ಧರ್ಮಸ್ಥಳ: ಪರಿಶುದ್ಧ ಮನ, ವಚನ, ಕಾಯದೊಂದಿಗೆ ನಿತ್ಯವೂ ಮಾಡುವ ದೇವರ ಭಕ್ತಿಗೆ ಅಪಾರ ಶಕ್ತಿ ಇದೆ. ನಿತ್ಯವೂ ಮನೆಯಲ್ಲಿ ಎಲ್ಲರೂ ಶ್ರದ್ಧಾ ಭಕ್ತಿಯಿಂದ ದೇವರ ಪ್ರಾರ್ಥನೆ, ಧ್ಯಾನ, ಭಜನೆ, ಪೂಜೆ ಮಾಡಿದರೆ ಎಲ್ಲಾ ಕಷ್ಟ-ನಷ್ಟಗಳು ಪರಿಹಾರವಾಗಿ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಶನಿವಾರ ಶಿವರಾತ್ರಿ ಜಾಗರಣೆ

ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಅಹೋರಾತ್ರಿ ಶಿವಪಂಚಾಕ್ಷರಿ ಪಠಣವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಮನೆಯಲ್ಲಿ ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಅವರು ಸಲಹೆ ನೀಡಿದರು.ನಿತ್ಯವೂ ಮನೆಯಲ್ಲಿ ಮನೆ ದೇವರನ್ನು, ಇಷ್ಟ ದೇವರನ್ನು ಪ್ರಾರ್ಥಿಸಿದ ಬಳಿಕ ವರ್ಷಕ್ಕೊಮ್ಮೆ ವಿಶೇಷ ಸಾನ್ನಿಧ್ಯ ಇರುವ ಧರ್ಮಸ್ಥಳ, ಕಟೀಲು, ಸುಬ್ರಹ್ಮಣ್ಯ, ಉಡುಪಿ ಮೊದಲಾದ ಕ್ಷೇತ್ರಗಳಿಗೆ ಹೋಗಿ ಶ್ರದ್ಧಾ-ಭಕ್ತಿಯಿಂದ ಸೇವೆ ಸಲ್ಲಿಸಬಹುದು ಎಂದು ಅವರು ಸಲಹೆ ನೀಡಿದರು.

ಕ್ಷೇತ್ರಕ್ಕೆ ಆಗಮಿಸಿದ ಪಾದಯಾತ್ರಿಗಳ ಪರವಾಗಿ ಬೆಂಗಳೂರಿನ ರಮೇಶ್ ಮಾತನಾಡಿದರು.ಅಹೋರಾತ್ರಿ ದೇವಸ್ಥಾನದಲ್ಲಿ ನಾಲ್ಕು ಜಾವಗಳಲ್ಲಿ ಭಕ್ತರು ಸೀಯಾಳ ಅಭಿಷೇಕ, ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು.
ದೇವಸ್ಥಾನ ಆವರಣದಲ್ಲಿ ಅಹೋರಾತ್ರಿ ಭಕ್ತರು ಶಿವಪಂಚಾಕ್ಷರಿ ಪಠಣ, ಭಜನೆ, ಪ್ರಾರ್ಥನೆ, ಧ್ಯಾನ ಮಾಡಿದರು.ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಮಾಣಿಲ ಮೋಹನದಾಸ ಸ್ವಾಮೀಜಿ, ಪಾದಯಾತ್ರಿಗಳ ಸಂಘದ ನಾಯಕ ಬೆಂಗಳೂರಿನ ಹನುಮಂತಪ್ಪ ಮತ್ತು ಮರಿಯಪ್ಪ ಉಪಸ್ಥಿತರಿದ್ದರು.