*ಗಣೇಶ್ ಮಾವಂಜಿ.
ಅದೊಂದು ಕಾಲವಿತ್ತು. ಗದ್ದೆಯಲ್ಲಿ ಕೆಲಸ ಮಾಡುವ ಕೆಲಸಗಾರರು ಊಟಕ್ಕೆಂದು ಮನೆಗೆ ಬಂದಾಗ ಮನೆಯ ಯಜಮಾನ ಹಲಸಿನ ಹಣ್ಣು ಕೊಯ್ದು ತಿನ್ನಲು ರೆಡಿ ಮಾಡುತ್ತಿದ್ದನಂತೆ. ಕೆಲಸಗಾರರು ಕೂಡಾ ಏನೂ ಅಂದುಕೊಳ್ಳದೆ ಹೊಟ್ಟೆ ತುಂಬಾ ಹಣ್ಣು ತಿಂದು ತುಸುವೇ ಊಟ ಮಾಡುತ್ತಿದ್ದರಂತೆ.!
ಹೀಗೆ ಹಲಸಿನ ಹಣ್ಣಿನಲ್ಲಿ ಕೆಲಸಗಾರರ ಹೊಟ್ಟೆ ತುಂಬುವಂತಾದರೆ ಹೆಚ್ಚು ಊಟ ಬೇಕಾಗಿಲ್ಲ ಎಂಬುದು ಮನೆಯ ಯಜಮಾನನ ದೂರಾಲೋಚನೆ. ಆಗೆಲ್ಲಾ ಗದ್ದೆ ಬೇಸಾಯ ಮಾಡಿದರೂ ವರ್ಷದ ಎಲ್ಲಾ ದಿನಗಳಲ್ಲೂ
ಹೊಟ್ಟೆ ತುಂಬಾ ಉಣ್ಣಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಕೆಲಸ ಮಾಡಿದ ಕೆಲಸಗಾರರಿಗೆ ದಿನಗೂಲಿ ಕೊಡುತ್ತಿದ್ದದ್ದು ಕೂಡಾ ಹಣದ ರೂಪದಲ್ಲಲ್ಲ., ಬದಲಾಗಿ ಬೆಳೆದ ಭತ್ತವನ್ನೇ ಕೂಲಿಯಾಗಿ ಕೊಡಲಾಗುತ್ತಿತ್ತು!. ಕೆಲಸಗಾರರಿಗೂ ಕೂಡಾ ಬೇಕಾಗಿದ್ದದ್ದು ಅದೇ. ಮನೆ ಮಕ್ಕಳ ಹೊಟ್ಟೆ ತಣ್ಣಗಾಗಿಸುವುದಷ್ಟೇ ಕೆಲಸಗಾರರ ಗುರಿಯಾದುದರಿಂದ ಕೂಲಿಗಾಗಿ ಭತ್ತ ಸಿಕ್ಕಿದರೆ ಅದೇ ಪುಣ್ಯ ಎಂದುಕೊಳ್ಳುತ್ತಿದ್ದರು. ಹೀಗಾದುದರಿಂದ ಸಾಧ್ಯವಾದಷ್ಟೂ ಬೆಳೆದ ಬೆಳೆಯನ್ನು ಉಳಿಸಿಕೊಳ್ಳುವುದಷ್ಟೇ ಮನೆಯ ಯಜಮಾನನ ಉದ್ದೇಶವಾಗಿತ್ತು. ಹಾಗಾಗಿಯೇ ಊಟದ ಸಂದರ್ಭದಲ್ಲಿ ಈ ಹಲಸಿನ ಹಣ್ಣು ಎಂಟ್ರಿ ಪಡೆದುಕೊಳ್ಳುತ್ತಿದ್ದದ್ದು.
ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ನಂತರದ ದಿನಗಳಲ್ಲಿ ಕೆಲಸಗಾರರಿಗೂ ಹಲಸಿನ ಹಣ್ಣು ಬೇಡವಾಯಿತು. ಹಣ್ಣು ಮಾತ್ರವಲ್ಲ ಅದರಿಂದ ಮಾಡಿದ ಚಂಗುಳಿ (ಪದಾರ್ಥ), ಹಪ್ಪಳ, ಸಂಡಿಗೆ ಅಥವಾ ಇನ್ಯಾವುದೇ ವಸ್ತುಗಳು ಹೊಟ್ಟೆ ಹಾಳು ಮಾಡುವ ತಿನಿಸಾಯಿತು. ಹಾಗಾಗಿ ಮನೆಯ ಯಜಮಾನ ಕೂಲಿಯಾಳುಗಳಿಗೆ ಹಿಂದಿನಂತೆ ಊಟಕ್ಕೆ ಬಂದಾಗ ಅಲ್ಲಿ ಹಲಸಿನ ಹಣ್ಣು ಬಿಡಿಸಿಟ್ಟರೆ ಆ ಮನೆಗೆ ಕೆಲಸಕ್ಕೆ ಹೋಗುವವರೇ ಇಲ್ಲವಾಯಿತು. ಹೀಗಾಗಿ ಅಕ್ಕಿ ಉಳಿಸುವ ಉಪಾಯ ಕ್ರಮೇಣ ಇಲ್ಲವಾಯಿತು.

ಕಾಲ ಚಕ್ರ ಉರುಳಿದಂತೆ ಭತ್ತದ ಗದ್ದೆಯ ತುಂಬಾ ವಾಣಿಜ್ಯ ಬೆಳೆಗಳು ತುಂಬಿ ಹೋದವು. ಗದ್ದೆಯ ಬದುವಿನಲ್ಲಿದ್ದ ಹಲಸಿನ ಮರಗಳು ಕೂಡಾ ಕೊಡಲಿಯೇಟಿಗೆ ಬಲಿಯಾಗಿ ಅಲ್ಲಿ ಕಿಸೆ ತುಂಬಿಸುವ ಅಡಿಕೆ, ರಬ್ಬರ್ ಮರಗಳು ಬಂದು ಬಿಟ್ಟಿವೆ. ಹಾಗಾಗಿ ಹಲಸಿನ ಹಣ್ಣು ಅಪರೂಪ ಎನ್ನುವಂತಾಯಿತು. ಹಿರಿಯರು ಹಲಸಿನ ಹಣ್ಣಿನ ಗತಕಾಲದ ವೈಭವವನ್ನು ಬಣ್ಣಿಸಿದಾಗ ಕಿರಿಯರು’ಹೌದಾ?’ ಎನ್ನುವಷ್ಟು ಅದು ಆಶ್ಚರ್ಯಕರ ವಿಷಯವಾಯಿತು.
ಹಲಸು ಮಾತ್ರವಲ್ಲ. ಮಾವಿನ ಹಣ್ಣಿಗೂ ಗತಿಯಾದದ್ದು ಇದೇ. ಬೇಸಿಗೆಯ ರಜೆಯಲ್ಲಿ ಮಕ್ಕಳು ಮನೆಯಲ್ಲಿದ್ದರೆ ಮಾವಿನ ಹಣ್ಣು ತಿಂದೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ವಿಸ್ತಾರ ಜಾಗ ಆವರಿಸುವ ಮಾವು, ಹಲಸುಗಳು ಅಡಿಕೆ ಮರಗಳಿಗೆ ಜಾಗ ಬಿಟ್ಟುಕೊಡುವಂತಾದಾಗ ಅಂದಿನ ಅದರ ವೈಭೋಗ ಮರೆಯಾಗುವಂತಾಯಿತು.
ಹಳೆಯ ಕಾಲದ ಪದ್ಧತಿ, ಆಚರಣೆಗಳ ಮಹತ್ವ ಅರಿತುಕೊಂಡ ಕೆಲವು ಹಿರಿಯರು ಹಾಗೂ ಅದರಿಂದ ಪ್ರೇರಿತಗೊಂಡ ಕೆಲವು ಕಿರಿಯರು ಹಲಸಿಗೆ ಮೌಲ್ಯವರ್ಧನೆ ನೀಡುವ ಮಹತ್ತರ ನಿರ್ಧಾರ ಕೈಗೊಂಡರು. ಹಲಸಿನಿಂದ ಬಗೆಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಲು ಸಾಧ್ಯವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಾಗ ಹಲಸಿಗೆ ಮತ್ತೆ ಹಿಂದಿನ ಮಹತ್ವ ದೊರೆಯುವಂತಾಯಿತು. ಇದೀಗ ಅಲ್ಲಲ್ಲಿ ಆಯೋಜಿಸಲಾಗುವ ‘ಹಲಸು ಮೇಳ’ ಕ್ಕೆ ಜನರು ಆಸಕ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರಲ್ಲದೆ ಹಲಸಿನಿಂದ ತಯಾರಿಸಲಾಗುವ ಅಷ್ಟೂ ವಸ್ತುಗಳನ್ನು ಖರೀದಿಸಿ ಹಲಸಿನತ್ತ ಮತ್ತೆ ಪ್ರೀತಿ ಹೊಂದುತ್ತಿದ್ದಾರೆ. ಕೃಷಿ ಜಾಗದಲ್ಲಿ ಹಲಸು ಇದ್ದಾಗ ಅದಕ್ಕೆ ಸಿಗದಿದ್ದ ಮಹತ್ವ ಇದೀಗ ಅದು ಕಣ್ಮರೆಯಾದಾಗ ದೊರೆಯುವಂತಾಗಿದೆ.
ಹಿಂದಿನ ಕಾಲದ ಹೆಚ್ಚಿನ ಆಚಾರ, ವಿಚಾರ, ಪದ್ಧತಿಗಳು ಇತ್ತೀಚಿನ ದಿನಗಳಲ್ಲಿ ಮತ್ತೆ ಮಹತ್ವ ಪಡೆದುಕೊಳ್ಳುತ್ತಿರುವುದು ನಿಜ. ಅದಕ್ಕಾಗಿಯೇ ಕಾರ್ಯಕ್ರಮ ಆಯೋಜಿಸಿ ಗತಕಾಲದ ನೆನಪುಗಳನ್ನು ಮತ್ತೆ ಕೆದಕುವುದರಿಂದ ಕಿರಿಯರಿಗೂ ಅಂದಿನ ಪದ್ಧತಿಗಳು ತುಸುವಾದರೂ ಗೊತ್ತಾಗುವಂತಾಗಿದೆ. ಮುಂಗಾರಿನ ಹಬ್ಬದಂತಿರುವ ‘ಆಟಿಡೊಂಜಿ ದಿನ’ ಕಾರ್ಯಕ್ರಮ ನೈಸರ್ಗಿಕ ಆಹಾರಗಳತ್ತ ಮನಸ್ಸು ಹೊರಳುವಂತೆ ಮಾಡುತ್ತಿದೆ. ಭೂಮಿ ತಾಯಿಗೆ ನಮನ ಸಲ್ಲಿಸುವ ‘ಕೆಡ್ಡಸ ಆಚರಣೆ’ ಯಿಂದಾಗಿ ರೈತರ ಅಂದಿನ ಜೀವನ ಪದ್ಧತಿಯನ್ನು ಅರಿಯುವಂತಾಗುತ್ತಿದೆ. ‘ಕೆಸರ್ದ ಗೊಬ್ಬು’ ಕಾರ್ಯಕ್ರಮದಿಂದಾಗಿ ಮೊಬೈಲ್ ಗೇಮ್ ಗಳ ಬದಲಾಗಿ ಸಾಂಪ್ರದಾಯಿಕ ಆಟ, ಕೂಟಗಳತ್ತ ಮಕ್ಕಳು ಆಸಕ್ತಿ ಬೆಳೆಸುವಂತಾಗುತ್ತಿದೆ.
ಯಾವುದೇ ವಸ್ತುವಿನ ಬೆಲೆ ಅರಿವಾಗುವುದು ಅದು ನಮ್ಮಿಂದ ದೂರವಾದಾಗ ಮಾತ್ರ!. ಅದು ನಮ್ಮ ಬಳಿಯಲ್ಲೇ ಇದ್ದರೆ ಕಾಲ ಕಸಕ್ಕಿಂತ ಕೀಳಾಗಿ ಕಾಣುತ್ತೇವೆ. ಇದು ಕೇವಲ ವಸ್ತುವಿಗೆ ಮಾತ್ರ ಸೀಮಿತವಾದ ಮಾತಲ್ಲ. ಬದಲಾಗಿ ವ್ಯಕ್ತಿಗಳಿಗೂ ಅನ್ವಯಿಸುತ್ತದೆ. ನಮ್ಮೊಂದಿಗೇ ಇರುವ ನಮ್ಮವರು ನಮ್ಮ ಜೊತೆಯಲ್ಲಿದ್ದಾಗ ಅವರ ಮಹತ್ವದ ಅರಿವಾಗುವುದೇ ಇಲ್ಲ. ಅವರು ಒಂದೆರಡು ದಿನದ ಮಟ್ಟಿಗೆ ಮನೆ ಬಿಟ್ಟು ಬೇರೆಡೆಗೆ ಹೋದರೆ, ಒಂದಷ್ಟು ದಿನ ಮುನಿಸಿಕೊಂಡು ದೂರ ಸರಿದರೆ, ಅದ್ಯಾವುದೋ ಕಾರಣಕ್ಕಾಗಿ ಬೇರೆಡೆಗೆ ಸರಿದು ಹೋದರೆ ಅಥವಾ ಅಕಸ್ಮಾತ್ತಾಗಿ ಗತಿಸಿದರೆ ಅವರ ಮಹತ್ವದ ಅರಿವು ಖಂಡಿತವಾಗಿಯೂ ಆಗುತ್ತದೆ.

ಸದಾ ಕೀಟಲೆ ಕೊಡುವ ಗೆಳತಿ, ಪ್ರೀತಿಯಿಂದ ಏನಾದರೂ ಹೇಳಿ ರೇಗಿಸಿ ಮಜಾ ತೆಗೆದುಕೊಳ್ಳುವ ಗೆಳೆಯ, ಮಾತು ಮಾತಿಗೆ ‘ಜಾಗ್ರತೆ’ ಎಂದು ಕಾಳಜಿ ತೋರುವ ಅಪ್ಪ, ಅಡಿಗಡಿಗೆ ಎಚ್ಚರಿಕೆ ನೀಡಿ ದಾರಿ ತಪ್ಪದಂತೆ ದಾರಿದೀಪವಾಗುವ ಅಮ್ಮ, ಗತಕಾಲದ ಬಗ್ಗೆ ವಿವರಿಸುತ್ತಾ ‘ಹೀಗೆ ಮಾಡಿದರೆ ಹಾಗೆ ಆಗುತ್ತದೆ’ ಎಂದು ಸದಾ ಹುಷಾರಾಗಿರುವಂತೆ ನೋಡಿಕೊಳ್ಳುವ ಹಿರಿಜೀವಗಳು…, ಹೀಗೆ ಎಲ್ಲರೂ ಆ ಕ್ಷಣಕ್ಕೆ ಕಿರಿಕಿರಿ ತರಿಸುವವರೇ ಆಗಿರುತ್ತಾರೆ. ಆದರೆ ಒಂದೊಮ್ಮೆ ಅವರ ಉಪಸ್ಥಿತಿ ಇಲ್ಲವಾದರೆ, ಅನಿವಾರ್ಯವಾಗಿ ಒಂದೆರಡು ದಿನಗಳ ಮಟ್ಟಿಗೆ ಬೇರೆಡೆಗೆ ಹೋಗುವಂತಾದರೆ ಆಗ ಅವರ ನೆನಪು ಕಾಡುತ್ತದೆ.
ಚಾಡಿ ಹೇಳಿ ಅಪ್ಪ ಅಮ್ಮನಿಂದ ಬೈಗುಳ ತಿನಿಸುತ್ತಿದ್ದ ಅಕ್ಕನಿಗೆ ಕಂಕಣ ಭಾಗ್ಯ ಕೂಡಿ ಬಂದು ಆಕೆ ಕಣ್ಣೀರಿಳಿಸಿ ಹೊಸಿಲು ದಾಟಿ ಹೋದಾಗ ಒಡಹುಟ್ಟಿದವರ ಕಣ್ಣಿಂದ ಕಂಬನಿ ಜಾರದಿರದು. ಎಲ್ಲೆಲ್ಲಿಂದಲೋ ಬಂದಿದ್ದರೂ ಒಂದೇ ಸೂರಿನಡಿ ದಿನ ಕಳೆಯುತ್ತಿದ್ದ ಹಾಸ್ಟೆಲ್ ವಿದ್ಯಾರ್ಥಿಗಳು ಕೊನೆಗೊಂದು ದಿನ ಅಗಲಲೇ ಬೇಕಾದಾಗ ಅಪ್ಪಿಕೊಂಡು ಪ್ರೀತಿ ಸ್ಫುರಿಸುವುದಿದೆಯಲ್ಲಾ.., ಅದು ಇದ್ದಾಗ ಇರದಿದ್ದ ಪ್ರೀತಿ, ಮಮಕಾರ ಅಗಲುವಿಕೆಯ ಸಂದರ್ಭದಲ್ಲಿ ಉಲ್ಬಣಗೊಳ್ಳುವ ಉಚ್ಛ್ರಾಯ ಸ್ಥಿತಿಗೊಂದು ಉದಾಹರಣೆ.
ವಸ್ತುವಾದರೂ ಅಷ್ಟೇ., ವ್ಯಕ್ತಿಯಾದರೂ ಅಷ್ಟೇ.., ಬಳಿ ಇದ್ದಾಗ ಮಹತ್ವ ಅರಿವಾಗುವುದೇ ಇಲ್ಲ. ದೂರ ಸರಿದಾಗ ಅಲ್ಲೊಂದು ಶೂನ್ಯ ಆವರಿಸುತ್ತದೆ. ‘ಛೇ ಅವರಿರಬೇಕಿತ್ತು’ ಎಂಬ ಮಿಸ್ಸಿಂಗ್ ಭಾಗ ಮನದೊಳಗೆ ಆವರಿಸುವುದು ಅವರು ನಮ್ಮನ್ನು ಅಗಲಿದಾಗ ಮಾತ್ರ. ಈಗಿನ ಫಿಜ್ಜಾ, ಬರ್ಗರ್ ಗಳು ಬಾಯಿಗೆ ರುಚಿ ಎನಿಸಿದರೂ ಮನೆಯವರೆಲ್ಲರೂ ಸುತ್ತುವರಿದು ಹಲಸಿನ ಹಣ್ಣನ್ನು ಕೊಯ್ದು ಅದರ ತೊಳೆಯನ್ನು ನಾಜೂಕಾಗಿ ಬಿಡಿಸಿ ಬಾಯಿಗಿರಿಸಿದ ನೆನಪು ಮನದೊಳಗೆ ಬಂದುಬಿಟ್ಟರೆ…ವ್ಹಾಹ್….ಅದರ ಖುಷಿಯನ್ನು ಪದಗಳಿಂದ ವರ್ಣಿಸಲು ಅಸಾಧ್ಯ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು, ಅಂಕಣಕಾರರು)















