ಸುಳ್ಯ:ಎಲ್ಲದರಲ್ಲೂ ಒಳ್ಳೆಯದನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಉದಾತ್ತ ಚಿಂತನೆಯನ್ನು ವೇದಗಳು ಭಾರತೀಯರಿಗೆ ನೀಡಿದೆ. ಈ ಚಿಂತನೇಯಿಂದಲೇ ಜಗತ್ತು ಬೆರಗುಗಣ್ಣಿನಿಂದ ಭಾರತವನ್ನು ನೋಡುವಂತಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ. ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಸುಳ್ಯದ ಖಾಸಗೀ ಬಸ್ ನಿಲ್ದಾಣದ ಬಳಿಯ ಶಿವಕೃಪಾ ಕಲಾ ಮಂದಿರದಲ್ಲಿ ಆರಂಭಗೊಂಡ 25ನೇ ವರ್ಷದ
ಶ್ರೀ ಕೇಶವ ಕೃಪಾ ವೇದ-ಯೋಗ-ಕಲಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಹುಟ್ಟು ಸಾವಿನ ಮಧ್ಯೆ ಮನುಷ್ಯ ಹೇಗೆ ಬದುಕಿ ಬಾಳಬೇಕು ಎಂಬ ಚಿಂತನೆಯನ್ನು ಹಿಂದೂ ಧರ್ಮ ಮತ್ತು ಸನಾತನ ಸಂಸ್ಕೃತಿ ನೀಡಿದೆ. ಎಲ್ಲದರಲ್ಲೂ ಒಳಿತನ್ನು ಬಯಸುವುದು ಜಗತ್ತೇ ಒಂದು ಕುಟುಂಬದಂತೆ ಇರಬೇಕು ಎಂದು ಆಶಿಸುವುದು ಹಿಂದೂ ಧರ್ಮ. ಸಂಸ್ಕೃತ ಸರ್ವ ಶ್ರೇಷ್ಠ ಭಾಷೆ, ಅದು ಅಮೃತ ಭಾಷೆ ಎಂದ ಅವರು ವೇದ ಮಂತ್ರಗಳ ಜೊತೆಗೆ ಯುವ ಸಮುದಾಯಕ್ಕೆ ಬದುಕಿನ ದಾರಿಯನ್ನೂ ಕೇಶವ ಕೃಪಾ ವೇದ ಶಿಬಿರ ನೀಡುತ್ತದೆ. ಜಗತ್ತಿನ ಹಿತಕ್ಕಾಗಿ ನಾಗರಾಜ ಭಟ್ ನೇತೃತ್ವದ ಕೇಶವ ಕೃಪಾ ವೇದ ಶಿಬಿರವನ್ನು ನಡೆಸುತ್ತದೆ ಎಂದು ಅವರು ಹೇಳಿದರು.

ಶಿಬಿರವನ್ನು ಉದ್ಘಾಟಿಸಿದ ವೇದ ವಿದ್ವಾಂಸರಾದ ವೇ.ಮೂ.ಕೇಶವ ಜೋಯಿಸ ವಳಲಂಬೆ ಮಾತನಾಡಿ ‘ ವೇದಗಳು ಅಜ್ಞಾನವನ್ನು ತೊಲಗಿಸಿ ಬದುಕಿನಲ್ಲಿ ಜ್ಞಾನದ ಬೆಳಕನ್ನು ಹರಿಸುತ್ತದೆ ಎಂದು ಹೇಳಿದರು. ಸನಾತನ ಧರ್ಮಗಳ ಮಹತ್ವವನ್ನು ಅರಿತು ಅದನ್ನು ಉಳಿಸಿ ಬೆಳೆಸಲು ವೇದಗಳ ಅರಿವು ಅಗತ್ಯ. ಆಚರಣೆಯೇ ಧರ್ಮ, ಆಚರಣೆ ಇಲ್ಲದ್ದು ನಿಷ್ಪ್ರಯೋಜಕ ಎಂದು ಅವರು ಹೇಳಿದರು.
ಪುತ್ತೂರಿನ ವಕೀಲರಾದ ಮಹೇಶ ಕಜೆ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ರವಿಶಂಕರ ರಾವ್ ದೇವ ಮುಖ್ಯ ಅತಿಥಿಗಳಾಗಿದ್ದರು. ಶ್ರೀ ಕೇಶವಕೃಪ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಭಟ್, ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಭಿರಾಮ್ ಭಟ್ ಸ್ವಾಗತಿಸಿದರು, ಪ್ರತಿಷ್ಠಾನದ ಸಂಚಾಲಕಿ ಶ್ರೀದೇವಿ ನಾಗರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದರ್ಶನ ಭಟ್ ಉಜಿರೆ ವಂದಿಸಿದರು. ಅಕ್ಷತಾ ನಾಯಕ್ ಜಯನಗರ ಹಾಗೂ ಉದಯ ಭಾಸ್ಕರ ಕಾರ್ಯಕ್ರಮ ನಿರೂಪಿಸಿದರು.
ಒಂದು ತಿಂಗಳ ಶಿಬಿರ:
ಒಂದು ತಿಂಗಳ ಕಾಲ ನಡೆಯುವ ಉಚಿತ ಶಿಬಿರದಲ್ಲಿ ವೇದದ ಜೊತೆಗೆ ಯೋಗ, ಯಕ್ಷಗಾನ, ಕಂಸಾಳೆ – ವೀರಗಾಸೆಯಂತಹ ಜಾನಪದ ಕಲೆಗಳು, ಭಜನೆ – ಸಂಗೀತ, ಜಾನಪದ ನೃತ್ಯ ಮುಂತಾದ ಲಲಿತಕಲೆಗಳು, ಪೇಪರ್ ಕಟ್ಟಿಂಗ್, ಚಿತ್ರಕಲೆ, ನಾಟಕ, ಮಿಮಿಕ್ರಿ ಮುಂತಾದ ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಕಲಿಸಲಾಗುತ್ತದೆ.
ಈಜು ತರಬೇತಿಯನ್ನು ನೀಡಲಾಗುತ್ತದೆ. ಭಗವದ್ಗೀತೆ, ಲಲಿತಾ ಸಹಸ್ರನಾಮ, ವಿಷ್ಣುಸಹಸ್ರನಾಮ ಮುಂತಾದ ಶ್ಲೋಕಗಳನ್ನು

ಸ್ಪುಟವಾಗಿ ಪಠಿಸುವ ಸಾಂಪ್ರದಾಯಿಕ ವಿಧಾನ. ಸುಭಾಷಿತಗಳು, ಆದರ್ಶ ದಿನಚರಿ ರೂಪಿಸಿಕೊಳ್ಳುವ ಬಗೆ. ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳು ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಕಲಿಸಲಾಗುತ್ತದೆ. ರಾಜ್ಯ ಹಾಗೂ ಹೊರರಾಜ್ಯದ ಆಯ್ಕೆಯಾದ 200 ಶಿಬಿರಾರ್ಥಿಗಳಿಗೆ ವೇದ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯಪುಸ್ತಕಗಳು, ವ್ಯಾಸಪೀಠ ಇತ್ಯಾದಿಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ.