ಐವರ್ನಾಡು:ಗೆಳೆಯರ ಬಳಗ ಐವರ್ನಾಡು ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಹಾಗೂ ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಐವರ್ನಾಡಿನಲ್ಲಿ ನಡೆಯುತ್ತಿರುವ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟದ ಲೀಗ್ ಪಂದ್ಯದಲ್ಲಿ
ಬ್ಯಾಂಕ್ ಆಫ್ ಬರೋಡ, ಎಸ್ಡಿಎಂ ಉಜಿರೆ, ಎನ್ಎಂಸಿ ತಂಡ ಎರಡನೇ ಗೆಲುವು ದಾಖಲಿಸಿದೆ.
ಎನ್ಎಂಸಿ ಸುಳ್ಯ ತಂಡವು ಕರೆಂಕಿ ಬಂಟ್ಬಾಳ ತಂಡವನ್ನು 31-20 ಅಂಕಗಳ ಅಂತರದಲ್ಲಿ ಮಣಿಸಿ ಎರಡನೇ ಜಯ ದಾಖಲಿಸಿ ಕ್ವಾರ್ಟರ್ ಫೈನಲ್ ಹಾದಿಯನ್ನು ಸುಗಮಗೊಳಿಸಿತು.
ಬಲಿಷ್ಠ ಬ್ಯಾಂಕ್ ಆಫ್ ಬರೋಡ ತಂಡ ಕೆಎಫ್ಡಿಸಿ ಸುಳ್ಯ ತಂಡವನ್ನು 39-26 ಅಂಕಗಳ ಅಂತರದಿಂದ ಮಣಿಸಿತು. ಪ್ರೊ ಕಬಡ್ಡಿ ಆಟಗಾರರನ್ನು ಒಳಗೊಂಡ ಬ್ಯಾಂಕ್ ಆಫ್ ಬರೋಡ ತಂಡ ಹಾಗೂ ಕೆಎಫ್ಡಿಸಿ ಮಧ್ಯೆ ಬಿರುಸಿನ ಪೈಪೋಟಿ ಕಂಡು ಬಂದರೂ ಮುನ್ನಡೆ ಕಾಯ್ದುಕೊಂಡ ಬಿಒಬಿ ಗೆಲುವಿನ ನಗೆ ಬೀರಿತು.
ಇನ್ನೊಂದು ಪಂದ್ಯದಲ್ಲಿ ಎಸ್ಡಿಎಂ ಉಜಿರೆ ತಂಡವು ಎನ್ಎಫ್ಸಿ ಕಾಸರಗೋಡು ತಂಡವನ್ನು 33-17 ಅಂಕಗಳ ಅಂತರದ ಗೆಲುವಿನೊಂದಿಗೆ ಸತತ ಎರಡನೇ ಜಯ ದಾಖಲಿಸಿತು.
ತಡ ರಾತ್ರಿ ನಡೆದ ಮತ್ತೊಂದು ಪಂದ್ಯದಲ್ಲಿ ಕೆಎಫ್ಡಿಸಿ ಸುಳ್ಯ ತಂಡವು ಬಿಆರ್ಸಿ ಬೆಂಗಳೂರು ತಂಡವನ್ನು 41-31 ಅಂಕಗಳ ಅಂತರದಿಂದ ಪರಾಭವಗೊಳಿಸಿ ಪ್ರಥಮ ಜಯ ದಾಖಲಿಸಿತು.
ದಿನದ ಕೊನೆಯ ಪಂದ್ಯದಲ್ಲಿ ಆಳ್ವಾಸ್ ಮೂಡಬಿದ್ರೆ ತಂಡವು ಕರೆಂಕಿ ಬಂಟ್ವಾಳ ತಂಡವನ್ನು 36-12 ಅಂಕಗಳ ಅಂತರದ ಜಯ ದಾಖಲಿಸಿತು. ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಆಳ್ವಾಸ್ ತಂಡ ಭರ್ಜರಿ ಜಯ ದಾಖಲಿಸಿತು.