ಸುಳ್ಯ:ನಮ್ಮ ಸಂವಿಧಾನವನ್ನು ಉಳಿಸುವ ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಜಗತ್ತಿನ ಅತ್ಯಂತ ಎತ್ತರಕ್ಕೆ ಏರಿಸುವ ಸಂಕಲ್ಪವನ್ನು ಪ್ರತಿಯೊಬ್ಬ ಭಾರತೀಯರೂ ಮಾಡಿಕೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಾಜಿ ಸಚಿವರಾದ ಎನ್. ಮಹೇಶ್ ಹೇಳಿದ್ದಾರೆ. ಮಂಥನ ವೇದಿಕೆ ಸುಳ್ಯ ಮತ್ತು ಅಧಿವಕ್ತಾ ಪರಿಷತ್ ಸುಳ್ಯ ಇದರ ಸಹಯೋಗದೊಂದಿಗೆ ಜ.27 ರಂದು ಸುಳ್ಯದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ‘ಸಂವಿಧಾನ ಬದಲಾಯಿಸಿದ್ದು ಯಾರು’? ಪುಸ್ತಕದ ಕುರಿತ ಗೋಷ್ಠಿಯಲ್ಲಿ
ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರತಿಯೊಂದು ಧರ್ಮಕ್ಕೆ ಒಂದೊಂದು ಧರ್ಮಗ್ರಂಥ ಇದ್ದಂತೆ 140 ಕೋಟಿ ಜನರ ರಕ್ಷಣೆ ಮಾಡುತ್ತಿರುವ ಸಂವಿಧಾನ ಭಾರತೀಯರೆಲ್ಲರ ಮತ್ತು ಭಾರತ ಆಡಳಿತ ವ್ಯವಸ್ಥೆಯ ಧರ್ಮ ಗ್ರಂಥ. ಸಂವಿಧಾನದ ಆಶಯವನ್ನು ಅನುಷ್ಠಾನ ಮಾಡಲು, ಇಡೀ ದೇಶಕ್ಕೆ ಅಮೃತ ಉಣಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಅಟಲ್ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಹಲವು ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದೆ ಎಂದು ಅವರು ಹೇಳಿದರು.

‘ಸಂವಿಧಾನ ಬದಲಾಯಿಸಿದ್ದು ಯಾರು’ ಪುಸ್ತಕದ ಲೇಖಕರಾದ ವಿಕಾಸ್ ಕುಮಾರ್ ಪಿ ವಿಚಾರ ಮಂಡನೆ ಮಾಡಿ’ ಕಾಂಗ್ರೆಸ್, ಬಿಜೆಪಿ, ಇತರ ಸರಕಾರಗಳ ಅವಧಿಯಲ್ಲಿ ಒಟ್ಟು 106 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ. ಈ ಸಂವಿಧಾನ ತಿದ್ದುಪಡಿಯನ್ನು ಅವಲೋಕಿಸಿದರೆ, ಮತ್ತು ಅದನ್ನು ಸೂಕ್ಷ್ಮವಾಗಿ ಅರ್ಥೈಸಿದರೆ ಸಂವಿಧಾನವನ್ನು ಬದಲಾಯಿಸಿರುವುದು ಯಾರು ಎಂದು ಅರ್ಥ ಆಗುತ್ತದೆ ಎಂದು ಹೇಳಿದರು.

ಬಳಿಕ ಸಂವಾದ ನಡೆಯಿತು.ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ ಕಾರ್ಯಕ್ರಮ ಉದ್ಘಾಟಿಸಿದರು.ವಕೀಲ ಜಗದೀಶ್ ಸ್ವಾಗತಿಸಿ, ರಾಜೇಶ್ ಮೇನಾಲ ವಂದಿಸಿದರು. ಕಿಶನ್ ಜಬಳೆ ಕಾರ್ಯಕ್ರಮ ನಿರೂಪಿಸಿದರು. ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ ಸೇರಿ ಹಲವು ಮಂದಿ ಪ್ರಮುಖರು ಭಾಗವಹಿಸಿದ್ದರು.