ಸುಳ್ಯ:ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಯಾಗಿದ್ದ ಪ್ರೊ.ಎ.ಎಸ್.ರಾಮಕೃಷ್ಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಪಟ್ಟಿಯಲ್ಲಿದ್ದ ಡಾ.ರೇಣುಕಾಪ್ರಸಾದ್ ಕೆ.ವಿ. ಸೇರಿ ಎಲ್ಲರನ್ನೂ ಪ್ರಕರಣದಿಂದ ಖುಲಾಸೆಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 2011ರಲ್ಲಿ ಪ್ರೊ.ರಾಮಕೃಷ್ಣರ ಹತ್ಯೆ ನಡೆದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸೆಶನ್ಸ್ ನ್ಯಾಯಾಲಯ 2016ರಲ್ಲಿ ಎಲ್ಲಾ ಆರೋಪಿತರನ್ನೂ
ದೋಷ ಮುಕ್ತ ಮಾಡಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸರಕಾರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ,ವಿಚಾರಣೆ ನಡೆದು 2023ರಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿತ್ತು.
ಇದರ ವಿರುದ್ಧ ಶಿಕ್ಷೆಗೊಳಗಾದವರು ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟು ಹೈಕೋರ್ಟು ವಿಧಿಸಿದ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ ಜಾಮೀನು ಮಂಜೂರು ಮಾಡಿತ್ತು. ಬಳಿಕ ವಿಚಾರಣೆ ನಡೆದು ಇಂದು ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದ್ದ ಡಾ.ರೇಣುಕಾಪ್ರಸಾದ್, ಮನೋಜ್ ರೈ, ನಾಗೇಶ್ ಎಚ್.ಆರ್., ವಾಮನ ಪೂಜಾರಿ, ಶರಣ್ ಮಂಗಳೂರು, ಭವಾನಿಶಂಕರ ಎಲ್ಲರನ್ನೂ ಸುಪ್ರೀಂಕೋರ್ಟ್ ದೋಷಮುಕ್ತಗೊಳಿಸಿ ಪ್ರಕರಣದಿಂದ ಖುಲಾಸೆಗೊಳಿಸಿದೆ.ಸುಪ್ರೀಂಕೋರ್ಟಿನಲ್ಲಿ ಖ್ಯಾತ ವಕೀಲರುಗಳಾದ ಸಿದ್ಧಾರ್ಥ್ ಲೂತ್ರಾ ಹಾಗೂ ಗಿರೀಶ್ ಅನಂತಮೂರ್ತಿ ಡಾ.ರೇಣುಕಾಪ್ರಸಾದರ ಪರವಾಗಿ ವಾದಿಸಿದ್ದರು ಎಂದು ತಿಳಿದು ಬಂದಿದೆ.