ಮಂಡೆಕೋಲು: ನಿರಂತರ ಕಲಿಕೆ ಹಾಗೂ ಸತತ ಪರಿಶ್ರಮ ಇದ್ದರೆ ಯಾವುದೇ ಕೆಲಸದಲ್ಲಿ ಉತ್ತಮ ಕೌಶಲ್ಯತೆ ಹೊಂದಬಹುದು ಎಂದು ಕೇಂದ್ರೀಯ ರಬ್ಬರ್ ಪ್ರಾಧಿಕಾರದ ಪುತ್ತೂರು ವಿಭಾಗದ ಸಹಾಯಕ ಅಭಿವೃದ್ಧಿ ಅಧಿಕಾರಿ ಟೋನಿ ಮೈಕಲ್ ಹೇಳಿದರು. ಕೇಂದ್ರೀಯ ರಬ್ಬರ್ ಪ್ರಾಧಿಕಾರ ಹಾಗೂ ಮಂಡೆಕೋಲು ಗ್ರಾಮ ಪಂಚಾಯತ್ನ
ಅರಿವು ಕೇಂದ್ರದ ಜಂಟಿ ಸಹಭಾಗಿತ್ವದಲ್ಲಿ ಎಂಟು ದಿನಗಳ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಬ್ಬರ್ ಬೋರ್ಡ್ನ ಸುಳ್ಯ ಕ್ಷೇತ್ರಾಧಿಕಾರಿ ಪವಿತ್ರ ಮಾತನಾಡಿ ಬೋರ್ಡ್ನ ವತಿಯಿಂದ ನೀಡಲಾಗುವ ವಿಮೆ ಹಾಗೂ ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ತರಬೇತುದಾರ ಸತ್ಯಶಾಂತಿ ತ್ಯಾಗಮೂರ್ತಿ ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭಹಾರೈಸಿ, ರಬ್ಬರ್ ಬೋರ್ಡ್ ನ ನಿರಂತರ ಸಂಪರ್ಕ ಇರಿಸಿಕೊಂಡು ಮುನ್ನಡೆಯುವಂತೆ ತಿಳಿಸಿದರು.
ಇದೇ ವೇಳೆ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಉಮೇಶ್ ಗೌಡ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಶಿಧರ ಮಾವಜಿ ಸ್ವಾಗತಿಸಿದರು. ಭಾರತಿ ಯು.ಯಂ ವಂದಿಸಿದರು. ಗಣೇಶ್ ಮಾವಂಜಿ ಕಾರ್ಯಕ್ರಮ ನಿರೂಪಿಸಿದರು.















