ಮಂಗಳೂರು: ಮುಂದಿನ ಐದು ದಿನಗಳ ಕಾಲ ಅರಬ್ಬಿ ಸಮುದ್ರ ಹಾಗು ಬಂಗಾಳಕೊಲ್ಲಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವ ಹಿನ್ನಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.ಈ ಹಿನ್ನೆಲೆಯಲ್ಲಿ ಮೇ 25ರವರೆಗೆ ಕರ್ನಾಟಕ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ
ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಹವಾಮಾನ ಇಲಾಖೆಯ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
ಮೇ 20ರಿಂದ ಮೇ 25ರವರೆಗೆ ಕರ್ನಾಟಕ, ಕೇರಳ ಕರವಳಿ, ಲಕ್ಷದ್ವೀಪ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ನೈರುತ್ಯ ಅರಬ್ಬಿ ಸಮುದ್ರದ ಹಲವು ಭಾಗಗಳಲ್ಲಿ ವಿಶೇಷವಾಗಿ ಸೊಮಾಲಿಯ ಕರಾವಳಿಯ ಉದ್ದಕ್ಕೂ ಗಾಳಿಯ ವೇಗ ಗರಿಷ್ಠ 65 ಕಿ.ಮೀ. ತಲುಪುವ ಸಾಧ್ಯತೆ ಇದೆ. ಮನ್ನಾರ್ ಕೊಲ್ಲಿ, ದಕ್ಷಿಣ ಬಂಗಾಳ ಕೊಲ್ಲಿಯ ನೈರುತ್ಯ ಮತ್ತು ಆಗ್ನೇಯ ಭಾಗಗಳು ಹಾಗೂ ಅಂಡಮಾನ್ ಸಮುದ್ರದ ವ್ಯಾಪ್ತಿ ಹಾಗೂ ಶ್ರೀಲಂಕಾ ಕರಾವಳಿ ಮತ್ತು ನೈರುತ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಳಲ್ಲಿ ಗಾಳಿಯ ತೀವ್ರ ಹೆಚ್ಚಾಗಿರಲಿದೆ ಎಂದು ಎಚ್ಚರಿಕೆ ನೀಡಿದೆ.













