ಪರ್ತ್: ಭಾನುವಾರ ಮಳೆಯಿಂದ ಓವರುಗಳ ಕಡಿತಗೊಂಡ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಏಳು ವಿಕೆಟ್ಗಳಿಂದ ಜಯಗಳಿಸಿದ್ದು,ಮಳೆಯಿಂದಾಗಿ ಪಂದ್ಯಕ್ಕೆ ಕೆಲವು ಬಾರಿ ಅಡಚಣೆಯಾಯಿತು. ಅಂತಿಮವಾಗಿ ತಲಾ 26 ಓವರುಗಳಿಗೆ ಪಂದ್ಯ ಇಳಿಸಲಾಯಿತು. ಮೊದಲು ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಭಾರತ 9 ವಿಕೆಟ್ಗೆ 136 ರನ್ ಗಳಿಸಿತು. ಡಕ್ವರ್ಥ್ ಲೂಯಿಸ್ ನಿಯಮದ
ಆಧಾರದಲ್ಲಿ ಆಸ್ಟ್ರೇಲಿಯಾ ತಂಡದ ಗುರಿಯನ್ನು 26 ಓವರುಗಳಲ್ಲಿ 131 ರನ್ಗಳಿಗೆ ನಿಗದಿಗೊಳಿಸಲಾಯಿತು. ಆತಿಥೇಯರು 21.1 ಓವರುಗಳಲ್ಲಿ 3 ವಿಕೆಟ್ಗೆ ಈ ಮೊತ್ತ ಗಳಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಪಡೆದರು.
ನಾಯಕ ಮಿಚೆಲ್ ಮಾರ್ಷ್ (ಅಜೇಯ 46, 52ಎ), ಜೋಶ್ ಫಿಲಿಪ್ (37, 29ಎ), ಪದಾರ್ಪಣೆಗೈದ ಮ್ಯಾಥ್ಯೂ ರೆನ್ಷಾ (ಔಟಾಗದೇ 21, 24ಎ)
ಗೆಲುವಿನ ಲೆಕ್ಕ ಚುಕ್ತಾ ಮಾಡಿದರು. ಆಸ್ಟ್ರೇಲಿಯಾದ ಬಿರುವೇಗದ ದಾಳಿಯೆದುರು ಭಾರತದ ಆಟ ಸಪ್ಪೆಯೆನಿಸಿತು.
ಏಕದಿನ ತಂಡಕ್ಕೆ ಮರಳಿದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ವಿಫಲರಾದರು.ಭಾರತಕ್ಕೆ 500ನೇ ಪಂದ್ಯ ಆಡಿದ ರೋಹಿತ್ ಜೊತೆ ನೂತನ ನಾಯಕ ಗಿಲ್ ಅವರು ಮೈದಾನಕ್ಕಿಳಿದಾಗ ಹರ್ಷೋದ್ಗಾರಗಳು ಮೊಳಗಿದವು. ಆದರೆ ರೋಹಿತ್ ಅವರು 14 ಎಸೆತಗಳನ್ನಷ್ಟೇ ಆಡಿದರು. ಒಂದು ನೇರ ಡ್ರೈವ್ ಮೂಲಕ ಬೌಂಡರ ಗಿಟ್ಟಿಸಿದರು. ಆದರೆ ಹೇಜಲ್ವುಡ್ ಬೌಲಿಂಗ್ನಲ್ಲಿ ಬೌನ್ಸ್ ಅಂದಾಜಿಸುವಲ್ಲಿ ಎಡವಿ ಸ್ಲಿಪ್ನಲ್ಲಿ ಕ್ಯಾಚಿತ್ತರು.ಕೊಹ್ಲಿ ಎದುರಿಸಿದ್ದು ಎಂಟು ಎಸೆತಗಳನ್ನು ಮಾತ್ರ. ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಕೂಪರ್ ಕಾನೊಲಿ ಹಿಡಿದ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಇದು ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಗಳಿಸಿದ ಮೊದಲ ‘ಡಕ್’.ನಾಯಕ ಗಿಲ್, ಉಪ ನಾಯಕ ಶ್ರೇಯಸ್ ಅಯ್ಯರ್ ಬೇಗನೇ ನಿರ್ಗಮಿಸಿದರು.ಅಕ್ಷರ್ ಪಟೇಲ್ (31, 38ಎ) ಮತ್ತು ಕೆ.ಎಲ್.ರಾಹುಲ್ (38, 31ಎ) ನಡುವಣ ಐದನೇ ವಿಕೆಟ್ಗೆ 39 ರನ್ಗಳು ಬಂದವು. ರಾಹುಲ್ ಮತ್ತು ವಾಷಿಂಗ್ಟನ್ ಸುಂದರ್ ನಡುವೆ ಆರನೆ ವಿಕೆಟ್ಗೆ 30 ರನ್ಗಳು ಬಂದವು. ಆದರೆ ನಂತರ ಮತ್ತಷ್ಟು ವಿಕೆಟ್ಗಳು ಉರುಳಿದ್ದರಿಂದ ರನ್ವೇಗ ತಗ್ಗಿತು.















