ಸುಳ್ಯ:ಕಳೆದ ಹಲವು ವರ್ಷಗಳಿಂದ ಸುಳ್ಯದ ಕಸ ವಿಲೇವಾರಿ ಘಟಕಕ್ಕೆ ಕೋಟಿಗಟ್ಟಲೇ ಹಣ ಸುರಿಯುವ ಕೆಲಸ ಆಗುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಹೋದರೂ ಸಮಸ್ಯೆ ಜೀವಂತ ಇದೆ. ಸಾರ್ವಜನಿಕರ ಹಣವನ್ನು ಪೋಲು ಮಾಡುವ ಕೆಲಸ ಮಾತ್ರ ಆಗುತ್ತಿದೆ ಎಂದು ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊನೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರು
ಆಕ್ರೋಶ ವ್ಯಕ್ತ ಪಡಿಸಿದರು. ಸುಳ್ಯದ ಕಸ ಸಮಸ್ಯೆ ನಿರ್ವಹಣೆ ಮತ್ತು ಘನತ್ಯಾಜ್ಯ ಘಟಕ ಅಭಿವೃದ್ದಿಗೆ 1.30 ಕೋಟಿ ಅನುದಾನ ಬಂದಿದೆ ಎಂದು ಇಂಜಿನಿಯರ್ ತಿಳಿಸಿದರು. ಈ ವೇಳೆ ಮಾತನಾಡಿದ ವಿಪಕ್ಷ ಸದಸ್ಯ ಎಂ.ವೆಂಕಪ್ಪ ಗೌಡ, ಸುಳ್ಯ ನಗರದ ಕಸ ಹಾಕಲು ಕಲ್ಚರ್ಪೆಯಲ್ಲಿ ಸ್ಥಳ ಗುರುತು ಮಾಡಿ ಕಸ ಹಾಕಲಾಗುತ್ತಿದೆ. ಆದರೆ ಅಲ್ಲಿನ ನಿರ್ವಹಣೆ ಸರಿಯಾಗಿಲ್ಲ. ಮತ್ತೆ ಮತ್ತೆ ಕಲ್ಚರ್ಪೆಯಲ್ಲಿನ ಘಟಕಕ್ಕೆ ಹಣ ಸುರಿಯುವ ಕೆಲಸ ಆಗುತ್ತಿದೆ ಎಂದ ಅವರು ಅಭಿವದ್ದಿಗೆ ನಮ್ಮ ಅಡ್ಡಗಾಲು ಇಲ್ಲ. ಅಲ್ಲಿನ ಸಾಧಕ-ಬಾಧಕಗಳನ್ನು ಚರ್ಚಿಸಲು ತಂತ್ರಜ್ಞರನ್ನು ನೇಮಿಸಿ ವರದಿ ತಯಾರಿಸಿ ಮುಂದುವರಿಯುದು ಉತ್ತಮ ಎಂದರು. ಅಲ್ಲದೇ ಊರಿನವರು ಅಲ್ಲಿಯ ಅವ್ಯವಸ್ಥೆಯ ವಿರುದ್ದ ನಗರ ಪಂಚಾಯತಿ ಮುಂಭಾಗಕ್ಕೆ ಬಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಅಲ್ಲಿ ವ್ಯವಸ್ಥೆಗಳು ಯಾವುದು ಸರಿ ಇಲ್ಲ ಎಂದು ಅವರು ಕಳೆದ ಹಲವಾರು ಸಮಯಗಳಿಂದ ಪ್ರತಿಭಟನೆಯನ್ನು ಮಾಡುತ್ತಲೇ ಬರುತ್ತಿದ್ದಾರೆ ಎಂದರು.
ಸದಸ್ಯ ಕೆ ಎಸ್ ಉಮ್ಮರ್ ರವರು ೨೦೦೮ – ೨೦೦೯ ರಿಂದ ಇಂದಿನವರೆಗೆ ಸುಮಾರು ಎರಡು ಕೋಟಿಗೂ ಹೆಚ್ಚು ಸಾರ್ವಜನಿಕರ ಹಣವನ್ನು ಘನತ್ಯಾಜ್ಯ ಘಟಕಕ್ಕೆ ಖರ್ಚು ಮಾಡಿದ್ದೀರಿ. ಆದರೆ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಮತ್ತೆ ಪುನಃ ಒಂದು ಕೋಟಿ ಹಣವನ್ನು ಸುರಿದು ಏನು ಮಾಡಲು ಹೊರಟಿದ್ದೀರಿ. ಸರಕಾರ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನ ಮಾಡಲು 17 ವರ್ಷಗಳಿಂದ ಆಡಳಿತ ನಡೆಸಿದವರಿಗೆ ಸಾಧ್ಯವಾಗಿಲ್ಲ. ಸುಳ್ಯದವರು ಮುಖ್ಯಮಂತ್ರಿ, ಸಚಿವರು ಯಾರೇ ಏನೇ ಆಗಿದ್ದರು ಸುಳ್ಯದ ಕಸವನ್ನ ಮಾತ್ರ ಇಂದಿನವರೆಗೆ ಸರಿ ಮಾಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.ಎರಡು ಎಕರೆ ಜಾಗದಲ್ಲಿ ಕೇವಲ 50 ಸೆಂಟ್ಸ್ ಜಾಗ ಮಾತ್ರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ.ಪಂ. ಆವರಣದೊಳಗೆ ಮತ್ತೆ ಕಸ ಸಂಗ್ರಹ :
ಸುಳ್ಯ ನಗರದ ಕಸವನ್ನು ಸುರಿಯಲು ಜಾಗ ಇಲ್ಲದೇ ನ.ಪಂ. ಆವರಣದೊಳಗಿನ ಶೆಡ್ ಒಳಗೆ ಕಸ ತುಂಬಿಸಿಡಲಾಗಿತ್ತು. ಈಗೆ ತುಂಬಿಸಿದ ಕಸವನ್ನು ಎರಡು ಬಾರಿ ಖಾಲಿ ಮಾಡಿಸಲಾಯಿತು. ಇದಕ್ಕೆ ಲಕ್ಷಾಂತರ ರೂ ಹಣ ಪೋಲಾಗಿದೆ.ಎರಡೂ ಬಾರಿ ಕಸವನ್ನು ಸಾಗಿಸುವ ಕೆಲಸ ಮಾಡಿದರು. ಆದರೆ ಮತ್ತೆ ನಗರದಲ್ಲಿ ಸಂಗ್ರಹವಾದ ಘನತ್ಯಾಜ್ಯವನ್ನು ಶೆಡ್ ಒಳಗೆ ಶೇಖರಣೆ ಮಾಡಿಡುವ ಕೆಲಸ ಆಗುತ್ತಿದೆ ಎಂದು ಕೆ.ಎಸ್. ಉಮ್ಮರ್ ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಶರೀಫ್ ಕಂಠಿ ಮಾತನಾಡಿ ಕಳೆದ ಮೂರು ನಾಲ್ಕು ಸಭೆಗಳಿಂದ ನಾವು ಪುರಭವನ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಆದರೆ ಇದೀಗ ಅದರ ದಾಖಲೆ ಪತ್ರವೇ ಇಲ್ಲ ಎಂಬ ಮಾತನ್ನು ಪಂಚಾಯಿತಿಯಿಂದ ಕೇಳಿ ಬರುತ್ತಿದೆ. ಹಾಗಾದರೆ ಅದರ ದಾಖಲೆ ಪತ್ರ ಏನಾಯಿತು ಎಲ್ಲಾದರೂ ಯಾರಿಗಾದರೂ ಮಾರಾಟ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರು.
ದುರಸ್ತಿಯಲ್ಲಿರುವ ಕಟ್ಟಡಕ್ಕೆ ಐದು ಕೋಟಿ ರೂಪಾಯಿ ವೆಚ್ಚದ ಯೋಜನೆಯ ನೀಲ ನಕಾಶೆ ರೂಪಿಸಿ ಸಂಬಂಧಪಟ್ಟ ಸಚಿವರಿಂದ ಅನುದಾನ ತರಿಸಿ ಆಧುನಿಕ ರೀತಿಯಲ್ಲಿ ಉತ್ತಮ ಸಭಾಂಗಣ ಮಾಡುವ ಕುರಿತು ಚರ್ಚೆಗಳು ನಡೆಯಿತು. ಆದರೆ ಅದರ ಅಭಿವೃದ್ದಿ ಹೇಗೆ ಮಾಡುವುದು ಎಂದು ಪ್ರಶ್ನಿಸಿದರು.
ಬೀದಿನಾಯಿಗಳನ್ನು ನಿಯಂತ್ರಿಸಿ :
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕಳೆದ ಒಂದು ಪಂಚಾಯತಿ ಸಭೆಯಲ್ಲಿ ಪಶು ವೈದ್ಯಾಧಿಕಾರಿಗಳ ತಂಡವನ್ನು ಕರೆಸಿ ಸಭೆ ನಡೆಸಿ ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ ನಿರ್ಧಾರ ಅನುಷ್ಠಾನ ಆಗಿಲ್ಲ. ಎಲ್ಲಾ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಬೇಕು ಎಂದು ನಾಮ ನಿರ್ದೇಶಕ ಸದಸ್ಯ ಸಿದ್ದಿಕ್ ಕೊಕ್ಕೋ ಹೇಳಿದರು. ಇದಕ್ಕೆ ಪೂರಕವಾಗಿ ಸದಸ್ಯರಾದ ಬಾಲಕೃಷ್ಣ ರೈ ಅವರು ಮಾತನಾಡಿ ನಮ್ಮ ದುಗಲಡ್ಕ ಪರಿಸರದಲ್ಲಿಯೂ ಕೂಡ ಬೀದಿ ನಾಯಿಗಳು ಏಳು ಎಂಟು ಮರಿಗಳನ್ನು ಹಾಕಿ ರಸ್ತೆಯಲ್ಲಿ ಅಡ್ಡಾದಿಡ್ಡಿ ತಿರುಗಾಡುತ್ತಿದೆ. ರಸ್ತೆಯಲ್ಲಿ ಮಕ್ಕಳಿಗೆ ವಯೋವೃದ್ಧರಿಗೆ ನಡೆದಾಡಲು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನ.ಪಂ. ವ್ಯಾಪ್ತಿಯಲ್ಲಿನ ಬೀದಿ ನಾಯಿಗಳ ನಿಯಂತ್ರಣ ನ.ಪಂ. ಆಡಳಿತವೇ ಮಾಡಬೇಕು. ಕಾನೂನು ಕೂಡ ಇದೆ. ಮಕ್ಕಳ ಮೇಲೆ, ಸಾರ್ವಜನಿಕರ ಮೇಲೆ ದಾಳಿ ಮಾಡುವ ಮುನ್ನ ಕ್ರಮ ಕೈಗೊಳ್ಳಿ ಎಂದು ಎಂ.ವೆಂಕಪ್ಪ ಗೌಡ ಹೇಳಿದರು.
ವಿಪಕ್ಷ ನಾಯಕ ಬಾಲಕೃಷ್ಣ ಭಟ್ ಕೊಡಂಕೇರಿ ಮಾತನಾಡಿ, ಕಳೆದ ನಾಲ್ಕೈದು ಸಭೆಗಳಲ್ಲಿ ಜಯನಗರ ರುದ್ರ ಭೂಮಿಯ ಸಮಿತಿ ರಚಿಸಲು ಮತ್ತು ನಮ್ಮ ವಾರ್ಡಿನಲ್ಲಿರುವ ಕೆಲವು ಅಪಾಯಕಾರಿ ಮರಗಳ ತೆರವು ಕಾರ್ಯದ ಬಗ್ಗೆ ಅರ್ಜಿ ಸಲ್ಲಿಸಿದ್ದೇನೆ ಆದರೆ ಮಳೆಗಾಲ ಮುಗಿಯುತ್ತ ಬಂದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದರು. ಅಲ್ಲದೆ ನಗರದ ಬೀದಿ ದೀಪ, ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಕಪಾಟು ಒದಗಿಸುವ ಹಾಗೂ ಇತರ ವಿಷಯಗಳ ಕುರಿತು ಚರ್ಚೆಗಳು ನಡೆಯಿತು.
ವೇದಿಕೆಯಲ್ಲಿ ನ. ಪಂ ಉಪಾಧ್ಯಕ್ಷ ಬುದ್ಧನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಠ್ ನಗರ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್, ಇಂಜಿನಿಯರ್ ಶಿವಕುಮಾರ್ ಉಪಸ್ಥಿತರಿದ್ದರು.














