ಸುಳ್ಯ:ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಯಿತು. ಕಾಲೇಜಿನ ವಠಾರವನ್ನು ದೀಪದಿಂದ ಬೆಳಗಿಸಿ ಅಲಂಕರಿಸಲಾಯಿತು. ಕೊಡಿಯಾಲಬೈಲು ಎಂಜಿ ಪ್ರೌಢಶಾಲೆಯ ಸಂಚಾಲಕರಾದ ದೊಡ್ಡಣ್ಣ ಬರಮೇಲು ಉದ್ಘಾಟಿಸಿದರು. ದೀಪಾವಳಿಯ ಸಂಭ್ರಮದ ಕ್ರಮ ಮತ್ತು ಆಚರಣೆಯ ಉದ್ದೇಶವನ್ನು
ಇಂದಿನ ಮಕ್ಕಳು ತಿಳಿಯಬೇಕೆಂದು ಕರೆ ನೀಡಿ ದೀಪಾವಳಿಯ ಹಿನ್ನಲೆಯನ್ನು ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ರೇವತಿ ನಂದನ್ ವಹಿಸಿ ಹಿಂದಿನ ಕಾಲದ ದೀಪಾವಳಿ ಆಚರಣೆಯ ಕ್ರಮವನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಆಚರಣೆಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿನಿಯರು ದೀಪಾವಳಿಯ ಬಗ್ಗೆ ವಿಶೇಷ ನೃತ್ಯ ಪ್ರದರ್ಶನವನ್ನು ನೀಡಿದರು. ವಿದ್ಯಾರ್ಥಿಗಳು ಸಭಾಂಗಣವನ್ನು ದೀಪ ಮತ್ತು ಗೂಡು ದೀಪದಿಂದ ವಿಶೇಷವಾಗಿ ಅಲಂಕರಿಸಿ ಸಮಾರಂಭಕ್ಕೆ ಮೆರುಗನ್ನು ನೀಡಿದರು.
ಹಬ್ಬದ ವಿಶೇಷ ಖಾದ್ಯವಾದ ಅವಲಕ್ಕಿ ಮತ್ತು ಬಾಳೆಹಣ್ಣನ್ನು ವಿತರಿಸಲಾಯಿತು. ಎಲ್ಲರೂ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು. ಸಮಾರಂಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಭಾರತಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ದಯಮಣಿ .ಕೆ ಸ್ವಾಗತಿಸಿ, ಗಣಿತಶಾಸ್ತ್ರ ಉಪನ್ಯಾಸಕಿ ಮೇಘಾ ವಂದಿಸಿದರು. ಉಪನ್ಯಾಸಕಿಯರಾದ ಕೃತಿ ಪಿ. ಎಸ್ ಮತ್ತು ದೀಪ್ತಿ ರವರು ಕಾರ್ಯಕ್ರಮ ನಿರ್ವಹಿಸಿದರು.















