ಬೆಳ್ತಂಗಡಿ: ಕರ್ನಾಟಕದ ಪ್ರಥಮ ಸೀರೋ ಮಲಬಾರ್ ಧರ್ಮಪ್ರಾಂತ್ಯವಾದ ಬೆಳ್ತಂಗಡಿ ಧರ್ಮಪ್ರಾಂತ್ಯ ಹಾಗೂ ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕುಯಿಯವರ ಧರ್ಮಾಧ್ಯಕ್ಷ ದೀಕ್ಷೆಯ ರಜತ ಮಹೋತ್ಸವ ಆಚರಣೆ ಬೆಳ್ತಂಗಡಿ ಬಿಷಪ್ ಹೌಸ್ ವಠಾರದಲ್ಲಿ ನಡೆಯಿತು. ಸಿರೋ ಮಲಬಾರ್ ಕ್ಯಾಥೋಲಿಕ್ ಚರ್ಚ್ ಇದರ ಮೇಜರ್ ಆರ್ಚ್ ಬಿಷಪ್ ರಾಫೇಲ್ ತಟ್ಟಿಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರನ್ನು ಗೌರವಿಸಿ ಮಾತನಾಡಿ, ‘ ಸಮಾಜದಲ್ಲಿ
ಹಿಂದುಳಿದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಸೇವೆ ನೀಡುವ ಮೂಲಕ ಅಂತವರನ್ನು ಮುಖ್ಯವಾಹಿನಿಗೆ ತರುವುದು ಧರ್ಮಪ್ರಾಂತ್ಯದ ಮುಖ್ಯ ಗುರಿಯಾಗಿದೆ ‘ಎಂದರು.
![](https://thesulliamirror.com/wp-content/uploads/2024/02/IMG_20240212_113917.jpg)
ವಿದ್ಯಾನಿಧಿ ಯೋಜನೆ ಬಿಡುಗಡೆಗೊಳಿಸಿ ಮಾತನಾಡಿದ
ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್
‘ಕಷ್ಟದಲ್ಲಿರುವವರಿಗೆ ಸದಾ ಸಹಾಯಹಸ್ತ ನೀಡುವವರು ಕ್ರೈಸ್ತ ಸಮುದಾಯದವರು ಎಂದರು. ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಿಂದ 1 ಕೋಟಿ 65 ಲಕ್ಷ ಕುಟುಂಬಗಳಿಗೆ ನೆರವಾಗಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಜಾತಿ ಮತ ನೋಡದೆ ಜಾರಿ ಮಾಡಲಾಗಿದೆ ಎಂದರು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ‘ ಕಳೆದ 25 ವರ್ಷಗಳಿಂದ ಬೆಳ್ತಂಗಡಿ ಧರ್ಮಪ್ರಾಂತ್ಯ ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಸೇವೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯನ್ನು ಬಯಸಿದೆ. 25 ವರ್ಷಗಳ ಹಿಂದೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದ ಸಂದರ್ಭದಲ್ಲೂ ಧರ್ಮಪ್ರಾಂತ್ಯ ರಚನೆಯಾಗಿ ಜನರಿಗೆ ಸೇವೆ ಮಾಡಿ ಜನರ ಬದುಕು ಬೆಳಗಿರುವುದು ಮುಂದಿನ ದಿನಗಳಲ್ಲಿ ದಿಕ್ಸೂಚಿಯಾಗಿದೆ. ಬಿಷಪ್ ರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ’ ಎಂದರು.
![](https://thesulliamirror.com/wp-content/uploads/2024/02/IMG_20240212_113849.jpg)
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಬಡ ಕುಟುಂಬಗಳಿಗೆ ಮನೆ ಹಸ್ತಾಂತರಿಸಿ ಮಾತನಾಡಿ, ‘ ಭಾರತೀಯತೆಯನ್ನು ಒಪ್ಪಿಕೊಂಡ ಕ್ರೈಸ್ತ ಸಮಾಜದ ಜನರು ಕಷ್ಟದಿಂದ ಜೀವನ ಕಂಡುಕೊಂಡವರು. ಸೌಹಾರ್ದತೆಯ ಬಾಳು ನಡೆಸುವ ಇವರು ಕೃಷಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಕ್ರೈಸ್ತ ಸಮುದಾಯ ವಿದ್ಯೆ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದು ಜಿಲ್ಲೆಯ ಅಭಿವೃದ್ಧಿಗೆ ಕಾರಣವಾಗಿದೆ. ಎಲ್ಲಾ ಸಮುದಾಯದೊಂದಿಗೆ ಪ್ರೀತಿ ಸ್ನೇಹದೊಂದಿಗೆ ಸಾಮರಸ್ಯದ ಬದುಕು ಬೆಳೆಸಿಕೊಂಡಿದೆ ಎಂದರು.
ಧರ್ಮಪ್ರಾಂತ್ಯದ ಧರ್ಮಗುರುಗಳಾಗಿ 25 ವರ್ಷ ಪೂರೈಸಿದ ಬಿಷಪ್ ಲಾರೆನ್ಸ್ ಮುಕ್ಕುಯಿ ಅಭಿನಂದನೆ ಸ್ವೀಕರಿಸಿ ಮಾತನಾಡಿ,’ ದೇವರ ಅಪಾರವಾದ ಆಶೀರ್ವಾದದ ಮೂಲಕ ಸಮಾಜದ ಅಭಿವೃದ್ಧಿಗೆ ಅಳಿಲು ಸೇವೆಯನ್ನು ಮಾಡುವ ಪ್ರಯತ್ನ ಮಾಡಲಾಗಿದೆ. ಎಲ್ಲಾ ವರ್ಗದ ಜನರ ಉದಾತ್ತವಾದ ಅಭಿಮಾನದ ಮೂಲಕ ಏಳು-ಬೀಳುಗಳಲ್ಲಿ ಆಧಾರಸ್ತಂಭವಾಗಿರುವುದು ಸ್ಮರಣೀಯ. ಎಂದರು.
![](https://thesulliamirror.com/wp-content/uploads/2024/02/IMG_20240212_113858.jpg)
ತಲಶ್ಯೇರಿ ಆರ್ಚ್ ಬಿಷಪ್ ಜೋಸೆಪ್ ಪಾಂಪ್ಲಾನಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಹರೀಶ್ ಪೂಂಜ, ಅಶೋಕ್ ಕುಮಾರ್ ರೈ, ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾಡೋ, ಮಂಗಳೂರು ಬಿಷಪ್ ಪೀಟರ್ ಪೌಲ್ ಸಲ್ದಾನ ಮುಂತಾದವರು ಮಾತನಾಡಿದರು.
ವೇದಿಕೆಯಲ್ಲಿ ಪುತ್ತೂರು ಬಿಷಪ್ ಗೀವರ್ಗೀಸ್ ಮಾರ್ ಮಕೋರಿಸ್, ಕೋಟ್ಟಯಂ ಆರ್ಚ್ ಬಿಷಪ್ ಮಾರ್ ಮ್ಯಾಥ್ಯೂ ಮೂಲಕ್ಕಟ್, ಬ್ರಹ್ಮಾವರ ಬಿಷಪ್ ಯಾಕೋಬ್ ಮಾರ್ ಎಲಿಯಾಸ್, ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಗಂಗಾಧರ ಗೌಡ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಕ್ರೈಸ್ತ ಅಭಿವೃದ್ದಿ ಮಂಡಳಿ ಅಧ್ಯಕ್ಷ ಜೆ.ಆರ್.ಲೋಬೋ , ಕ್ರೈಸ್ತ ಮುಖಂಡ ಐವನ್ ಡಿಸೋಜಾ, ರಕ್ಷಿತ್ ಶಿವರಾಂ, ಬಿಟ್ಟಿ ಬಿ ನೆಡುನಿಲಂ, ಸೇವ್ಯರ್ ಪಾಲೇಳಿ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಫಾ. ಲಾರೆನ್ಸ್ ಮುಕ್ಕುಯಿ ಅವರನ್ನು ಡಾ. ವೀರೇಂದ್ರ ಹೆಗ್ಗಡೆಯವರು ಗೌರವಿಸಿದರು.ಧರ್ಮಪ್ರಾಂತ್ಯದ ವಿಕಾರ್ ಜನರಲ್ ಜೋಸೆಫ್ ವಲಿಯಪರಂಬಿಲ್ ಸ್ವಾಗತಿಸಿದರು. ಲಿಲ್ಲಿ ಆಂಟನಿ ವಂದಿಸಿದರು. ಫಾ. ಜೋಬಿ ಪಲ್ಲಟ್ ಹಾಗೂ ಏಂಜಲ್ ಉಡುಪಿ ಕಾರ್ಯಕ್ರಮ ನಿರೂಪಿಸಿದರು.
ರಜತ ವರ್ಷಾಚರಣೆ ಅಂಗವಾಗಿ ದೀವ್ಯಬಲಿಪೂಜಾರ್ಪಣೆ ನಡೆಯಿತು. ಕರ್ನಾಟಕ ಹಾಗೂ ಕೇರಳದಿಂದ ಶ್ರೇಷ್ಠ ಮಹಾ ಧರ್ಮಾಧ್ಯಕ್ಷರು, ಧರ್ಮಗುರುಗಳು, ಧರ್ಮಭಗಿನಿಯರು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ರಜತ ಸಂಭ್ರಮದ ಬಲಿಪೂಜೆ ನಡೆಯಿತು.
ಧರ್ಮಪ್ರಾಂತ್ಯದ ಗಾಯಕಿಯರು ಪ್ರಾರ್ಥನೆ ನೆರವೇರಿಸಿದರು.