*ಗಣೇಶ್ ಮಾವಂಜಿ.
ಮುಖ ಮನಸ್ಸಿನ ಕನ್ನಡಿ ಎಂಬುದು ಅಂದಿನ ಗಾದೆ ಮಾತು. ಆಧುನಿಕ ಯುಗದಲ್ಲಿ ವಾಟ್ಸಾಪ್ ಸ್ಟೇಟಸ್ ಮನಸ್ಸಿನ ಕನ್ನಡಿ ಎಂದರೆ ತಪ್ಪಾಗಲಾರದು.ಏಕೆಂದರೆ ವ್ಯಕ್ತಿಯ ಮನಸ್ಸಿನ ಸ್ಥಿತಿಗತಿ ನಿಮಗೆ ಗೊತ್ತಾಗಬೇಕೆಂದರೆ ಆತನ ವಾಟ್ಸಾಪ್ ಸ್ಟೇಟಸ್ನತ್ತ ಕಣ್ಣು ಹಾಯಿಸಿದರೆ ಸಾಕಾಗುತ್ತದೆ.ಅಂದಿನ ಗಾದೆ ಮಾತು ಇಂದಿಗೂ ಪ್ರಸ್ತುತವೇ. ಏಕೆಂದರೆ ವ್ಯಕ್ತಿ ಸಂತೋಷವಾಗಿದ್ದಾನೋ, ದುಃಖದಲ್ಲಿದ್ದಾನೋ ಎಂಬುದು ಆತನ ಮುಖವನ್ನು ನೋಡಿದಾಗ ಖಂಡಿತವಾಗಿಯೂ ಗೊತ್ತಾಗಿಬಿಡುತ್ತದೆ.ಆದರೆ
ಯಾರನ್ನೇ ಆದರೂ ಭೇಟಿಯಾಗಿ ಮಾತನಾಡುವಷ್ಟು ಪುರ್ಸೊತು ಈಗ ಯಾರಿಗೂ ಇಲ್ಲವಾಗಿದೆ. ಹೀಗಾಗಿ ಪರಿಚಯಸ್ಥರು ಹೇಗಿದ್ದಾರೆ ಎಂದರಿವಾಗಬೇಕಿದ್ದರೆ ಅವರ ವಾಟ್ಸಾಪ್ ಸ್ಟೇಟಸ್ ನೋಡಿಬಿಡಿ.ನಿಮಗೆಲ್ಲವೂ ಅರಿವಾಗಿ ಬಿಡುತ್ತದೆ.
ತುಂಬಾ ಸಂತೋಷದಲ್ಲಿದ್ದರೆ ಗೆಳೆಯ, ಗೆಳತಿಯರ ಜೊತೆ ಪಾರ್ಟಿ ಮಾಡುವ ಫೊಟೋ, ಪಿಕ್ನಿಕ್ ಅಥವಾ ದೂರದೂರಿಗೆ ಪ್ರವಾಸಕ್ಕೆ ಹೋದರೆ ಅರೆಬರೆ ಬಟ್ಟೆಯಲ್ಲಿ ನಾಲಗೆ ಹೊರಗೆ ಹಾಕಿ ಪೋಸ್ ನೀಡುವ ಫೊಟೋ, ಸಂಬಂಧಿಕರೋ, ಒಡನಾಡಿಗಳೋ ಅಥವಾ ತೀರಾ ಹತ್ತಿರದವರು ಯಾರಾದರೂ ಕಣ್ಮುಚ್ಚಿದರೆ ಅವರ ಫೊಟೋದೊಂದಿಗೆ ‘ಓಂ ಶಾಂತಿ’ ಎಂಬ ಪದ ಜೊತೆಗಿರುತ್ತದೆ.ಮದುವೆಗೆ ಹೋದರೆ ಢಾಳಾಗಿ

ಲಿಪ್ ಸ್ಟಿಕ್ ಮೆತ್ತಿ ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸುವ ನಾರಿಯರು, ಪುರುಷರಾದರೆ ಬೆಳ್ಳಗಾದ ಕೂದಲು, ಗಡ್ಡ ಮೀಸೆಯನ್ನೂ ಕಡುಕಪ್ಪು ಮಾಡಿ ತೆಗೆದ ಸೆಲ್ಫಿಗಳು ವಾಟ್ಸಾಪ್ ಸ್ಟೇಟಸ್ನಲ್ಲಿ ಕಾಣಿಸುತ್ತವೆ. ಮೈತುಂಬಾ ಚಿನ್ನಾಭರಣ, ಬೆರಳು ತುಂಬಾ ಉಂಗುರ ಅಥವಾ ಮಿರುಗುವ ಜುಬ್ಬಾ ಧರಿಸಿದ ಫೋಟೊ ಕಂಡರಂತೂ ಹತ್ತಿರ ಸಂಬಂಧಿಯ ಮದುವೆ ಎಂದು ಅರಿತುಕೊಳ್ಳಬಹುದು.
ಇನ್ನು ಯಾರ ಜೊತೆಗಾದರೂ ಮನಸ್ತಾಪವೋ, ಅಥವಾ ದ್ವೇಷವೋ, ಜಗಳವೋ ಆಗಿ ಮನಸ್ಸಿಗೆ ಬೇಸರವಾದರೂ ಅದು ಅವರ ವಾಟ್ಸಾಪ್ ಸ್ಟೇಟಸ್ನಲ್ಲಿ ಜಗಜ್ಜಾಹೀರು ಆಗಿಬಿಡುತ್ತದೆ. ‘ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂಬ ವೇದ ವಾಕ್ಯ ಗೋಚರಿಸಿದರೆ ಅವರಿಗೆ ಯಾರೋ ಅನ್ಯಾಯ ಮಾಡುತ್ತಿದ್ದಾರೆ ಎಂದು ಸ್ಟೇಟಸ್ ಓದಿದವರು ಅಂದುಕೊಳ್ಳಬೇಕು. ನಾಯಿ ಬೊಗಳಿದರೆ ದೇವಸ್ಥಾನ ಹಾಳಾಗುತ್ತದೆಯೇ? ಎಂಬಂತಹ ವಾಕ್ಯ ಯಾರದಾದರೂ ಸ್ಟೇಟಸ್ನಲ್ಲಿ ಕಂಡಿತೆಂದಾದರೆ ಆ ವ್ಯಕ್ತಿಯ ಬಗ್ಗೆ ಇನ್ಯಾರೋ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಸುಲಭವಾಗಿ ಅರ್ಥೈಸಬಹುದು.
ವಾಟ್ಸಾಪ್ ಸ್ಟೇಟಸ್ಗಳು ಮನಸ್ಸಿನ ಭಾವನೆಗಳನ್ನು ಮಾತ್ರ ಹಂಚಿಕೊಳ್ಳುವುದಲ್ಲ. ದಿನವೂ ಮಾಡುವ ತಿಂಡಿಗೆ ಬದಲಾಗಿ ಹೊಸ

ರುಚಿಯ ಅಡುಗೆಗಳು ತಯಾರಾದರೂ ಸ್ಟೇಟಸ್ನಲ್ಲಿ ಜಾಗ ಪಡೆದುಕೊಳ್ಳುತ್ತವೆ. ದಿನವೂ ಜಗಿಯುವ ಬಡ್ರೊಟ್ಟಿಯ ಬದಲಾಗಿ ಮಸಾಲೆ ದೋಸೆಯೋ, ಪೂರಿ ಬಾಜಿಯೋ ಅಥವಾ ಟಿವಿಯಲ್ಲಿ ಬರುವ ಹೊಸಹೊಸ ಅಡುಗೆಗಳನ್ನು ಮಾಡುವ ಪ್ರಯತ್ನ ಮನೆಯಲ್ಲೂ ಆದರೆ ಅದೂ ಕೂಡಾ ಸ್ಟೇಟಸ್ ನಲ್ಲಿ ಪ್ರತ್ಯಕ್ಷವಾಗಿಬಿಡುತ್ತದೆ! ಅಷ್ಟರಮಟ್ಟಿಗೆ ವಾಟ್ಸಾಪ್ ಸ್ಟೇಟಸ್ ಪ್ರಸಿದ್ಧಿ ಪಡೆದುಕೊಂಡಿದೆ. ಬದುಕಿನ ಭಾಗವಾಗಿ ಬಿಟ್ಟಿದೆ.
ಮೊನ್ನೆ ಮೊನ್ನೆ ಪಿಯುಸಿ ಫಲಿತಾಂಶ ಹೊರಬಿದ್ದಿದೆ.
ಎಸ್ಎಸ್ಎಲ್ ಸಿ ರಿಸಲ್ಟ್ ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ. ಡಿಸ್ಟಿಂಕ್ಷನ್ನಲ್ಲಿ ಪಾಸಾದವರ ಮಕ್ಕಳ ಮಾರ್ಕ್ ಕಾರ್ಡ್ ಸಮೇತ ಅವರ ಫೊಟೋ ವಾಟ್ಸಾಪ್ ಸ್ಟೇಟಸ್ನಲ್ಲಿ ಕಾಣಸಿಗುತ್ತವೆ. ತಮ್ಮ ಮಕ್ಕಳಿಗೆ ನಿರೀಕ್ಷೆಯಷ್ಟು ಅಂಕಗಳು ಬರದಿದ್ದರೆ ಅಥವಾ ಫೈಲ್ ಆದರೆ ಅಂತವರ ಪೋಷಕರ ಮೊಬೈಲ್ ನ ಸ್ಟೇಟಸ್ ಸದ್ದು ಮಾಡುವುದೇ ಇಲ್ಲ. ಏಕೆಂದರೆ ಯಾರೂ ಕೂಡಾ ತಮ್ಮ ಸ್ಟೇಟಸ್ಗೆ ಧಕ್ಕೆ ಬರುವ ಕೆಲಸಕ್ಕೆ ಮುಂದಾಗಲಾರರು.
ಸದಾ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾ ಸ್ಟೇಟಸ್ ಮೈಂಟೈನ್ ಮಾಡುತ್ತಿರುವವರು ಏಕಾಏಕಿ ಫೊಟೋ ಹಾಕುವುದನ್ನು ಬಿಟ್ಟಿದ್ದಾರೆ ಎಂದರೆ ಅವರು ಬ್ಯಸಿ ಆಗಿದ್ದಾರೆ ಎಂದು ಅರ್ಥೈಸಿಕೊಳ್ಳಬಹುದು. ಅಥವಾ ಅವರ ಮನಸ್ಸಿಗೇನೋ ಬೇಸರ ಅಡರಿದೆ ಎಂದು

ಅಂದಾಜಿಸಬಹುದು.
ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ. ಆದರೆ ವಾಟ್ಸಾಪ್ ಸ್ಟೇಟಸ್ನಲ್ಲಿ ಫೊಟೋ, ವಿಡಿಯೋ ಅಪ್ಲೋಡ್ ಮಾಡುವ ಕ್ರಮ ಸದ್ಯಕ್ಕಂತೂ ಬದಲಾಗದು. ಏಕೆಂದರೆ ಮೊಬೈಲ್ ಬಳಕೆ ಸರ್ವತ್ರ, ಸರ್ವವ್ಯಾಪಿ ಎಂಬಂತಾಗಿದೆ. ಫೋಟೋಗಳನ್ನು ಹಾಕಿ ಸದಾ ಸ್ಟೇಟಸ್ ಮೈಂಟೈನ್ ಮಾಡುವ ಮಂದಿ ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಏಕೆಂದರೆ ವಾಟ್ಸಾಪ್ ಸ್ಟೇಟಸ್ ಬರಿದಾದರೆ ಉಸಿರು ನಿಂತಿರಬಹುದೆಂದು ಅಂದಾಜಿಸುವ ಮಂದಿಗೂ ಈ ಆಧುನಿಕ ಯುಗದಲ್ಲಿ ಬರವಿಲ್ಲ. ಆದುದರಿಂದ ಸ್ಟೇಟಸ್ ಅಪ್ಲೋಡ್ ಮಾಡುವುದು ಇಂದಿನ ಬದುಕಿನ ನಿತ್ಯದ ಅಗತ್ಯತೆಗಳಲ್ಲೊಂದು..!

(ಗಣೇಶ್ ಮಾವಂಜಿ ಪತ್ರಕರ್ತರು, ಲೇಖಕರು)