ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಸೇವಾ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿರಥ ನಾಳೆ(ನ.4) ಸುಳ್ಯಕ್ಕೆ ಆಗಮಿಸಲಿದೆ. ನ.5ರಂದು ರಥವು ಕುಕ್ಕೆ ಸುಬ್ರಹ್ಮಣ್ಯ ಪುರ ಪ್ರವೇಶ ಮಾಡಲಿದೆ.ನ.10ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡಲಾಗುವುದು.ಕೋಟೇಶ್ವರದ
ರಥ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಕೋಟೇಶ್ವರ ಬಿ. ಲಕ್ಷ್ಮೀನಾರಾಯಣ ಆಚಾರ್ಯರು ಮತ್ತು ಪುತ್ರ ರಾಜಗೋಪಾಲಾಚಾರ್ಯ ಅವರು ನಿರ್ಮಿಸಿದ ಬೆಳ್ಳಿ ರಥ ನಿರ್ಮಾಣ ಪೂರ್ಣಗೊಂಡಿದ್ದು
ಇಂದು (ನ.3ರಂದು) ರಾತ್ರಿ ಬೆಳ್ಳಿರಥಕ್ಕೆ ಗುತ್ತಿಪೂಜೆ ನಡೆದು
ಶಾಸ್ತ್ರೋಕ್ತ ವಾಗಿ ಬಿಟ್ಟುಕೊಡುವ ಕಾರ್ಯಕ್ರಮ ನಡೆಯಲಿದೆ.ಈ ಹಿನ್ನಲೆಯಲ್ಲಿ ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ಜ್ಯೋತಿ ಆರ್.ಪ್ರಸಾದ್, ಮೌರ್ಯ ಕುರುಂಜಿ ಹಾಗೂ ಇತರರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ ಕೋಟೇಶ್ವರಕ್ಕೆ ಹೊರಟರು.

ನ.4ರಂದು ಬೆಳಿಗ್ಗೆ 8ಕ್ಕೆ ಕೋಟೇಶ್ವರದಿಂದ ಬೆಳ್ಳಿರಥ ಯಾತ್ರೆ ಆರಂಭಗೊಳ್ಳಲಿದೆ. ಕುಂಭಾಶಿ-ಉಡುಪಿ- ಸುರತ್ಕಲ್- ಮಂಗಳೂರು- ಬಿಸಿ ರೋಡ್-ಕಬಕ-ಪುತ್ತೂರು- ಕುಂಬ್ರ- ಕನಕಮಜಲು- ಜಾಲ್ಸೂರು ಪೈಚಾರ್ ಮೂಲಕ ಹಾದು ಬಂದು ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಾಗತವನ್ನು ಸ್ವೀಕರಿಸಿ ಸಾಯಂಕಾಲ ಸುಳ್ಯಕ್ಕೆ ಆಗಮಿಸಲಿದೆ. ಪೈಚಾರು ಬಳಿ ಪೂರ್ಣಕುಂಭದ ಮೂಲಕ ಸ್ವಾಗತಿಸಲ್ಪಟ್ಟು ಸಿಂಗಾರಿಮೇಳ, ಭಜನಾ ತಂಡ ಹಾಗೂ ವಿವಿಧ ಸಾಂಸ್ಕೃತಿಕ ವೈಭವದೊಂದಿಗೆ ಭವ್ಯವಾದ ಮೆರವಣಿಗೆ ಮೂಲಕ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಬರುವುದು. ಬಳಿಕ ಅಮರಶ್ರೀ ಕಾಂತಮಂಗಲದ ಮೂಲಕ ಹಾದು ಹೋಗಿ ಶ್ರೀ ಕ್ಷೇತ್ರ ಗುತ್ಯಮ್ಮನ ಸನ್ನಿಧಿಯಲ್ಲಿ ರಾತ್ರಿ ತಂಗಲಿದೆ.

ನ.5ರಂದು ಪೂ.8ರಂದು ಶ್ರೀ ಗುತ್ಯಮ್ಮ ಕ್ಷೇತ್ರದಿಂದ ಹೊರಟು ಬೆಳ್ಳಿರಥ ಯಾತ್ರೆ ಕೆವಿಜಿ ಸರ್ಕಲ್ ಬಳಿಯಿಂದ ವಿವಿಧ ವೈಧಿಕ ಮತ್ತು ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೊರಡಲಿದೆ. ಸಿಂಗಾರಿ ಮೇಳ, ಭಜನಾ ತಂಡಗಳು, ಚೆಂಡೆ ವಾದ್ಯ ಮೇಳಗಳು, ಸ್ಯಾಕ್ಸೋಫೋನ್, ಚೆಂಡೆ ವಾದ್ಯ ಮೇಳಗಳು ಮೆರವಣಿಗೆಗೆ ಸಾಥ್ ನೀಡಲಿದೆ. ಬೆಳ್ಳಿರಥ ಯಾತ್ರೆಯ ಸಂದರ್ಭದಲ್ಲಿ ಹಾದು ಹೋಗುವ ವಿವಿಧ ಧಾರ್ಮಿಕ ಕ್ಷೇತ್ರಗಳ ಹಾಗೂ ವಿವಿಧ ಗ್ರಾಮಗಳ ಭಕ್ತರ ಸ್ವಾಗತದೊಂದಿಗೆ ವೈಭವದ ಬೆಳ್ಳಿರಥ ಯಾತ್ರೆ ಮುಂದುವರಿದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಲಿದೆ.

ನ.10ರಂದು ಬೆಳ್ಳಿರಥ ದೇವರಿಗೆ ಸಮರ್ಪಣೆ:
ಬೆಳ್ಳಿರಥವನ್ನು ನ.10ರಂದು ಶಾಸ್ತ್ರೋಕ್ತವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ.
ನ.9 ರಂದು ಸಂಜೆ 6ರಿಂದ ವಾಸ್ತು ರಕ್ಷೋಘ್ನ ಹೋಮ ಶುದ್ಧಿ ಕಲಶ, ವಾಸ್ತು ಬಲಿ ಮತ್ತು ವಾಸ್ತು ಪೂಜೆ ನಡೆಯಲಿದೆ. ನ.10ರಂದು
ಬೆಳಗ್ಗೆ 7ರಿಂದ ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ ಪೂರ್ವಾಹ್ನ ಗಂಟೆ 11ಕ್ಕೆ ಪೂರ್ಣಾಹುತಿಗೊಂಡು, ನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡಲಾಗುವುದು ಅದೇ ದಿನ ರಾತ್ರಿ 8ರಂದು ಪ್ರಥಮ ಬೆಳ್ಳಿರಥ ಸೇವೆಯನ್ನು ನೆರವೇರಿಸಲು ನಿಶ್ಚಯಿಸಲಾಗಿದೆ ಎಂದು ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ತಿಳಿಸಿದ್ದಾರೆ.















