸೇವಾ ವಾಹಿನಿ ಟ್ರಸ್ಟ್ ನ್ನು ಸ್ವಾಮೀಜಿ’ಯವರು ಮತ್ತು ಗ್ರಾಮಸ್ಥರು ಪುಂಡಿಪಣವು’ಗೆ ನಾಣ್ಯ ಹಾಕಿ(ದೇಣಿಗೆ ನೀಡಿ) ಸೇವಾವಾಹಿನಿ’ಗೆ ಹಸ್ತಾಂತರಿಸುವುದರೊಂದಿಗೆ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಗುಡ್ಡೆ ಕುಸಿತದಿಂದ ಮನೆ ಹಾನಿಗೊಳಗಾಗಿ ಸಂತ್ರಸ್ತರಾದ ವಿಟ್ಲ ಮುಡ್ನೂರು ಗ್ರಾಮದ ಅಲಂಗಾರು ನ ತೀರ್ಥರಾಮಗೌಡ ಪಾಂಬಾರು ಇವರ ಮನೆ ನಿರ್ಮಾಣಕ್ಕೆ ಟ್ರಸ್ಟ್ನ ಸಹಾಯಾರ್ಥ ಗೌಡ ಸಮಾಜದ ಬಂಧುಗಳಿಂದ ಮಾಸಿಕ ತಲಾ ಕನಿಷ್ಠ 500 ರೂಪಾಯಿಯಂತೆ ಸಂಗ್ರಹಿಸಿದ ಮೊತ್ತದಲ್ಲಿ 2500 ಕೆಂಪು ಕಲ್ಲುಗಳನ್ನು ಫಲಾನುಭವಿಗೆ ತೆಂಗಿನಗಿಡ ನೀಡುವ ಮೂಲಕ ವಿಧ್ಯುಕ್ತವಾಗಿ ಹಸ್ತಾಂತರಿಸಲಾಯಿತು.