ಸುಳ್ಯ:ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 3 ದಿನಗಳಿಂದ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಸೋಮವಾರದಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಕಂಡು ಬಂದಿದೆ. ಬಹುತೇಕ ಕಡೆಗಳಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದೆ. ಸೋಮವಾರ ಪಂಪ್ ಕೆಟ್ಟು ಹೋದ ಕಾರಣ ನೀರು ಸರಬರಾಜು ಸ್ಥಗಿತವಾಗಿತ್ತು.ದುರಸ್ತಿ ಮಾಡಿದರೂ
ಮತ್ತೆ ಮಂಗಳವಾರ ಪಂಪ್ ಕೆಟ್ಟು ಹೋಗಿತ್ತು. ಇದರಿಂದ ಎರಡು ದಿನ ನೀರು ಸರಬರಾಜು ವ್ಯತ್ಯಯ ಆಗಿತ್ತು. ಬುಧವಾರ ದಿನ ಪೂರ್ತಿ ವಿದ್ಯುತ್ ಸರಬರಾಜು ಸ್ಥಗಿತಗೊಂಡ ಕಾರಣ ನೀರಿನ ಸರಬರಾಜು ನಿಂತು ಹೋಗಿತ್ತು. ಗುರುವಾರವೂ ಸಮರ್ಪಕವಾಗಿ ನೀರು ಸರವರಾಜು ಪುನಃ ಸ್ಥಾಪನೆಯಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದರು.
ಎಲ್ಲಾ ವಾರ್ಡ್ಗಳಲ್ಲಿಯೂ ನೀರು ಸರಬರಾಜು ವ್ಯತ್ಯಯ ಆಗಿ ಕಡು ಬೇಸಿಗೆಯಲ್ಲಿ ನೀರಿಲ್ಲದೆ ಸಮಸ್ಯೆ ಎದುರಾಗಿದೆ.
![](https://thesulliamirror.com/wp-content/uploads/2024/02/IMG_20240229_132836.jpg)
ಡ್ಯಾಮ್ ತುಂಬಾ ನೀರಿದ್ದರೂ ಕುಡಿಯಲು ನೀರಿಲ್ಲ:
ಸುಳ್ಯ ಮುಟ್ಲುವಿನಲ್ಲಿ ಡ್ಯಾಮ್ ನಿರ್ಮಾಣ ಆಗಿದ್ದು ಡ್ಯಾಮ್ ಪೂರ್ತಿ ನೀರು ಶೇಖರಣೆ ಆಗಿದೆ. ಡ್ಯಾಮ್ ಪೂರ್ತಿ ನೀರಿದ್ದರೂ ಕುಡಿಯಲು ನೀರಿಲ್ಲ ಎಂಬ ಪರಿಸ್ಥಿತಿ ಇಲ್ಲಿನ ಜನರದ್ದು. 50 ಹೆಚ್ಪಿ 2 ಪಂಪ್ ಮತ್ತು 45 ಹೆಚ್ಪಿಯ ಒಂದು ಪಂಪ್ನ ಮೂಲಕ ನೀರು ಸರಬರಾಜಾಗುತ್ತಿದೆ. ಪಂಪ್ಗಳ ದುರಸ್ತಿ ಹಾಗೂ ವಿದ್ಯುತ್ ವ್ಯತ್ಯಯದಿಂದ ನೀರು ಸರಬರಾಜು ನಿಂತು ಹೋಗಿದೆ.
![](https://thesulliamirror.com/wp-content/uploads/2024/02/IMG_20240229_132827.jpg)
ನೀರು ವ್ಯತ್ಯಯ- ಎಂ.ವೆಂಕಪ್ಪ ಗೌಡ ಗರಂ
ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಿರುವುದಕ್ಕೆ ನಗರ ಪಂಚಾಯತ್ ವಿಪಕ್ಷ ಸದಸ್ತ ಎಂ ವೆಂಕಪ್ಪ ಗೌಡ ಇಂದು ನಗರ ಪಂಚಾಯತ್ಗೆ ಭೇಟಿ ನೀಡಿ ನಗರ ಪಂಚಾಯತ್ ಅಧಿಕಾರಿಗಳ ವಿರುದ್ಧ ಗರಂ ಆಗದರು. ಇಂದು ಸಂಜೆಯ ಒಳಗಾಗಿ ನೀರು ಪೂರೈಕೆಗೆ ಬದಲಿ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು. ಹಲವಾರು ವರ್ಷಗಳ ಹಿಂದೆಯೇ ವಿದ್ಯುತ್ ವ್ಯತ್ಯಯ ಆದಾಗ ಸಮಸ್ಯೆ ಆಗದಿರಲಿ ಎಂದು ನಗರ ಪಂಚಾಯತ್ ನ ಕುಡಿಯುವ ನೀರಿನ ಪೂರೈಕೆಗಾಗಿ ವಿದ್ಯುತ್ ಜನರೇಟರ್ ಅಳವಡಿಸಲಾಗಿದೆ. ಆದರೆ ಕಳೆದ ವರ್ಷಗಳಿಂದ ಜನರೇಟರ್ ದುರಸ್ತಿ ಪಡಿಸುವ ಗೋಜಿಗೂ ಹೋಗದ ನಗರ ಪಂಚಾಯತ್ ಬಗ್ಗೆ ಎಂ. ವೆಂಕಪ್ಪ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ಶಿಲ್ಪ ಇಬ್ರಾಹಿಂ, ಬೆಟ್ಟ ಜಯರಾಂ ಭಟ್ ಮತ್ತು ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.