ಸುಳ್ಯ:ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಇದರ ಸಹಯೋಗದೊಂದಿಗೆ ರಾಜ್ಯದಾದ್ಯಂತ ಪ್ರಯಾಣಿಸುತ್ತಿರುವ ನಂದಿ ರಥಯಾತ್ರೆ ಮಾ.15ರಂದು ಸುಳ್ಯಕ್ಕೆ ಆಗಮಿಸಲಿದೆ. ಈ ಸಂದರ್ಭದಲ್ಲಿ ನಂದಿ ರಥಯಾತ್ರೆಗೆ ಭವ್ಯ ಸ್ವಾಗತ ನೀಡಲಾಗುವುದು. ಇದರ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಂದಿ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ತಿಳಿಸಿದ್ದಾರೆ. ಸುಳ್ಯ ಪ್ರಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು
ವಿವರ ನೀಡಿದರು. ಮಾ.15ರಂದು ಬೆಳಿಗ್ಗೆ ಸುಬ್ರಹ್ಮಣ್ಯದಿಂದ ಹೊರಡುವ ರಥಯಾತ್ರೆಗೆ ವಿವಿಧ ಕಡೆ ಸ್ವಾಗತ, ನಂದಿ ಪೂಜೆ ನಡೆಯಲಿದೆ.ಮಧ್ಯಾಹ್ನ ಎಲಿಮೆಲೆಯಲ್ಲಿ ವಿಶ್ರಾಂತಿ ಪಡೆದು ಸಂಜೆ 3.45ರ ವೇಳೆಗೆ ಸುಳ್ಯದ ಶಾಸ್ತ್ರಿ ವೃತ್ತಕ್ಕೆ ಆಗಮಿಸಲಿದೆ. ಅಲ್ಲಿ ನಂದಿ ರಥವನ್ನು ಸ್ವಾಗತಿಸಿ ಭವ್ಯ ಶೋಭಾಯಾತ್ರೆಯ ಮೂಲಕ ಶ್ರೀ ಚನ್ನಕೇಶವ ದೇವಸ್ಥಾನದ ಬಳಿಗೆ ರಥವನ್ನು ಕರೆ ತರಲಾಗುವುದು.ಅಲ್ಲಿ ನಂದಿ ಪೂಜೆ, ಸಭಾ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಗೋ ಸೇವಾ ಸಂಸ್ಥಾನ್ ಟ್ರಸ್ಟ್ನ ಅಧ್ಯಕ್ಷ ಭಕ್ತಿಭೂಷಣ್ ದಾಸ್, ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿ, ಒಡ್ಡೂರು ಫಾರ್ಮ್ ಅವರು ಭಾಗವಹಿಸಲಿದ್ದಾರೆ ಎಂದು

ಅವರು ಮಾಹಿತಿ ನೀಡಿದರು. ನಂದಿ ರಥಯಾತ್ರೆಯು ಅತ್ಯಂತ ಪ್ರಾಮುಖ್ಯವಾದ ಕಾರ್ಯಕ್ರಮವಾಗಿದ್ದು ಗೋವಿನ, ನಂದಿಯ ಪ್ರಾಮುಖ್ಯತೆ ಬಗ್ಗೆ ಹೊಸ ತಲೆಮಾರಿಗೆ ತಿಳಿಸುವ, ಜಾಗೃತಿ ಮೂಡಿಸುವ ಉದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯುವ ಜನಾಂಗ ಗೋವಿನ ಮತ್ತು ನಂದಿಯ ಮಹತ್ವ ಮರೆಯುತ್ತಿದ್ದಾರೆ. ಅದನ್ನು ಮತ್ತೆ ಯುವ ಜನತೆಗೆ ತಿಳಿಸುವ ಉದ್ದೇಶದಿಂದ ಈ ಮಹತ್ವದ ರಥಯಾತ್ರೆ ನಡೆಯುತಿದೆ. ಇದರಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಕ್ಷಯ್ ಕೆ.ಸಿ. ವಿನಂತಿಸಿದರು.
ನಂದಿ ರಥಯಾತ್ರೆಯ ಸಂಚಾಲಕರಾದ ರಾಜೇಶ್ ಮೆನಾಲ ಮಾತನಾಡಿ ಪೊಳಲಿ ಕ್ಷೇತ್ರದಿಂದ ಡಿಸೆಂಬರ್ 31 ರಂದು ಪ್ರಾರಂಭಗೊಂಡು ರಾಜ್ಯದಾದ್ಯಂತ ಪ್ರಯಾಣಿಸುತ್ತಿರುವ ರಥಯಾತ್ರೆಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ ನೀಡಲು ಎಲ್ಲಾ ಸಿದ್ಧತೆಗಳು ನಡೆಸಲಾಗಿದೆ ಎಂದು ಹೇಳಿದರು. ದೇಶದಾದ್ಯಂತ ಪಂಚ ಪರಿವರ್ತನೆಯ ಆಂದೋಲನ ನಡೆಯುತ್ತಿದ್ದು ಸ್ವದೇಶಿ ವಸ್ತುಗಳು, ಸ್ವದೇಶಿ ಉತ್ಪನ್ನಗಳ ಬಳಕೆ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.ಜೊತೆಗೆ ನಮ್ಮ ಕೌಟುಂಬಿಕ ವ್ಯವಸ್ಥೆಯ

ಭಾಗವಾದ ಗೋವು ಮತ್ತು ನಂದಿಯನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ನಂದಿಯಾತ್ರೆ ನಡೆಯುತಿದೆ. ನಮ್ಮ ಕುಟುಂಬ ವ್ಯವಸ್ಥೆಯ ಮತ್ತು ಕೃಷಿ ಬದುಕಿನ ಭಾಗವಾದ ನಂದಿ ಹಲವಾರು ಕಾರಣಗಳಿಂದಾಗಿ ನಮ್ಮಿಂದ ದೂರವಾಗುತಿದೆ.ಆದುದರಿಂದ ನಂದಿಯ ಬಗ್ಗೆ ಜಾಗೃತಿ ಮೂಡಿಸಬೇಕು ನಂದಿ ಆಧಾರಿತ ಕೃಷಿಗೆ ಉತ್ತೇಜನ ನೀಡಬೇಕು, ನಂದಿಯ ಉತ್ಪನ್ನಗಳನ್ನು ಪರಿಚಯಿಸುವ ಮತ್ತು ಬಳಸುವಂತೆ ಮಾಡುವ ಉದ್ದೇಶದಿಂದ ಈ ರಥ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು. ರಾಜ್ಯದಾದ್ಯಂತ ನಡೆಯುತ್ತಿರುವ ನಂದಿ ರಥಯಾತ್ರೆಗೆ ಎಲ್ಲೆಡೆ ಭಾರೀ ಸ್ವಾಗತ ದೊರೆಯುತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಂದಿ ರಥಯಾತ್ರೆ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಕುಸುಮಾಧರ ಎ.ಟಿ,ದೇವರಾಜ್ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ವಿಕ್ರಮ್ ಅಡ್ಪಂಗಾಯ, ಜಗದೀಶ.ಡಿ.ಪಿ, ಸಂಚಾಲಕರಾದ ಅವಿನಾಶ್ ಡಿ.ಕೆ, ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ರಮೇಶ್ ಇರಂತಮಜಲು, ರಜತ್ ಅಡ್ಕಾರ್, ತೀರ್ಥೇಶ್ ಪಾರೆಪ್ಪಾಡಿ ಉಪಸ್ಥಿತರಿದ್ದರು.