ಶಬರಿಮಲೆ:ಮಂಡಲ ಮಹೋತ್ಸವಕ್ಕಾಗಿ ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲ ಇಂದು ತೆರೆಯಲಿದೆ. ಸಂಜೆ 5ಕ್ಕೆ ತಂತ್ರಿ ಕಣ್ಠರ್ ಮಹೇಶ್ ಮೋಹನರು ದೇವಾಲಯದ ಗರ್ಭಗುಡಿ ತೆರೆಯಲಿದ್ದಾರೆ. ಬಳಿಕ ನೂತನ ಶಬರಿಮಲೆ ಮುಖ್ಯ ಅರ್ಚಕರಾಗಿ(ಮೇಲ್ಶಾಂತಿ) ಪಿ.ಎನ್.ಮಹೇಶ್ ಹಾಗೂ ಮಾಳಿಕಪುರಂ ಮುಖ್ಯ ಅರ್ಚಕರಾಗಿ ಪಿ.ಜಿ.ಮುರಳಿ ಅವರು ಸ್ಥಾನ ವಹಿಸಿಕೊಳ್ಳಲಿದ್ದಾರೆ. ನಾಳೆ ವೃಶ್ಚಿಕ ಒಂದರಂದು ಮುಂಜಾನೆ
ನೂತನ ಮುಖ್ಯ ಅರ್ಚಕರು ಗರ್ಭಗುಡಿಯ ಬಾಗಿಲು ತೆರೆಯಲಿದ್ದಾರೆ. ಮುಂಜಾನೆ 4.30ರಿಂದ 11.30ರ ತನಕ ತುಪ್ಪ ಅಭಿಷೇಕ ಇರಲಿದೆ. ಮಂಡಲ ಮಹೋತ್ಸವದ ಮುಗಿದು ಡಿಸೆಂಬರ್ 27 ರಂದು ಶಬರಿಮಲೆ ಗರ್ಭಗುಡಿಯ ಬಾಗಿಲು ಹಾಕಲಾಗುತ್ತದೆ. ಮಕರ ಸಂಕ್ರಮ ಜ್ಯೋತಿಗಾಗಿ ಡಿಸೆಂಬರ್ 30ರಂದು ಕ್ಷೇತ್ರದ ಬಾಗಿಲು ತೆರೆಯಲಾಗುವುದು. ಜನವರಿ 15ರಂದು ಮಕರ ಜ್ಯೋತಿ ನೆರವೇರಲಿದೆ. ಉತ್ಸವ ಮುಗಿದು ಜನವರಿ 21ರಂದು ಬೆಳಿಗ್ಗೆ 7ಕ್ಕೆ ಗರ್ಭ ಗುಡಿಯ ಬಾಗಿಲು ಮುಚ್ಚಲಾಗುತ್ತದೆ. ಎರಡು ತಿಂಗಳ ಕಾಲ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಸೇರಿ ಲಕ್ಷಾಂತರ ಅಯ್ಯಪ್ಪ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಮಾಲೆ ಧರಿಸಿ, 41 ದಿನಗಳ ಕಾಲ ವೃತಾನುಷ್ಠಾನ ಕೈಗೊಂಡು ಶಬರಿಮಲೆ ಯಾತ್ರೆ ಕೈಗೊಳ್ಳಲಿದ್ದಾರೆ. ಭಕ್ತಿಯ ಶರಣ ಮಂತ್ರ ಘೋಷ ಮೊಳಗುವ ಮಂಡಲ ಕಾಲ ನಾಳೆಯಿಂದ ಆರಂಭಗೊಳ್ಳಲಿದೆ.