ಸುಳ್ಯ:ರಾಜ್ಯದಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿರುವ ಜನಔಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅವರು ಜನಔಷಧಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಲಕ್ಷಾಂತರ ಬಡ ಜನರಿಗೆ ಕಡಿಮೆ ಬೆಲೆಯ, ಉತ್ತಮ ಗುಣಮಟ್ಟದ
ಜನರಿಕ್ ಔಷಧಗಳನ್ನು ಒದಗಿಸುತ್ತಿತ್ತು. ಎಷ್ಟೋ ಜನ ಔಷಧಕ್ಕೆ ಹಣ ಇಲ್ಲ ಎಂದು ಮಾತ್ರೆಗಳನ್ನು ತೆಗೆದುಕೊಳ್ಳದೆ ಇರುವವರನ್ನು ನಾವು ಕಂಡಿದ್ದೇವೆ. ಈ ಯೋಜನೆಯಿಂದ ಅತ್ಯಂತ ಕಡಿಮೆ ದರದಲ್ಲಿ ಔಷಧವನ್ನು ಪಡೆಯುವ ಕಾರಣ ತಮ್ಮ ಜೀವನವನ್ನು ಉಳಿಸಿದ್ದಾರೆ. ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಇಂದು ಈ ಯೋಜನೆಗೆ ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನೀಡಿರುವ ಜನಔಷಧಿ ಕೇಂದ್ರಗಳು ಬಡವರಿಗೆ ಅವಶ್ಯಕವಿಲ್ಲ, ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಔಷಧಿ ಕೊಡಬೇಕು ಎಂಬ ಹೇಳಿಕೆ ದುರಾದೃಷ್ಟಕರವಾಗಿದ್ದು, ಈ ಸರ್ಕಾರದ ಈ ನಿಲುವನ್ನು ಹಿಂಪಡೆಯಬೇಕು ಎಂದು ಅವರು ಹೇಳಿದ್ದಾರೆ.