ಸುಳ್ಯ:ಕರ್ನಾಟಕ ಸುವರ್ಣ ಸಂಭ್ರಮ -50 ರ ಅಂಗವಾಗಿ ಕರ್ನಾಟಕ ಸರ್ಕಾರವು ವಿವಿಧ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಸಹಯೋಗದಲ್ಲಿ ನಾಲ್ಕು ಕಂದಾಯ ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳಲ್ಲಿ ಕೊನೆಯ ಹಾಗೂ ನಾಲ್ಕನೆಯ ಕಾರ್ಯಕ್ರಮವು ಡಿಸೆಂಬರ್ 3 ಹಾಗೂ 4ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅರೆಭಾಷೆ,ಕೊಡವ, ತುಳು, ಕೊಂಕಣಿ, ಬ್ಯಾರಿ ಹಾಗೂ
ಯಕ್ಷಗಾನ ಅಕಾಡೆಮಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಹಾಗೂ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಉಸ್ತುವಾರಿ ಸಚಿವರು, ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳು, ಭಾಗವಹಿಸಲಿದ್ದಾರೆ.
ಇಗಾಗಲೇ ಮೈಸೂರು, ಕರ್ನಾಟಕದ ಗಡಿ ಪ್ರದೇಶವಾಗಿರುವ ಮಹಾರಾಷ್ಟ್ರದೊಳಗಿರುವ ಜತ್ತ ತಾಲೂಕಿನ ಗುಡ್ಡಾಪುರ, ಹಾಗೂ ರಾಯಚೂರುಗಳಲ್ಲಿ ಮೂರು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು, ಮುಂದೂಡಲ್ಪಟ್ಟಿದ್ದ ಮಂಗಳೂರಿನ ಕಾರ್ಯಕ್ರಮವು ಇದೀಗ ನಿಗದಿಯಾಗಿದೆ.ಈ ಕುರಿತು ಪೂರ್ವ ತಯಾರಿಗಳು ಈಗಾಗಲೇ ನಡೆದಿದೆ. ಮೂರು ಜಿಲ್ಲೆಗಳ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ವಿವಿಧೆಡೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದ್ದು, ಅಂತಿಮ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ.
ಬಹುಸಂಸ್ಕೃತಿಯ ಅನಾವರಣ:
ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ವಿವಿಧ ಭಾಷಾ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆರಂಭದಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಯಲಿದ್ದು ಇದರಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ ಹಾಗೂ ವಿವಿಧ ರೀತಿಯ ಸ್ಥಬ್ದಚಿತ್ರಗಳ ಪ್ರದರ್ಶನದೊಂದಿಗೆ ಬಹುಸಂಸ್ಕೃತಿಯ ಅನಾವರಣ ನಡೆಯಲಿದೆ. ಬಹುಭಾಷಾ ಸಂಸ್ಕೃತಿಗಳನ್ನು ಪರಿಚಯಿಸುವ ವಿಶೇಷ ಮೆಚ್ಚುಗೆಗೆ ಪಾತ್ರವಾಗಿರುವ ‘ಹೊನ್ನಬಿತ್ತೇವು’ ನೃತ್ಯದ ಪ್ರದರ್ಶನ ಸೇರಿದಂತೆ, ನೃತ್ಯ ರೂಪಕಗಳನ್ನೊಳಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳೂ ನಡೆಯಲಿವೆ
ಅದೇ ರೀತಿ ವಿವಿಧ ಸಂಪ್ರದಾಯ ಸಂಸ್ಕೃತಿಗಳನ್ನೊಳಗೊಂಡ ಪ್ರಾದೇಶಿಕ ವಿಶೇಷತೆಯ ಆಹಾರ ಮೇಳ ನಡೆಯಲಿದೆ. ಅರೆಭಾಷೆ, ತುಳು, ಕೊಡವ, ಬ್ಯಾರಿ, ಕೊಂಕಣಿ ಅಕಾಡೆಮಿಗಳ ವತಿಯಿಂದ ಆಯಾ ಸಾಂಪ್ರದಾಯಿಕ ತಿಂಡಿ – ತಿನಿಸು, ಅಡುಗೆಗಳ ಪ್ರದರ್ಶನ ಹಾಗೂ ಮಾರಟವಿದೆ. ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು, ವಸ್ತುಪ್ರದರ್ಶನ ಮಳಿಗೆಗಳನ್ನೂ ಏರ್ಪಡಿಸಲಾಗುವುದು.
ಈ ಕಾರ್ಯಕ್ರಮಗಳಲ್ಲಿ ಅರೆಭಾಷೆ ಅಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.