ಶಬರಿಮಲೆ:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಇಂದು ಶಬರಿಮಲೆಗೆ ಆಗಮಿಸಿದ ಅವರು ಇರುಮುಡಿ ಕಟ್ಟು ಹೊತ್ತು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ಈ ಮೂಲಕ ಶಬರಿಮಲೆಗೆ ಭೇಟಿ ನೀಡಿದ ಮೊದಲ
ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ತುಲಾ ಮಾಸದ ಪೂಜೆಯ ಕೊನೆಯ ದಿನದಂದು ಅವರು ಸನ್ನಿಧಾನಕ್ಕೆ ಭೇಟಿ ನೀಡಿದರು.ಪಂಪಾ ಗಣಪತಿ ದೇವಸ್ಥಾನದಲ್ಲಿ ಇರುಮುಡಿ ಕಟ್ಟು ಕಟ್ಟಿ ವಿಶೇಷ ವಾಹನದಲ್ಲಿ ಅವರು ಸನ್ನಿಧಾನಕ್ಕೆ ಆಗಮಿಸಿ 18 ಮೆಟ್ಟಿಲು ಏರಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು.
ಮಂಗಳವಾರ ಸಂಜೆ ತಿರುವನಂತಪುರಂ ತಲುಪಿದ್ದ ರಾಷ್ಟ್ರಪತಿಗಳು, ಬುಧವಾರದಂದು ಶಬರಿಮಲೆಗೆ ಪ್ರಯಾಣ ಬೆಳೆಸಿದರು. ಹೆಲಿಕಾಪ್ಟರ್ ಮೂಲಕ ಕೇರಳದ ಪ್ರಮಾಡಂ ಇನ್ಡೋರ್ ಸ್ಟೇಡಿಯಂಗೆ ಬಂದಿಳಿದು ಅಲ್ಲಿಂದ ರಸ್ತೆ ಮಾರ್ಗ ಪಂಪೆಗೆ ಆಗಮಿಸಿ ಬಳಿಕ ಸನ್ನಿಧಾನ ತಲುಪಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ರಾಷ್ಟ್ರಪತಿ ಅವರಿಗೆ ಸನ್ನಿಧಾನದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ನಾಲ್ಕು ದಿನದ ಕೇರಳ ಪ್ರಸಾಸಕ್ಕೆ ರಾಷ್ಟ್ರಪತಿ ಮುರ್ಮು ಅವರು ಅ.21ರಂದು ಆಗಮಿಸಿದ್ದರು. ಅಕ್ಟೋಬರ್ 23 ಮತ್ತು 24 ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಅ.23 ರಂದು ತಿರುವನಂತಪುರದ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ, ವರ್ಕಲಾದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.















