ಸುಳ್ಯ:ರಾಜ್ಯದಲ್ಲಿ ಕಾರ್ಮಿಕರ ಹಿತ ಕಾಯಲು,ಕನಿಷ್ಠ ವೇತನ ಪಡೆಯುವ ನಿಟ್ಟಿನಲ್ಲಿ ಸರಕಾರ ಬದ್ಧವಾಗಿದೆ ಎಂದು ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದರು. ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 50 ಲಕ್ಷ ಸಂಘಟಿತ ಕಾರ್ಮಿಕರು ಹಾಗೂ 1.95 ಲಕ್ಷ ಅಸಂಘಟಿತ ವಲಯದ
ಕಾರ್ಮಿಕರು ಸೇರಿ 2.5 ಕೋಟಿ ಕಾರ್ಮಿಕರಿದ್ದಾರೆ. ರಾಜ್ಯದಲ್ಲಿ 16 ಸಾವಿರದಿಂದ 19 ಸಾವಿರ ಕನಿಷ್ಠ ವೇತನ ಇದೆ. ಕನಿಷ್ಠ ವೇತನ, ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರದ ಕುರಿತು ಸಲಹಾ ವರದಿಗಳನ್ನು ಕಾಲ ಕಾಲಕ್ಕೆ ಸರಕಾರಕ್ಕೆ ಸಲ್ಲಿಸುವುದು ಸಲಹಾ ಮಂಡಳಿಯ ಕೆಲಸ ಕಾರ್ಯ.
ಈ ವರದಿಯ ಆಧಾರದಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ, ಪರಿಹಾರ ಧನಗಳನ್ನು ನೀಡಲಾಗುತ್ತದೆ. ಕೃಷಿ ಕಾರ್ಮಿಕರ, ರಬ್ಬರ್ ಕಾರ್ಮಿಕರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಸರಕಾರದ ಗಮನಕ್ಕೆ ತರಲಾಗುವುದು ಎಂದ ಅವರು

ರಾಜ್ಯದಲ್ಲಿ ಕಾರ್ಮಿಕರ ಇಎಸ್ಐ, ಪಿಫ್ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಎಲ್ಲ ಸ್ತರದ ಕಾರ್ಮಿಕರ ಕನಿಷ್ಠ ವೇತನದ ಬಗ್ಗೆ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಕಾರ್ಮಿಕರ ಹಿತ ದೃಷ್ಠಿಯಿಂದ ಕಾರ್ಮಿಕ ಸಚಿವರ ನೇತೃತ್ವದಲ್ಲಿ ಹಲವು ಸಭೆಗಳನ್ನು ಆಯೋಜನೆ ಮಾಡಲಾಗಿದ್ದು ಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. ತಮಗೆ ದೊರೆತ ಈ ಅಧ್ಯಕ್ಷ ಸ್ಥಾನ ಸುಳ್ಯದ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ , ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ,ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ,
ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಉಪಸ್ಥಿತರಿದ್ದರು.















