ಸುಳ್ಯ:ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿ, ಗೋರ್ತಿಲ, ಪುಣೇರಿ, ಪನ್ನೆ, ಮಿತ್ತಡ್ಕ ಪರಿಶಿಷ್ಟ ಜಾತಿ ಕಾಲನಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಕೂಡಲೇ ಜನರ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ
ದಲಿತ ಮುಖಂಡರಾದ ಅಚ್ಚುತ್ತ ಮೆಲ್ಕಜೆ ಮತ್ತು ಗುತ್ತಿಗಾರು ಗ್ರಾ.ಪಂ ಮಾಜಿ ಅಧ್ಯಕ್ಷ ಅಚ್ಚುತ್ತ ಗುತ್ತಿಗಾರು, ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿ, ಗೋರ್ತಿಲ, ಪುಣೇರಿ, ಪನ್ನೆ, ಮಿತ್ತಡ್ಕ ಪರಿಶಿಷ್ಟ ಜಾತಿ ಕಾಲನಿಗಳಲ್ಲಿ ಸುಮಾರು 50 ವರ್ಷಗಳಿಂದ 50 ಕುಟುಂಬಗಳು ವಾಸ ಮಾಡಿಕೊಂಡು ಬಂದಿದ್ದಾರೆ. ಆದರೆ ಸುಮಾರು 30 ಕ್ಕೂ ಹೆಚ್ಚು ಕುಟುಂಬಗಳು ಹಕ್ಕುಪತ್ರ, ರಸ್ತೆ, ವಿದ್ಯುತ್, ಕುಡಿಯುವ ನೀರು, ಸ್ಮಶಾನ ಸೌಲಭ್ಯಗಳಿಲ್ಲ. ಮೂಲಭೂತ ಸೌಲಭ್ಯ ಒದಗಿಸುವಂತೆ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ಮಾಡಿದ್ದೇವೆ, ಅಲ್ಲದೇ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕುಂದುಕೊರತೆ ನಿವಾರಣಾ ಸಮಿತಿಯ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಮನವಿ ನೀಡಿ ಚರ್ಚೆ ನಡೆಸಿದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನ ಆಗಿಲ್ಲ.
ಸುಮಾರು 30 ಕ್ಕೂ ಹೆಚ್ಚು ಕುಟುಂಬಗಳು ಸರಕಾರಿ ಸ್ಥಳದಲ್ಲಿ ವಾಸ ಮಾಡುತ್ತಿದ್ದಾರೆ. ಅಡಿಸ್ಥಳಕ್ಕಾಗಿ 94 ಸಿ ಯಲ್ಲಿ ಅರ್ಜಿ ನೀಡಿದರೂ ಇಲ್ಲಿಯವರೆಗೆ ವಿಲೇಯಾಗಿಲ್ಲ. ಗ್ರಾಮದಲ್ಲಿ ಸ್ಮಶಾನ ಇಲ್ಲದೇ ಸಮಸ್ಯೆ ಎದುರಾಗಿದೆ.ಈ ಎಲ್ಲಾ ಸಮಸ್ಯೆಗಳು
ಮುಂದಿನ ಒಂದು ತಿಂಗಳೊಳಗೆ ಆಗದೇ ಇದ್ದಲ್ಲಿ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ದಲಿತ ಮುಖಂಡರಾದ ಪುಟ್ಟಣ್ಣ ಬಾಳುಗೋಡು, ಗಣೇಶ್ ಬಾಳುಗೋಡು, ಮೋಕ್ಷಿತ್ ಪುಣೇರಿ, ಕುಮಾರ್ ಬಳ್ಳಕ ಉಪಸ್ಥಿತರಿದ್ದರು.















