ಸುಳ್ಯ:ಕಾಡಾನೆ ದಾಳಿ ಮತ್ತು ಇತರ ವನ್ಯ ಪ್ರಾಣಿಗಳ ಹಾವಳಿಯಿಂದ ಕೃಷಿ ನಾಶದಿಂದ ಕೃಷಿಕರು ಹೈರಾಣಾಗಿದ್ದಾರೆ. ಆದುದರಿಂದ ಆನೆ ಹಾಗು ಇತರ ವನ್ಯ ಪ್ರಾಣಿಗಳು ಕೃಷಿ ಭೂಮಿಗೆ ದಾಳಿ ಮಾಡಿ ಕೃಷಿ ಹಾನಿ ಮಾಡುವುದನ್ನು ತಡೆಯಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕರು ಸರಕಾರವನ್ನು ಒತ್ತಾಯಿಸಿದ್ದಾರೆ.ಸುಳ್ಯ ತಾಲೂಕು ಕೃಷಿಕ ಸಮಾಜ ಮತ್ತು ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ವತಿಯಿಂದ
ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವನ್ಯ ಪ್ರಾಣಿಗಳ ಹಾವಳಿ ತಡೆಗಟ್ಟಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಕೃಷಿಕ ಸಮಾಲೋಚನಾ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.
ಕಾಡಾನೆಗಳು ಊರಿಗೆ ಬರುವುದನ್ನು ತಡೆಯಲು ಕಾಡಂಚಿನಲ್ಲಿ ಸೋಲಾರ್ ಬೇಲಿಗಳನ್ನು ಅಳವಡಿಸಬೇಕು, ಆನೆ ಬರುವ ಸ್ಥಳಗಳಲ್ಲಿ ಸೋಲಾರ್ ಲೈಟ್ ಹಾಕಬೇಕು ಸಣ್ಣ ಹಾಗೂ ಮಧ್ಯಮ ವರ್ಗದ ಕೃಷಿಕರ ತೋಟಗಳಿಗೆ ಸರಕಾರ ಉಚಿತವಾಗಿ ಬೇಲಿ ನಿರ್ಮಾಣ ಮಾಡಬೇಕು ಅಥವಾ ಸೋಲಾರ್ ಬೇಲಿ ನಿರ್ಮಾಣಕ್ಕೆ ನೀಡುವ ಸಹಾಯ ಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.ಆನೆ ಬರುವ ಕಡೆಗಳಲ್ಲಿ ಆನೆ ಕಂದಕ

ನಿರ್ಮಾಣ ಹಾಗೂ ಇತರ ತಡೆಗಳನ್ನು ಹೆಚ್ಚು ನಿರ್ಮಾಣ ಮಾಡಬೇಕು, ಆನೆ ಮತ್ತಿತರ ವನ್ಯ ಪ್ರಾಣಿಗಳಿಗೆ ಆಹಾರ ನೀಡುವ ನಿಟ್ಟಿನಲ್ಲಿ
ಅರಣ್ಯದಂಚಿನಲ್ಲಿ ಬಾಳೆ, ಹಣ್ಣಿನ ಗಿಡಗಳನ್ನು ಹೆಚ್ಚು ನೆಡಬೇಕು, ಇಲಾಖೆಯವರೇ ಈ ರೀತಿ ರೈತರ ಸಭೆಯನ್ನು ನಡೆಸಿ ಮಾಹಿತಿ ನೀಡಬೇಕು ಮತ್ತು ರೈತರಿಗೆ ಧೈರ್ಯ ತುಂಬಬೇಕು ಎಂದು ರೈತರು ಒತ್ತಾಯಿಸಿದರು.
ಎಲ್ಲಾ ರೀತಿಯ ಪ್ರಾಣಿಗಳು ಉಪಟಳ ಜಾಸ್ತಿಯಾಗಿದೆ.ಇದಕ್ಕೆ ಸಮಗ್ರ ಪರಿಹಾರ ಕಂಡುಕೊಳ್ಳಬೇಕು. ಕೃಷಿಕರಿಗೆ ಆದ ನಷ್ಟಕ್ಕೆ ಕೂಡಲೇ ಪರಿಹಾರ ಸಿಗುವಂತಾಗಬೇಕು ಮತ್ತು ಪರಿಹಾರ ಕಡಿತ ಮಾಡಬಾರದು ಎಂದು ಹೇಳಿದರು.ಕೃಷಿಕರಾದ
ಪುರುಷೋತ್ತಮ ಕಿರ್ಲಾಯ, ಗುಣವತಿ ಕೊಲ್ಲಂತ್ತಡ್ಕ, ಲೀಲಾವತಿ ಅರಂಬೂರು, ಪುಷ್ಪಾ ಮೇದಪ್ಪ,ಜಗನ್ನಾಥ ಜಯನಗರ, ಸಂದೀಪ್ ಮದುವೆಗದ್ದೆ, ಬಾಲಚಂದ್ರ ಕಲ್ಚರ್ಪೆ, ಸುದರ್ಶನ ಪಾತಿಕಲ್ಲು, ಕರುಣಾಕರ ಎ.ಜಿ,
ಚೇತನ್ ಅಡ್ತಲೆ, ಶ್ರೀಹರಿ ಮಂಡೆಕೋಲು, ಶಿವಾನಂದ ಕುಕ್ಕುಂಬಳ,ಕಿಶೋರ್ ಕುಮಾರ್ ಉಳುವಾರು, ವಿನಯಕುಮಾರ್ ಕಂದಡ್ಕ ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಮಾತನಾಡಿದ ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ‘ವನ್ಯ ಪ್ರಾಣಿಗಳು ಕೃಷಿ ಹಾನಿ ಮಾಡಿದರೆ ಸರಕಾರಿ ಆದೇಶದಂತೆ ಪರಿಹಾರ ಕೊಡಲಾಗುತ್ತದೆ. ಕೃಷಿಕರು ಅರ್ಜಿ ನೀಡಿದ ಕೂಡಲೇ ಇ-ಪರಿಹಾರ್ ಆಪ್ನಲ್ಲಿ ಅಪ್ ಲೋಡ್ ಮಾಡಿ ಆನ್ ಲೈನ್ ಮೂಲಕ ಪರಿಹಾರ ನೀಡಲಾಗುತ್ತದೆ. ಅರಣ್ಯ ಇಲಾಖೆಯಿಂದ ಕೃಷಿ ಹಾನಿಗೆ ಪರಿಹಾರ ನೀಡುವುದರ ಜೊತೆಗೆ ಆನೆ ಹಾವಳಿ ತಡೆಯಲು ಹಲವು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ ಎಂದು ಹೇಳಿದರು. ಕೃಷಿಕರು ತಮ್ಮ ಕೃಷಿ ಭೂಮಿಯನ್ನು ರಕ್ಷಣೆ ಮಾಡಲು ಸೋಲಾರ್ ಬೇಲಿ ಅಳವಡಿಸಿ ಎಂದು ಸಲಹೆ ನೀಡಿದ ಅವರು ಸೊಲಾರ್ ಬೇಲಿ ಅಳವಡಿಕೆಗೆ ಶೇ.50 ಸಹಾಯ ಧನ ನೀಡಲಾಗುತ್ತದೆ. ಒಂದು ಕಿ.ಮಿ. ಬೇಲಿ ಗೆ 2.30 ಲಕ್ಷ ಅಂದಾಜಿಲಾಗಿದ್ದು 1.15ಲಕ್ಷ ಸಹಾಯ ಧನ ಅರಣ್ಯ ಇಲಾಖೆ ನೀಡುತಿದೆ.ಕೃಷಿಕರು ಗುಂಪಾಗಿ ಸೇರಿ ಸೋಲಾರ್ ಬೇಲಿ ಅಳವಡಿಸಲು ಅವಕಾಶ ಇದೆ. ಆನೆ ಹಾವಳಿ ತಡೆಯಲು ಯಾವ ರೀತಿಯ ಇತರ ಪರಿಹಾರ ಕ್ರಮ ಕಂಡುಕೊಳ್ಳಬಹುದು ಎಂಬ ಬಗ್ಗೆ ರೈತರು ಸಲಹೆ ನೀಡಿದರೆ ಆ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು.

ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್.ಬಿ.ಎಂ. ಮಾತನಾಡಿದರು.
ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ಕಿಸಾನ್ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಚಂದ್ರಾ ಕೋಲ್ಚಾರ್, ಭಾಕಿಸಂ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ರಾಯ, ಭಾಕಿಸಂ ಜಿಲ್ಲಾ ಕಾರ್ಯದರ್ಶಿ ರಾಮ್ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಣ್ಣಾಜಿ ಗೌಡ, ಅವಿನಾಶ್ ಕುರುಂಜಿ, ನಾರಾಯಣ ಎಸ್.ಎಂ, ಕಿಶನ್ ಜಬಳೆ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
ಭಾಕಿಸಂ ಸುಳ್ಯ ತಾಲೂಕು ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಸ್ವಾಗತಿಸಿ,
ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಕಿಸಂ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ಭಟ್ ವಂದಿಸಿದರು.