ಸುಳ್ಯ:ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾನಿಲಯ ಹಾಗೂ ಸುಳ್ಯ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಮಟ್ಟದ ಫುಟ್ಬಾಲ್ ಪಂದ್ಯಾಟ ಮೇ 13 ಮತ್ತು 14ರಂದು ಕೆವಿಜಿ ಪ್ಲೇ ಗ್ರೌಂಡ್ನಲ್ಲಿ ನಡೆಯಲಿದೆ ಎಂದು ಕೆವಿಜಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಉದಯಕೃಷ್ಣ ಬಿ.ತಿಳಿಸಿದ್ದಾರೆ. ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವವಿದ್ಯಾನಿಲಯ ಮಟ್ಟದ ಪುಟ್ಬಾಲ್ ಪಂದ್ಯಾಟವು
ಕೆವಿಜಿ ಕಾನೂನು ಕಾಲೇಜಿನಲ್ಲಿ ಪ್ರಪ್ರಥಮ ಬಾರಿಗೆ ನಡೆಯಲಿದ್ದು 15 ಕ್ಕಿಂತ ಹೆಚ್ಚು ತಂಡಗಳು ಹೆಸರುಗಳನ್ನು ನೋಂದಾಯಿಸಿವೆ. ಅದಲ್ಲದೆ ಇನ್ನೂ ಹೆಚ್ಚಿನ ಸಂಖ್ಯೆಯ ಸಂಯೋಜಿತ ಕಾಲೇಜಿನ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಹೆಚ್ಚಿನ ತಂಡಗಳು ಭಾಗವಹಿಸಿದ್ದಲ್ಲಿ ಸುಳ್ಯ ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲು ಸಿದ್ಧತೆ ನಡೆದಿದೆ. ಭಾಗವಹಿಸುವ ಎಲ್ಲಾ ತಂಡಗಳಿಗೆ ವಾಸ್ತವ್ಯ, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.ಈ ಪಂದ್ಯಾಟದಲ್ಲಿ ಭಾಗವಹಿಸುವ ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು
ಚತುರ್ಥ ಬಹುಮಾನವನ್ನು ನೀಡಲಿದ್ದು, ಪಂದ್ಯ ಶ್ರೇಷ್ಠ ಆಟಗಾರರನ್ನು ಗುರುತಿಸಿ ಗೌರವಿಸುವ ವ್ಯವಸ್ಥೆ ಮಾಡಲಾಗಿದೆ.ಅತಿಥೇಯ ಕೆವಿಜಿ ಕಾಲೇಜಿನ ತಂಡವೂ ಈ ಪಂದ್ಯಾಟದಲ್ಲಿ ಭಾಗವಹಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಮೇ.13ರಂದು ಪೂ.9.30ಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ.ಆರ್. ಪಂದ್ಯಾಟವನ್ನು ಉದ್ಘಾಟಿಸುವರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸುವರು. ಎಒಎಲ್ಇ ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕಾನೂನು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಖಾಲಿದ್ ಖಾನ್, ಕೆವಿಜಿ ಕಾನೂನು ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಕೆ.ವಿ.ದಾಮೋದರ ಗೌಡ ಭಾಗವಹಿಸಲಿದ್ದಾರೆ ಎಂದು ಡಾ.ಉದಯಕೃಷ್ಣ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ ವಿ ದಾಮೋದರ ಗೌಡ, ಕಾಲೇಜಿನ ಕ್ರೀಡಾ ಸಂಯೋಜಕಿ, ಉಪನ್ಯಾಸಕಿ ರಶ್ಮಿ ಹೆಚ್, ಎನ್ಎಂಸಿಯ ದೈಹಿಕ ಶಿಕ್ಷಣ ನಿರ್ದೇಶಕ ಸೀತಾರಾಮ ಎಂ.ಡಿ, ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಷರಫ್ ಅಹಮ್ಮದ್, ಕ್ರೀಡಾ ಕಾರ್ಯದರ್ಶಿಗಳಾದ ವಿದ್ಯಾಶ್ರೀ ಕೆ.ಹಾಗೂ ಪೂರ್ಣೇಶ್ ಉಪಸ್ಥಿತರಿದ್ದರು.