ಸುಳ್ಯ:ಭ್ರಷ್ಟಾಚಾರದಿಂದ ದೂರ ಇರಲು ಮತ್ತು ಲಂಚ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಕುರಿತು ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಲೋಕಾಯುಕ್ರ ಎಸ್ಪಿ ಅವರಿಂದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಮತ್ತು ಅಗತ್ಯ ನಿರ್ದೇಶನ ನೀಡಿದ ಪ್ರಸಂಗ ನಡೆಯಿತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರಾದ ಎಂ.ಎ. ನಟರಾಜ್ ಸುಳ್ಯ ತಾಲೂಕಿನ
ಸರಕಾರಿ ಇಲಾಖೆಗಳ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಮಾಹಿತಿ ನೀಡಿದರು. ಸರಕಾರಿ ಸೇವೆಯ ಅವಕಾಶದಿಂದ ಸಾರ್ವಜನಿಕರಿಗೆ ಮತ್ತು ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುವ ಮೂಲಕ ನಮ್ಮ ಜವಾಬ್ದಾರಿಯನ್ನು ಮೆರೆಯ ಬೇಕಾಗಿದೆ. ಕಷ್ಟಕ್ಕೆ ಸಮಸ್ಯೆಗಳಿಗೆ ಸಿಲುಕಿದ ಜನರು ಅದಕ್ಕೆ ಪರಿಹಾರ ಹುಡುಕಿಕೊಂಡು ಬಳಿಗೆ ಬಂದಾಗ ಅವರೊಡನೆ ಮಾನವೀಯತೆ ತೋರಿಸಿ ಅವರಲ್ಲಿ ಸಮಸ್ಯೆಗಳ ಬಗ್ಗೆ ಶಾಂತವಾಗಿ ಕೇಳಿ ಕೊಳ್ಳಬೇಕು. ಬಳಿಕ ಕಾನೂನು ರೀತಿಯಲ್ಲಿ ಅದಕ್ಕೆ ಬೇಕಾದ ಮಾಹಿತಿಯನ್ನು ಅವರಿಗೆ ನೀಡಿ ಅವರ ನೋವಿಗೆ ಸ್ಪಂದಿಸಿ ಪರಿಹಾರ ಒದಗಿಸಬೇಕು. ಜನರನ್ನು ಭಯಭೀತ ಗೊಳಿಸುವ, ಯಾವುದೇ ಸರಕಾರಿ ಕೆಲಸಕ್ಕೆ ಜನರಲ್ಲಿ ಕೈ ಚಾಚುವ, ಅಥವಾ ಬೇಡಿಕೆ ಇಡುವ ಕೆಲಸ ಕಾರ್ಯಗಳು ಸರಕಾರಿ ಅಧಿಕಾರಿಗಳಿಂದ ಆಗಬಾರದು ಎಂದು ಹೇಳಿದರು.
ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದ್ದು ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಲೋಕಾಯುಕ್ತ ಅಧಿಕಾರಿಗಳು ಈ ಸಂಧರ್ಭ ದಲ್ಲಿ ತಿಳಿಸಿದರು. ಇದಲ್ಲದೇ ಉಳಿದ ದಿನಗಳಲ್ಲೂ ಕಛೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದಾಗಿದೆ ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಅಧಿಕಾರಿಗಳಿಗೆ ನಿರ್ದೇಶನ:
ಅಧಿಕಾರಿಗಳು ಮೂವ್ಮೆಂಟ್ ರಿಜಿಸ್ಟರ್ ಮಾಡಬೇಕು ಅಲ್ಲದೇ ಪಬ್ಲಿಕ್ ವಿಸಿಟರ್ಸ್ ಪುಸ್ತಕ ಅಳವಡಿಕೆ ಮಾಡಬೇಕು ಅಲ್ಲದೆ ಸ್ಥಳೀಯ ಕಛೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ಸಲಹೆ ನೀಡಿದರು ಅಲ್ಲದೇ ಕ್ಯಾಶ್ ರಿಜಿಸ್ಟರ್ ಪುಸ್ತಕವನ್ನು ಕಡ್ಡಾಯವಾಗಿ ಅಧಿಕಾರಿಗಳು ಬಳಸಬೇಕು ಬೇಕಾಬಿಟ್ಟಿ ಬರೆದುಕೊಂಡು ಹೋಗಬಾರದು ತಮ್ಮ ಬಳಿ ಇರುವ ಮೊತ್ತವನ್ನು ಮಾತ್ರ ಬರೆಯಬೇಕು ಎಂದು ಹೇಳಿದರು . ಅಲ್ಲದೇ ಲೋಕಾಯುಕ್ತ ಇಲಾಖೆಯ ಪೋಸ್ಟರ್ ಪ್ರತಿ ಕಛೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಕೆ ಮಾಡಬೇಕು ಅಲ್ಲದೇ ಅಧಿಕಾರಿಗಳು ಸಾರ್ವಜನಿಕರ ಜೊತೆಗೆ ವರ್ತನೆಗಳು ಕೂಡ ಅಧಿಕಾರಿಗಳದ್ದು ಮುಖ್ಯವಾಗಿದ್ದು ಸರಿಯಾಗಿ ನಡೆದುಕೊಳ್ಳಬೇಕು ಎಂದು ಖಡಕ್ ಆಗಿ ಸೂಚಿಸಿದರು.
ಈ ಸಂಧರ್ಭದಲ್ಲಿ ಸುಳ್ಯ ತಹಶೀಲ್ದಾರ್ ಮಂಜುಳಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್, ಚಂದ್ರ ಶೇಖರ್,ಸಿಬ್ಬಂದಿಗಳಾದ ಮಹೇಶ್,ರಾಜಪ್ಪ, ವಿವೇಕ್, ರಾಜ್ ಶೇಖರ್, ದುಂಡಪ್ಪ ವಿನಯ್ ಸಿಂಗ್, ಮೊದಲಾದವರು ಉಪಸ್ಥಿತರಿದ್ದರು.
ಸಭೆಗೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ,ಪಶು ಸಂಗೋಪನಾ ಇಲಾಖೆ, ಲೋಕೋಪಯೋಗಿ ಇಲಾಖೆ,ತಾಲೂಕು ಪಂಚಾಯತ್, ನಗರ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.