ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸುತ್ತಿರುವ ಟೀಮ್ ಇಂಡಿಯಾ, ಮೊದಲ ದಿನದ ಊಟದ ವಿರಾಮದ ಹೊತ್ತಿಗೆ 31 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ. ಆರಂಭಿಕ ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕ ಗಳಿಸಿದ್ದಾರೆ. ಜೈಸ್ವಾಲ್ 51 ರನ್ ಗಳಿಸಿ (6 ಬೌಂಡರಿ, 1 ಸಿಕ್ಸರ್) ಕ್ರೀಸ್ನಲ್ಲಿದ್ದಾರೆ. ಅವರಿಗೆ ಶ್ರೇಯಸ್ ಅಯ್ಯರ್ (4*) ಸಾಥ್ ನೀಡುತ್ತಿದ್ದಾರೆ. ಜೈಸ್ವಾಲ್ ಹಾಗೂ ನಾಯಕ
ರೋಹಿತ್ ಶರ್ಮಾ ಮೊದಲ ವಿಕೆಟ್ಗೆ 40 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ 14 ರನ್ ಮಾತ್ರ ಗಳಿಸಿದ ರೋಹಿತ್, ಚೊಚ್ಚಲ ಪಂದ್ಯ ಆಡುತ್ತಿರುವ ಸ್ಪಿನ್ನರ್ ಶೋಯೆಬ್ ಬಷೀರ್ಗೆ ವಿಕೆಟ್ ಒಪ್ಪಿಸಿದರು.ಶುಭಮನ್ ಗಿಲ್ 34 ರನ್ ಗಳಿಸಿ ಔಟ್ ಆದರು. ಅವರ ವಿಕೆಟ್ ಜೇಮ್ಸ್ ಆ್ಯಂಡರ್ಸನ್ ಕಬಳಿಸಿದರು.
ಈ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕೆ.ಎಲ್. ರಾಹುಲ್ ಹಾಗೂ ರವೀಂದ್ರ ಜಡೇಜ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅಲ್ಲದೆ ವೇಗದ ಬೌಲರ್ ಮೊಹಮ್ಮದ್ ಸಿರಾಜ್ಗೆ ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ಭಾರತ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ರಜತ್ ಪಾಟೀದಾರ್ ಪದಾರ್ಪಣೆ ಮಾಡಿದ್ದು, ಕುಲದೀಪ್ ಯಾದವ್ ಹಾಗೂ ಮುಕೇಶ್ ಕುಮಾರ್ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಮತ್ತೊಂದೆಡೆ ಯುವ ಬ್ಯಾಟರ್ ಸರ್ಫರಾಜ್ ಖಾನ್ ಅವಕಾಶ ವಂಚಿತರಾಗಿದ್ದಾರೆ.
ಅತ್ತ ಇಂಗ್ಲೆಂಡ್ ತಂಡಕ್ಕೆ ಅನುಭವಿ ಬೌಲರ್ ಜೇಮ್ಸ್ ಆ್ಯಂಡರ್ಸನ್ ಸೇರ್ಪಡೆಗೊಂಡಿದ್ದಾರೆ. ಗಾಯಾಳು ಜಾಕ್ ಲೀಚ್ ಬದಲಿಗೆ ಶೋಯೆಬ್ ಬಷೀರ್ಗೆ ಚೊಚ್ಚಲ ಟೆಸ್ಟ್ ಕ್ಯಾಪ್ ಲಭಿಸಿದೆ. ಮಾರ್ಕ್ ವುಡ್ ಅವರನ್ನು ಕೈಬಿಡಲಾಗಿದೆ.
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 28 ರನ್ ಅಂತರದ ಜಯ ಗಳಿಸಿರುವ ಇಂಗ್ಲೆಂಡ್, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಭಾರತ ತಂಡ ಇಂತಿದೆ:
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಮುಕೇಶ್ ಕುಮಾರ್.












