ನವದೆಹಲಿ: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ದೇಶದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ತಿಳಿಸಿದ್ದಾರೆ.ದೆಹಲಿಯಲ್ಲಿ ಭೂ ಸೇನೆ,ನೌಕಾಪಡೆ, ವಾಯುಪಡೆಯ ಅಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು
ಮಾಹಿತಿ ನೀಡಿದ್ದಾರೆ.ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಾತನಾಡಿ, ‘ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವುದೇ ನಮ್ಮ ಟಾರ್ಗೆಟ್ ಆಗಿತ್ತು. ಅದರಂತೆಯೇ ನಾವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ 9 ಉಗ್ರರ ಅಡಗುತಾಣ ನಾಶ ಮಾಡಿದ್ದೇವೆ. ನಿಷೇಧಿತ ಲಷ್ಕರ್–ಎ–ತಯಬಾ, ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆಗಳ ತರಬೇತಿ ಕೇಂದ್ರಗಳನ್ನೂ ಧ್ವಂಸಗೊಳಿಸಿದ್ದೇವೆ’ ಎಂದು ಹೇಳಿದ್ದಾರೆ. ಪಾಕ್ನ ರಫೀಕಿ, ಮುರಿಯದ್, ಚಕ್ಲಾಲಾ, ರಹಿಮ್ಯಾರ್ ಖಾನ್, ಸುಕ್ಕೂರ್, ಚುನಿಯನ್ನ ಸೇನಾ ನೆಲೆಗಳು ಹಾಗೂ ಪಸ್ರೂರ್, ಸಿಯಾಲ್ಕೋಟ್ ವಾಯು ನೆಲೆಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಿ ಭಾರಿ ಹಾನಿ ಉಂಟು ಮಾಡಲಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ 35ರಿಂದ 40 ಯೋಧರು ಮೃತಪಟ್ಟಿರುವ ಸಾಧ್ಯತೆ ಇದೆ. ಎಲ್ಒಸಿ ಬಳಿ ನಮ್ಮ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ರಾಜೀವ್ ಘಾಯ್ ತಿಳಿಸಿದ್ದಾರೆ. ಗಡಿ ಭಾಗದ 26 ಪ್ರದೇಶಗಳ ಮೇಲೆ ಪಾಕ್ ಸೇನೆ ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. 700ಕ್ಕೂ ಹೆಚ್ಚು ಪಾಕ್ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನವು ಶ್ರೀನಗರ, ಅವಂತಿಪುರ ಮತ್ತು ಉಧಂಪುರ ವಾಯುನೆಲೆಗಳಲ್ಲಿನ ಮೆಡಿಕೇರ್ ಕೇಂದ್ರ ಮತ್ತು ಶಾಲಾ ಆವರಣ, ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡಿದೆ. ಆದರೆ, ನಾವು ಪಾಕ್ ಸೈನಿಕರು, ನಾಗರಿಕರನ್ನು ಗುರಿಯಾಗಿಸಿ ಯಾವುದೇ ದಾಳಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ 11 ವಾಯುನೆಲೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಪಹಲ್ಗಾಮ್ ಸಂತ್ರಸ್ತರಿಗೆ ನ್ಯಾಯ ಒದಗಿಸಿದ್ದೇವೆ. ನಾವು ನಡೆಸಿದ ಪ್ರತಿಯೊಂದು ದಾಳಿಗೂ ಸಾಕ್ಷಿ ಇದೆ. ಎಂದು ಅವರು ತಿಳಿಸಿದ್ದಾರೆ.
ಮೊದಲಿಗೆ ಪಾಕಿಸ್ತಾನದ ಡಿಜಿಎಂಒ, ಶನಿವಾರ ಮಧ್ಯಾಹ್ನ 3:30ಕ್ಕೆ ನಮಗೆ ಕರೆ ಮಾಡಿ ತುರ್ತು ಕದನ ವಿರಾಮಕ್ಕೆ ಮನವಿ ಮಾಡಿದ್ದರು ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದರೆ ಪ್ರತಿದಾಳಿ ನಡೆಸುವಂತೆ ಸೇನಾ ಕಮಾಂಡರ್ಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ.
ಮೇ 10-11ರ ರಾತ್ರಿ ನಡೆದ ಕದನ ವಿರಾಮ ಮತ್ತು ವಾಯುಪ್ರದೇಶ ಉಲ್ಲಂಘನೆಯ ಪರಿಣಾಮವಾಗಿ ಸೇನಾ ಮುಖ್ಯಸ್ಥರು ಪಶ್ಚಿಮ ಗಡಿಗಳ ಸೇನಾ ಕಮಾಂಡರ್ಗಳೊಂದಿಗೆ ಭದ್ರತಾ ಪರಿಸ್ಥಿತಿ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.