ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ಉಲ್ಬಣಿಸಿರುವ ಕಾರಣ, ಈ ಬಾರಿಯ ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಉಳಿದ ಪಂದ್ಯಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಗುರುವಾರ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಲಾಯಿತು. ಭದ್ರತಾ ದೃಷ್ಠಿಯಿಂದ ಪಂದ್ಯವನ್ನು
ರದ್ದುಗೊಳಿಸಲಾಯಿತು.ಇದರ ಬೆನ್ನಲ್ಲೇ, ಟೂರ್ನಿ ಮುಂದುವರಿಕೆ ಬಗ್ಗೆ ಅನಿಶ್ಚಿತತೆಯ ಮೋಡ ಕವಿದಿತ್ತು.ಇದೀಗ ಟೂರ್ನಿ ಅಮಾನತುಗೊಂಡಿರುವುದನ್ನು ಖಾತ್ರಿಪಡಿಸಿರುವ ಬಿಸಿಸಿಐ ಅಧಿಕಾರಿಯೊಬ್ಬರು, ‘ದೇಶ ಸಂಘರ್ಷ ಎದುರಿಸುತ್ತಿರುವಾಗ ಕ್ರಿಕೆಟ್ ನಡೆಸುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ.
ದೇಶದ 13 ನಗರಗಳಲ್ಲಿ ನಡೆಯುತ್ತಿದ್ದ ಈ ಬಾರಿಯು ಐಪಿಎಲ್ ಆವೃತ್ತಿಯು ಮಾರ್ಚ್ 22ರಂದು ಆರಂಭವಾಗಿತ್ತು. ಮೇ 25ರಂದು ಫೈನಲ್ ನಿಗದಿಯಾಗಿತ್ತು.ಟೂರ್ನಿಯು ಅಂತಿಮ ಹಂತಕ್ಕೆ ತಲುಪಿತ್ತು. ಲೀಗ್ ಹಂತದಲ್ಲಿ 12 ಹಾಗೂ ಕ್ವಾಲಿಫೈಯರ್, ಎಲಿಮಿನೇಟರ್, ಫೈನಲ್ ಸೇರಿ ನಾಲ್ಕು ಪಂದ್ಯಗಳಷ್ಟೇ ಬಾಕಿ ಇದ್ದವು.ಆತಿಥೇಯ ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನಡುವಣ ಪಂದ್ಯ ಲಖನೌನಲ್ಲಿ ಇಂದು ರಾತ್ರಿ ನಡೆಯಬೇಕಿತ್ತು.
ಪಂದ್ಯಗಳನ್ನು ಮುಂದೆ ನಡೆಸುವ ಕುರಿತು ಬಳಿಕ ನಿರ್ಧರಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.