ಸುಳ್ಯ: ಅಯ್ಯನಕಟ್ಟೆ ಜಾತ್ರೆಯ ಅಂಗವಾಗಿ ಜ. 27ರಂದು ವಿವಿಧ ಕಾರ್ಯಕ್ರಮಗಳ ನಡೆಯಿತು. ಬೆಳಿಗ್ಗೆ ಗಣಪತಿ ಹವನ ಸಹಿತ ಚಂಡಿಕಾ ಹವನ ಮತ್ತು ದುರ್ಗಾ ಪೂಜೆ, ದೈವಗಳಿಗೆ ವಿಶೇಷ ತಂಬಿಲ ಸೇವೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಕುಕ್ಕುತ್ತಡಿಯ ಶ್ರೀ ದೈವಗಳ ಬಚ್ಚೆಲ್ಕಟ್ಟೆಯಲ್ಲಿ ತಂಬಿಲ ಸೇವೆ ನಡೆಯಿತು. ಕಳಂಜ ಯುವಕ ಮಂಡಲ ಪ್ರವರ್ತಿತ
ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಕೋಟೆಮುಂಡುಗಾರು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕಳಂಜ, ಬ್ರಾಹ್ಮರಿ ಮಹಿಳಾ ಭಜನಾ ಮಂಡಳಿ ತಂಟೆಪ್ಪಾಡಿ ಇವರಿಂದ ಮೂರುಕಲ್ಲಡ್ಕದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ಉಳ್ಳಾಕುಲು ದೈವಕ್ಕೆ ಎಣ್ಣೆಬೂಳ್ಯ ನೀಡುವ ಕಾರ್ಯಕ್ರಮ ನಡೆಯಿತು.

ಜ.28ರಂದು ಪ್ರಾತಃಕಾಲ 5:30ಕ್ಕೆ ಮೂರುಕಲ್ಲಡ್ಕ ದೈವಸ್ಥಾನದಿಂದ ಸಪರಿವಾರ ಶ್ರೀ ಇಷ್ಟದೇವತಾ ಉಳ್ಳಾಕುಲು ಸಪರಿವಾರ ದೈವಗಳ ಹಾಗೂ ತೋಟದ ಮೂಲೆ ಸ್ಥಾನದಿಂದ ರುದ್ರಚಾಮುಂಡಿ ದೈವದ ಕಿರುವಾಲು ಹೊರಟು ಬೆಳಿಗ್ಗೆ 7.00ರಿಂದ ಅಯ್ಯನಕಟ್ಟೆ ಕಲ್ಲಮಾಡದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವದ ಸಿರಿಮುಡಿ ಏರುವುದು, ನರ್ತನ ಸೇವೆ, ಬಟ್ಟಲು ಕಾಣಿಕೆ, ಸಿರಿಮುಡಿ ಗಂಧ ಪ್ರಸಾದ ವಿತರಣೆಯಾಗಿ ತದನಂತರ, ಕೊಡಮಣಿತ್ತಾಯ, ಕೊಲ್ಲಿಕುಮಾರ, ಪುರುಷ ದೈವ, ಮೈಸಂದಾಯ ದೈವಗಳ ಕಟ್ಟುಕಟ್ಟಳೆಯ ನೇಮ, ಬೂಳ್ಯ ವಿತರಣೆ ನಡೆಯಲಿದೆ. ಪೂ. 11:30 ರಿಂದ ರುದ್ರಚಾಮುಂಡಿ ದೈವದ ನರ್ತನ ಸೇವೆ, ಬೂಳ್ಯ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
