ಸುಳ್ಯ:ಪರಿಸರ ನಾಶ, ಅರಣ್ಯ ನಾಶದಿಂದ ಪ್ರತಿ ವರ್ಷವೂ ಭೂಮಿ ಬತ್ತಿ ಬರಡಾಗುತ್ತಿದೆ. ಹವಾಮಾನ ವೈಪರೀತ್ಯ, ನೀರಿನ ಬವಣೆ, ಉಷ್ಣತೆ ವರ್ಷದಿಂದ ವರ್ಷಕ್ಕೆ ಏರುತಿದೆ. ಅರಣ್ಯ ಕಡಿಮೆಯಾಗುತ್ತಿದ್ದಂತೆ ಪರಿಸರದ ಅಸಮತೋಲನ ಸೃಷ್ಟಿಯಾಗುತ್ತಿದೆ.ಅದಕ್ಕೆ ಹೆಚ್ಚು ಪರಿಸರ, ಮರ ಬೆಳೆಸುವುದೊಂದೇ ಪರಿಹಾರ ಎಂಬುದನ್ನು ಮನಗಂಡಿರುವ ಅರಣ್ಯ ಇಲಾಖೆ ಭೂಮಿಯನ್ನು ಹಸಿರಾಗಿಸಲು ಪಣತೊಟ್ಟಿದೆ. ಭೂಮಿಗೆ
ಹಸಿರು ಹೊದಿಕೆ ಹೊದಿಸಲು ಈ ಬಾರಿ ಸುಬ್ರಹ್ಮಣ್ಯ ಉಪವಿಭಾಗದ
ಮೂರು ವಲಯಗಳಲ್ಲಿ ಒಟ್ಟು 1,84,200 ಗಿಡಗಳನ್ನು ಬೆಳೆಸಲಾಗಿದೆ. ಅರಣ್ಯ ಇಲಾಖೆಯ ನೆಡುತೋಪುಗಳಲ್ಲಿ ಬೆಳೆಸುವುದರ ಜೊತೆಗೆ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ. ಉಪ ವಿಭಾಗದ ಮೂರು ವಲಯಗಳಲ್ಲಿ ಈಗಾಗಗಲೇ ಗಿಡಗಳ ವಿತರಣೆ ಆರಂಭಿಸಲಾಗಿದೆ ಎಂದು ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ಸುಳ್ಯ ವಲಯದ ಮೇದಿನಡ್ಕ ಕೇಂದ್ರೀಯ ಸಸ್ಯಕ್ಷೇತ್ರದಲ್ಲಿ ಒಟ್ಟು 54 ಸಾವಿರ ಗಿಡಗಳನ್ನು ಬೆಳೆಯಲಾಗಿದೆ.ಇದರಲ್ಲಿ ಅರಣ್ಯ ಇಲಾಖೆಯ ನೆಡು ತೋಪುಗಳಲ್ಲಿ ನೆಡಲು 35 ಸಾವಿರ ಗಿಡ ಮತ್ತು ಸಾರ್ವಜನಿಕರ ವಿತರಣೆಗೆ 15 ಸಾವಿರ ಗಿಡಗಳನ್ನು ಮೀಸಲಿರಿಸಲಾಗಿದೆ. ಸುಳ್ಯ ವಲಯದಲ್ಲಿ ಈ ವರ್ಷ 80 ಹೆಕ್ಟೇರ್ ಪ್ರದೇಶದಲ್ಲಿ ಹೊಸತಾಗಿ ಅರಣ್ಯ ಬೆಳೆಸಲು ಯೋಜನೆ ರೂಪಿಸಲಾಗಿದೆ.
ಸಂಪಾಜೆ ಗ್ರಾಮದ ಎರಕಡಪು, ಅಜ್ಜಾವರ ಗ್ರಾಮದ ಇರಂತಮಜಲು,ಆಲೆಟ್ಟಿ ಗ್ರಾಮದ ಬಟ್ಟಂಗಾಯ,
ಮಂಡೆಕೋಲು ಗ್ರಾಮದ ಕನ್ಯಾನ, ಬೊಳುಗಲ್ಲು ಗ್ರಾಮದಲ್ಲಿ ಹೊಸತಾಗಿ ನೆಡುತೋಪು ಬೆಳೆಸಲಾಗುವುದು ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.

ಸುಬ್ರಹ್ಮಣ್ಯ ವಲಯದಲ್ಲಿ 72,400 ಗಿಡಗಳನ್ನು ಬೆಳೆಸಲಾಗಿದ್ದು,10,800 ಗಿಡ ರೈತರಿಗೆ ವಿತರಿಸಲು ಯೋಜನೆ ರೂಪಿಸಿದೆ.61,600 ಗಿಡಗಳನ್ನು ನೆಡು ತೋಪುಗಳಲ್ಲಿ ನೆಡಲಾಗುವುದು. ಸುಬ್ರಹ್ಮಣ್ಯ ವಲಯದಲ್ಲಿ 139 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಯೋಜನೆ ರೂಪಿಸಲಾಗಿದೆ. ಕೊಲ್ಲಮೊಗ್ರ, ಬಾಳುಗೋಡು, ಬಳ್ಳಕ ಮತ್ತಿತರ ಕಡೆಗಳಲ್ಲಿ ಹೊಸತಾಗಿ ಗಿಡ ಬೆಳೆಸಲಾಗುವುದು ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ತಿಳಿಸಿದ್ದಾರೆ.
ಪಂಜ ವಲಯದಲ್ಲಿ ಒಟ್ಟು 57,800 ಗಿಡಗಳನ್ನು ಬೆಳೆಸಲಾಗಿದ್ದು, 10,800 ಗಿಡ ಸಾರ್ವಜನಿಕರ ವಿತರಣೆಗೆ ಮತ್ತು 47,000 ಗಿಡ ನೆಡು ತೋಪುಗಳಲ್ಲಿ ನೆಡಲಾಗುವುದು.

ವೈವಿಧ್ಯಮ ಗಿಡಗಳ ರಾಶಿ:
30ಕ್ಕೂ ಹೆಚ್ಚು ವೈವಿಧ್ಯ ಗಿಡಗಳನ್ನು ಈ ಬಾರಿ ಅರಣ್ಯ ಇಲಾಖೆಯ ವಿವಿಧ ಸಸ್ಯ ಕ್ಷೇತ್ರದಲ್ಲಿ ಬೆಳೆಸಲಾಗಿದೆ. ನೇರಳೆ, ದಾಲ್ಚಿನ್ನಿ, ಕಾಯಿದೂಪ, ಹೆಬ್ಬಲಸು, ಬೀಟೆ, ಬಿಲ್ಮರ,ಬೇಂಗ, ಹಲಸು, ಹಾಲ್ಮಡ್ಡಿ, ರಕ್ತಮರ, ಮಾವು, ಹೊಳೆದಾಸವಾಳ, ಕೋಳಿಜುಟ್ಟು, ಬೊಳ್ಪಾಲೆ, ಅಂಡಿಪುನಾರ್, ಬೈನೆ, ಪುನರ್ಪುಳಿ, ರಾಂಪತ್ರೆ, ಜಂಬುನೇರಳೆ, ಅಬ್ಲಿಕೆ, ರೆಂಜ, ಕಿರಾಲ್ಬೋಗಿ, ಸಿರಿ ಹೊನ್ನೆ, ಬಸರಿ, ಹೊಳೆಮತ್ತಿ, ರಂಬೂಟನ್, ಅಶೋಕ, ಶ್ರೀಗಂಧ,ರಕ್ತ ಚಂದನ, ಪನ್ನೇರಳೆ, ಸಂಪಿಗೆ, ಹೊಂಗೆ, ಬಿಲ್ವಪತ್ರೆ, ಸಾಗುವಾನಿ, ಪುನರ್ಪುಳಿ, ವಾಟರ್ ಆಫಲ್, ಸ್ಟಾರ್ ಆಫಲ್ ಮೊದಲಾದ ಗಿಡಗಳನ್ನು ಕ್ಷೇತ್ರದಲ್ಲಿ ತಯಾರಿಸಲಾಗಿದೆ.

ಗಿಡ ಬೆಳೆಯಲು ಸಹಾಯಧನ:
ರೈತರಿಗೆ, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ವಿತರಿಸಲಾಗುತ್ತದೆ. ಸಣ್ಣ ಗಿಡಗಳಿಗೆ 3 ರೂ, ಚಿಕ್ಕ ಗಿಡಗಳಿಗೆ 6 ರೂ ದರದಲ್ಲಿ ಗಿಡ ನೀಡಲಾಗುತ್ತದೆ. ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆಯಡಿಯಲ್ಲಿ ಗಿಡಗಳನ್ನು ಬೆಳೆಯಲು ರೈತರಿಗೆ ಸಹಾಯಧನವನ್ನೂ ನೀಡಲಾಗುತ್ತದೆ. ಪ್ರತಿ ಗಿಡಕ್ಕೆ ಮೊದಲ ವರ್ಷ 35, ಎರಡನೇ ವರ್ಷ 40 ಹಾಗೂ 3 ನೇ ವರ್ಷ 50 ಹೀಗೆ 3 ವರ್ಷದಲ್ಲಿ 125 ರೂಗಳನ್ನು ನೀಡಲಾಗುತ್ತದೆ.