ಬೆಳ್ಳಾರೆ:ಮಕ್ಕಳಲ್ಲಿ ಭಾವಕೋಶ ಬೆಳೆಸುವ ಅನಿವಾರ್ಯತೆ ಇದೆ. ಅದಕ್ಕಾಗಿ ಭಾರತೀಯ ಬದುಕು ಮತ್ತು ಭಾರತೀಯ ಶಿಕ್ಷಣ ಪದ್ಧತಿ ಬೇಕು ಎಂದು ಮೈಸೂರು ಸೈಂಟ್ ಫಿಲೋಮಿನಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು, ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇ ಗೌಡ ಅವರು ಹೇಳಿದ್ದಾರೆ. ಬೆಳ್ಳಾರೆ ಪಬ್ಲಿಕ್ ಸ್ಕೂಲ್ನ ವಸಂತ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ‘ಅಧ್ಯಯನ ಅಧ್ಯಾಪನ’ ಉಪನ್ಯಾಸ ಹಾಗೂ
ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಕಲಿಕೆ ನಿರಂತರವಾದುದು, ಶಿಕ್ಷಕರಿಗೆ ಸಂವೇದನಾಶೀಲತೆ ಬೇಕು, ತಾಯಿಯ ಪ್ರೀತಿಯಿಂದ ವಿದ್ಯಾರ್ಥಿಗಳನ್ನು ಸಲಹಿ ವಿದ್ಯಾರ್ಥಿಗಳ ಉತ್ಸಾಹ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಎಂದ ಅವರು ಶಿಕ್ಷಕರು ಬದಲಾವಣೆಗೆ ಒಗ್ಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಂಶುಪಾಲ ಸೂರ್ಯನಾರಾಯಣ ಬಿ.ವಿ.ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ವಸಂತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಚಾಲಕ ಎಸ್.ಎನ್.ಮನ್ಮಥ, ಅಧ್ಯಕ್ಷೆ ರಾಜೀವಿ ಆರ್.ರೈ, ಎಸ್ಡಿಎಂಸಿ ಉಪಾಧ್ಯಕ್ಷ ಶ್ರೀನಾಥ್ ರೈ ಬಾಳಿಲ,ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್.ಯು.ಕೆ, ಅಕ್ಷರ ದಾಸೋಹ ತಾಲೂಕು ಸಂಯೋಜಕಿ ವೀಣಾ, ಪ್ರೌಢ ಶಾಲಾ ಉಪಪ್ರಾಂಶುಪಾಲೆ ಉಮಾಕುಮಾರಿ ,ಪ್ರಾಥಮಿಕ ಶಾಲಾ ಮುಖ್ಯ ಗುರು ಮಾಯಿಲಪ್ಪ ಜಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಸಂತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ ಕೃಷ್ಣೇ ಗೌಡರವರ ಪರಿಚಯ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಜನಾರ್ಧನ ಎನ್.ಸ್ವಾಗತಿಸಿ, ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೃಷ್ಣೇ ಗೌಡರವರನ್ನು ಸನ್ಮಾನಿಸಲಾಯಿತು.