ಸುಳ್ಯ:ಜಗತ್ತು ಆಧುನಿಕ ತಂತ್ರಜ್ಞಾನದ ನಾಗಾಲೋಟದಲ್ಲಿದ್ದರೆ ತೊಡಿಕಾನ ಗ್ರಾಮ 50 ವರ್ಷ ಹಿಂದಕ್ಕೆ ಹೋಗಿದೆ. ನಿರಂತರ ಸಂಪರ್ಕ ಕಡಿತಗೊಳ್ಳುವ ಬಿಎಸ್ಎನ್ಎಲ್ ಟವರ್ನಿಂದ ಗ್ರಾಮಸ್ಥರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿತಗೊಳ್ಳುವ ಸ್ಥಿತಿ ನಿರ್ಮಾಣ ಆಗಿದೆ. ಮೂಲಭೂತ ಅಗತ್ಯತೆಯಾಗಿ ಮಾರ್ಪಾಡಾದ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಇಡೀ ಗ್ರಾಮಸ್ಥರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಒಂದು ತಿಂಗಳಲ್ಲಿ ನೆಟ್ವರ್ಕ್ ಸಮಸ್ಯೆ ಸರಿಪಡಿಸದಿದ್ದಾರೆ ಇಡೀ ಗ್ರಾಮಸ್ಥರು ಸೇರಿ
ಹೋರಾಟ ನಡೆಸಲಾಗುವುದು ಎಂದು ತೊಡಿಕಾನ ಗ್ರಾಮದ ಪ್ರಮುಖರು ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ‘ ಹಲವು ವರ್ಷಗಳ ಹೋರಾಟದ ಬಳಿಕ 2009ರಲ್ಲಿ ಬಿಎಸ್ಎನ್ಎಲ್ ಟವರ್ ನಿರ್ಮಾಣ ಆಯಿತು. ಕೆಲವು ವರ್ಷಗಳ ಕಾಲ ಟವರ್ ಚೆನ್ನಾಗಿ ನಿರ್ವಹಿಸಿತ್ತು ಬಳಿಕ ಬ್ಯಾಟರಿ ಸಮಸ್ಯೆಯಿಂದ ಕರೆಂಟ್ ಇದ್ದರೆ ಮಾತ್ರ ಟವರ್ ಕಾರ್ಯಾಚರಿಸುತ್ತಿತ್ತು. ಆದರೆ ನಿರ್ವಹಣೆಯ ಕೊರತೆಯಿಂದ ಟವರ್ ಇದೀಗ ಸಂಪೂರ್ಣ ಅಧೋಗತಿಗೆ ತಲುಪಿದ್ದು ಕರೆಂಟ್ ಇದ್ದರೂ ಟವರ್ ಕಾರ್ಯಾಚರಿಸುತ್ತಿಲ್ಲ. ಕರೆಂಟ್ ಹೋದರೆ ಸಂಪರ್ಕ ಕಡಿತಗೊಳ್ಳುವ ಟವರ್ ಮತ್ತೆ ಚಾಲೂ

ಆಗಲು 20 ನಿಮಿಷ ಬೇಕು. ಈ ಮಧ್ಯೆ ಮತ್ತೆ ವಿದ್ಯುತ್ ಹೋದರೆ ಮತ್ತೆ ಕಡಿತವಾಗುತ್ತದೆ. ಹೀಗೆ ಕಳೆದ ವಾರ 5 ದಿನ ನಿರಂತರ ಟವರ್ ಸಂಪರ್ಕ ಕಡಿತವಾಗಿತ್ತು. ಬೇರೆ ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲದ ತೊಡಿಕಾನಕ್ಕೆ ಬಿಎಸ್ಎನ್ಎಲ್ ಟವರ್ ಅನಿವಾರ್ಯ. ಮೊಬೈಲ್ ಟವರ್ ಬಂದ ಮೇಲೆ ಇಡೀ ಗ್ರಾಮದಲ್ಲಿ ಸ್ಥಿರ ದೂರವಾಣಿಯೂ ಇಲ್ಲದಂತಾಗಿದೆ. ಎಲ್ಲವೂ ‘ಒಟಿಪಿ’ ಆಧಾರದಲ್ಲಿ ನಡೆಯುವ ಕಾರಣ ಸರಕಾರಿ ಸೇವೆ, ಬ್ಯಾಂಕಿಂಗ್ ಸೇವೆ, ಸಹಕಾರಿ ಬ್ಯಾಂಕ್ ಸೇವೆ, ಆರೋಗ್ಯ ಹದಗೆಟ್ಟರೆ ಕರೆ ಮಾಡಲು, ವರ್ಕ್ ಪ್ರಂ ಹೋಮ್, ಆನ್ ಲೈನ್ ಕ್ಲಾಸ್, ಡಿಜಿಟಲ್ ಟ್ರನ್ಸಾಕ್ಷನ್, ಆಧಾರ್ ಲಿಂಕ್, ಪಾರ್ಸೆಲ್ ಸೇವೆ ಹೀಗೆ ಎಲ್ಲವೂ ಮೊಬೈಲ್ ನೆಟ್ವರ್ಕ್, ಇಂಟರ್ನೆಟ್ ಸೇವೆಯ ಆಧಾರದಲ್ಲಿಯೇ ನಡೆಯುತ್ತದೆ. ನೆಟ್ವರ್ಕ್ ಕಡಿತ ಆದರೆ ಜನರು ಎಲ್ಲಾ ಸೇವೆಯಿಂದ ವಂಚಿತರಾಗುತ್ತಾರೆ, ಇಡೀ ಗ್ರಾಮವೇ ಹೊರ ಜಗತ್ತಿನಿಂದ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ಅವರು ಹೇಳಿದರು.
ಕಳೆದ 10 ವರ್ಷದಿಂದ ನೆಟ್ವರ್ಕ್ ಸಮಸ್ಯೆ ಇದ್ದು ಇದರ ಪರಿಹಾರಕ್ಕೆ ನಿರಂತರ ಹೋರಾಟ ನಡೆಸುತ್ತಾ ಬಂದರು ಫಲ ಶೂನ್ಯವಾಗಿದೆ. ಸಂಸದರಿಗೆ, ಸಚಿವರುಗಳಿಗೆ, ಬಿಎಸ್ಎನ್ಎಲ್ನ ಹಿರಿಯ ಅಧಿಕಾರಿಗಳು ಸೇರಿ ಎಲ್ಲರಿಗೂ ಹಲವು ಬಾರಿ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಿಲ್ಲ, ಪ್ರಧಾನಿ, ಮುಖ್ಯಮಂತ್ರಿ ಕಾರ್ಯಾಲಯದವರೆಗೆ ಸಂಪರ್ಕಿಸಿದರೂ ಪ್ರಯೋಜನ ಆಗಿಲ್ಲ ಎಂದು ಅವರು ಹೇಳಿದರು. ತೊಡಿಕಾನದ ಟವರ್ ಸರಿಪಡಿಸಬೇಕು ಎಂದು ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ. ಒಂದು ತಿಂಗಳಲ್ಲಿ ನೆಟ್ವರ್ಕ್ ಸರಿಪಡಿಸದಿದ್ದರೆ ಹೋರಾಟದ ಹಾದಿ ಹಿಡಿಯುತ್ತೇವೆ.ಗ್ರಾಮಸ್ಥರು ಎಲ್ಲರೂ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.

ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಮಾತಾನಾಡಿ’ ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲಾ ಸರಕಾರಿ ಸೇವೆ ನೀಡಬೇಕಾದರೂ ಒಟಿಪಿ ಅತೀ ಅಗತ್ಯ. ಅದಕ್ಕೆ ನೆಟ್ ವರ್ಕ್ ಅತೀ ಅಗತ್ಯವಾಗಿದೆ. ತೊಡಿಕಾನ ಗ್ರಾಮದಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರಾಕೃತಿಕ ವಿಕೋಪ ಮತ್ತಿತರ ತುರ್ತು ಸಂದರ್ಭದಲ್ಲಿ, ಆರೋಗ್ಯ ಸಮಸ್ಯೆ ಸಂದರ್ಭದಲ್ಲಿ ನೆಟ್ ವರ್ಕ್ ಸಮಸ್ಯೆ ತೀರ್ವ ಸಮಸ್ಯೆಯನ್ನು ಉಂಟು ಮಾಡುತಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ವಿಜೇತ್ ಮರುವಳ ಮಾತನಾಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನ್ನೂರು, ಸದಸ್ಯ ರವೀಂದ್ರ ಪಂಜಿಕೋಡಿ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು .