ಸುಳ್ಯ:ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃಸಂಘದ ಸರ್ವಸದಸ್ಯರ ಮಹಾಧಿವೇಶನ ಜೂನ್ 1 ರಂದು ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾತೃಸಂಘದ ಅಧ್ಯಕ್ಷ ಲೋಕಯ್ಯ ಗೌಡ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಮಾಹಿತಿ ನೀಡಿದರು.ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃಸಂಘವು ಜಿಲ್ಲೆಯ
ಎಲ್ಲಾ ತಾಲೂಕುಗಳ ಗೌಡ ಸಂಘಗಳ ಸಹಭಾಗಿತ್ವದಲ್ಲಿ 2024 ಆಗಸ್ಟ್ 30 ರಂದು ನೋಂದಾವಣೆಗೊಂಡು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.ಇದೀಗ ನೋಂದಾವಣೆಗೊಂಡು ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯ ಹಾಗೂ ಗೌರವ ಸಲಹೆಗಾರರ ತಂಡ ಸೇರಿ ಸಂಘಕ್ಕೆ 102 ಜನ ಪದಾಧಿಕಾರಿಗಳ ತಂಡ ಇದೆ. ಜಿಲ್ಲಾ ಮಾತೃ ಸಂಘವು ತನ್ನ ಉದ್ದೇಶದಲ್ಲಿ ತಿಳಿಸಿದಂತೆ ಸಮಾಜದ ಸಂಸ್ಕೃತಿ, ಆಚಾರ-ವಿಚಾರಗಳ ಅಡಿಪಾಯದಲ್ಲಿದ್ದು, ಇದನ್ನು ಒಪ್ಪಿಕೊಂಡು ಬರುವ ಪ್ರತಿಯೊಬ್ಬರಿಗೂ ಸದಸ್ಯತನ ನೀಡಲಾಗುತ್ತದೆ. ಸಂಘದಲ್ಲಿ ಆಜೀವ ಸದಸ್ಯತನ, ಮಹಾಪೋಷಕ ಹಾಗೂ ಪೋಷಕ ಸದಸ್ಯತ್ವಗಳ ಮೂರು ಹಂತದ ಸದಸ್ಯತನ ಹೊಂದಿದ್ದು, ಈಗಾಗಲೇ 1300 ಜನ ಸದಸ್ಯರಾಗಿದ್ದಾರೆ.
ಮಂಗಳೂರಿನ ಚಿಲಿಂಬಿಯಲ್ಲಿರುವ ಮಂಗಳೂರು ಒಕ್ಕಲಿಗ ಗೌಡಸಮಾಜದ ಕಾಂಪ್ಲೆಕ್ಸ್ ನಲ್ಲಿ ಜಿಲ್ಲಾ ಮಾತೃ ಸಂಘದ ಕಛೇರಿಯನ್ನು ತೆರೆದಿದ್ದು, ಸದಸ್ಯರ ನೋಂದಣಿ, ಮಾಹಿತಿ ವಿವರ, ಸಮಾಜ ಬಾಂಧವರ ಸಮೀಕ್ಷೆ ಮುಂತಾದ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ. ಎಲ್ಲಾ ಸದಸ್ಯರನ್ನು ಒಂದೇ ಸೂರಿನಡಿ ಸೇರಿಸಬೇಕೆಂಬ ಉದ್ದೇಶದಿಂದ ಜೂನ್ 1ರಂದು ಆದಿತ್ಯವಾರದಂದು ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸರ್ವಸದಸ್ಯರ ಮಹಾಧಿವೇಶನವನ್ನು ಹಮ್ಮಿಕೊಳ್ಳಲಾಗಿದೆ. ಅಧಿವೇಶನದಲ್ಲಿ ಜಿಲ್ಲಾ ಸಂಘವೂ ಮುಂದೆ ತೆಗೆದುಕೊಳ್ಳಬೇಕಾದ

ಕೆಲಸಕಾರ್ಯಗಳು ಮತ್ತು ಯೋಜನೆಗಳ ಬಗ್ಗೆ ವಿಚಾರ ಮಂಡನೆ ನಡೆಯಲಿದೆ. ಅಲ್ಲದೇ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಗುತ್ತದೆ. ಅಧಿವೇಶನವನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಉದ್ಘಾಟನೆ ಮಾಡಲಿದ್ದಾರೆ. ದ.ಕ.ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕು ಒಕ್ಕಲಿಗರ ಯಾನೆ ಗೌಡ ಸಂಘದ ಅಧ್ಯಕ್ಷರುಗಳು ಗೌರವ ಉಪಸ್ಥಿತರಿರುತ್ತಾರೆ. ಜಿಲ್ಲಾ ಮಾತೃ ಸಂಘದ ಅಧ್ಯಕ್ಷರಾದ ಲೋಕಯ್ಯ ಗೌಡ ಕೆ. ಯವರ ಅಧ್ಯಕ್ಷತೆಯಲ್ಲಿ ಈ ಅಧಿವೇಶನವನ್ನು ನಡೆಸಲಾಗುತ್ತದೆ.
ಜಿಲ್ಲಾ ಸಂಘದ ಉಪಾಧ್ಯಕ್ಷರುಗಳಾಗಿ, ನಿತ್ಯಾನಂದ ಮುಂಡೋಡಿ ಸುಳ್ಯ, ರಾಮದಾಸ ಗೌಡ ಪುತ್ತೂರು, ಪೂವಾಜೆ ಕುಶಾಲಪ್ಪ ಗೌಡ ಬೆಳ್ತಂಗಡಿ, ಲಿಂಗಪ್ಪ ಗೌಡ ಕೆ.- ಬಂಟ್ವಾಳ, ತಿಮ್ಮಪ್ಪ ಗೌಡ ಕುಂಡಡ್ಕ ಕಡಬ ರವರುಗಳು ಇದ್ದು, ಸಂಘದ ಪ್ರಧಾನಕಾರ್ಯದರ್ಶಿಯಾಗಿ ದಿನೇಶ್ ಮಡಪ್ಪಾಡಿ, ಕೋಶಾಧಿಕಾರಿಯಾಗಿ ಹೆಚ್. ಪದ್ಮಗೌಡ ಬೆಳಾಲು, ಕಾರ್ಯದರ್ಶಿಗಳಾಗಿ ರಾಮಣ್ಣ ಗೌಡ ಕೊಂಡೆಬಾಯಿ ಮತ್ತು ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಸಂಘವನ್ನು ಮುನ್ನಡೆಸುತ್ತಿದ್ದಾರೆ ಎಂದು ಅವರು ವಿವರ ನೀಡಿದರು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ಗೌಡ ಸಂಘಗಳ ಒಗ್ಗೂಡುವಿಕೆಯ ಜಿಲ್ಲಾ ಮಾತೃಸಂಘವನ್ನು ಬಲಿಷ್ಠವಾಗಿ ಕಟ್ಟುತ್ತಿದ್ದೇವೆ. ಈ ಸಂಘದ ಮೂಲಕ ಸ್ವಜಾತಿ ಬಾಂಧವರ ಜನಸಂಖ್ಯಾ ಸಮೀಕ್ಷೆ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ, ಅಗತ್ಯವಿರುವವರಿಗೆ ಶೈಕ್ಷಣಿಕವಾಗಿ , ಆರೋಗ್ಯಕ್ಕೆ ಸಂಬಂಧಿಸಿ ಹಾಗೂ ಇತರ ರೀತಿಯ ನೆರವು ಕೊಡಬೇಕು ಎಂಬ ಉದ್ದೇಶವಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಆಡಳಿತ ಮಂಡಳಿ ನಿರ್ದೇಶಕ ಪಿ.ಸಿ.ಜಯರಾಮ, ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ ಉಪಸ್ಥಿತರಿದ್ದರು.