ಸುಳ್ಯ:ಒಂದು ಪ್ರದೇಶದ ಅಥವಾ ದೇಶದ ಪ್ರಾರ್ಥನೆ ಹಾಗೂ ತಪಸ್ಸಿನ ಫಲವಾಗಿ ಆ ಪ್ರದೇಶದಲ್ಲಿ, ದೇಶದಲ್ಲಿ ಮಹಾನುಭಾವರು ಹುಟ್ಟಿಕೊಳ್ಳುತ್ತಾರೆ. ಈ ಪ್ರದೇಶದ ತಪಸ್ಸಿನ ಫಲವಾಗಿ ಡಾ.ಕುರುಂಜಿ ವೆಂಕಟ್ರಮಣ ಗೌಡರಂತಹಾ ಮಹಾನುಭಾವರು ಹುಟ್ಟಿ ಸುಳ್ಯವನ್ನು ಶಿಕ್ಷಣದ ಕಾಶಿಯನ್ನಾಗಿಸಿದ್ದಾರೆ ಎಂದು ಖ್ಯಾತ ವಾಗ್ಮಿ, ಮೈಸೂರು ಸಂತ ಫಿಲೋಮಿನಾ ಕಾಲೇಜಿನ ನೀವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇ ಗೌಡ
ಹೇಳಿದ್ದಾರೆ. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಡಿ.26 ರಂದು ಕೆವಿಜಿ ಕಾನೂನು ಮಹಾವಿದ್ಯಾಲದ ಪರಿಸರದಲ್ಲಿ ನಡೆದ
ಆಧುನಿಕ ಸುಳ್ಯದ ಭವ್ಯ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರ 96ನೇ ಜಯಂತ್ಯೋತ್ಸವ ‘ಕೆ.ವಿ.ಜಿ. ಸುಳ್ಯ ಹಬ್ಬ ಆಚರಣೆ’ಯಲ್ಲಿ ಕೆವಿಜಿ ಸಾಧನಾಶ್ರೀ ಮತ್ತು ಯುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ
ಕೆವಿಜಿ ಸಂಸ್ಮರಣಾ ಭಾಷಣ ಮಾಡಿ ಅವರು ಮಾತನಾಡಿದರು. ಯಾವುದೇ ವಿಷಯದಲ್ಲಿ ಏನಾದರೂ ಸಾಧಿಸಬೇಕು ಎಂದು ಉತ್ಕಟವಾಗಿ ಅನ್ನಿಸಿದರೆ ಸಾಧಕರಾಗುತ್ತಾರೆ, ಅನಾನುಕೂಲ, ತೊಂದರೆ, ಸವಾಲುಗಳು ಎದುರಾದರೆ ಸಾಹಸಿಗಳು ಹುಟ್ಟುತ್ತಾರೆ ಎಂದ ಅವರು ಡಾ.ಕೆವಿಜಿ ಅವರು ಅಂತಹಾ ಉತ್ಕಟ ಅನ್ನಿಸಿಕೆಯಿಂದ, ಸವಾಲುಗಳನ್ನು ಎದುರಿಸಿ

ಸುಳ್ಯದಂತಹಾ ಗ್ರಾಮೀಣ ಪ್ರದೇಶದಲ್ಲಿ ಅದ್ಭುತವನ್ನು ಸಾಧಿಸಿದರು.ಉನ್ನತ ಶಿಕ್ಷಣ ಪಡೆಯದೇ ಜಗತ್ತಿಗೆ ವಿವೇಕವನ್ನು ಕೊಟ್ಟರು. ತನ್ನ ಬದುಕಿನ ಸ್ಪಷ್ಟ ಗುರಿ ಮತ್ತು ನಿರ್ಧಾರದಿಂದ ತಾವು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಇತರರಿಗೂ ಬದುಕು ಕಟ್ಟಿಕೊಟ್ಟರು. ಬದುಕಿನಿಂದ ಸಂದೇಶ ನೀಡಿದರೆ ಯಶಸ್ವಿ ವ್ಯಕ್ತಿಯಾಗುತ್ತಾನೆ ಎಂದ ಪ್ರೊ.ಕೃಷ್ಣೇ ಗೌಡರು ಕುರುಂಜಿಯವರು ತನ್ನ ಬದುಕಿನ ಮೂಲಕ ಜಗತ್ತಿಗೆ ಸಂದೇಶ ನೀಡಿದ್ದಾರೆ ಎಂದು ಬಣ್ಣಿಸಿದರು. ಹಣ ಸಂಪಾದನೆ ಮತ್ತು ಅಧಿಕಾರಕ್ಕೆ ಶಿಕ್ಷಣ ಎಂಬುದರ ಬದಲಿಗೆ ಶಿಕ್ಷಣದ ಇತರ ಸಾಧ್ಯತೆಗಳನ್ನು ತಿಳಿಸುವ ಮತ್ತು ಇತರ ವಿಚಾರವನ್ನು ಅನ್ಷೇಷಿಸುವ ಆಲೋಚನಾ ವಿಧಾನಗಳನ್ನು ಕಲಿಸಬೇಕು ಎಂದು ಪ್ರೊ.ಕೃಷ್ಣೇ ಗೌಡ ಅಭಿಪ್ರಾಯಪಟ್ಟರು. ಈಗಿನ ಶಿಕ್ಷಣ ಬದುಕಿನ ಒಂದು ಮುಖವನ್ನು ಮಾತ್ರ ತೋರಿಸುತಿದೆ, ಅದು ಬದುಕಿನ ಇತರ ಸಾಧ್ಯತೆಗಳನ್ನು ಕಲಿಸುವಂತಾಗಬೇಕು ಎಂದು ಅವರು ಹೇಳಿದರು. ಹಣ, ಅಧಿಕಾರದಾಚೆಗಿನ ಬದುಕಿನ ಕುರಿತು ಆಲೋಚನೆ ಮಾಡಬೇಕು. ‘ಪವರ್ ಇಲ್ಲದೆ ಪವರ್ಫುಲ್ ‘ ಆಗಬೇಕು ಎಂದು ಅವರು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಸಮಾರಂಭವನ್ನು ಉದ್ಘಾಟಿಸಿದರು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್, ಪ್ರಧಾನ ಕಾರ್ಯದರ್ಶಿ ಕೆ.ರಾಜು ಪಂಡಿತ್, ಕೋಶಾಧಿಕಾರಿ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಧನಾಶ್ರೀ ಪ್ರಶಸ್ತಿ-ಯುವ ಸಾಧಕರಿಗೆ ಪ್ರಶಸ್ತಿ ಪ್ರದಾನ:
ರಾಷ್ಟ್ರ ಪ್ರಶಸ್ತಿ
ವಿಜೇತ ಶಿಕ್ಷಕ, ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಹಾಗು ಹಿರಿಯ ವೈದ್ಯರಾದ ಡಾ.ಎಂ.ವಿ.ಶಂಕರ ಭಟ್ ಅವರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಾ.ರವಿಕಾಂತ್ ಜಿ.ಒ (ವೈದ್ಯಕೀಯ), ಕಸ್ತೂರಿ ಶಂಕರ್(ಸ್ವ ಉದ್ಯೋಗ), ಆಶ್ರಫ್ ಕಮ್ಮಾಡಿ (ಉದ್ಯಮ), ಆದರ್ಶ್ ಎಸ್.ಪಿ (ಕ್ರೀಡೆ), ಪ್ರಕಾಶ್ ಕುಮಾರ್ ಮುಳ್ಯ (ಕೃಷಿ ಮತ್ತು ಹೈನುಗಾರಿಕೆ) ಅವರಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಿತ್ರಗಳು: ನವೀನ್ ಸ್ಟುಡಿಯೋ ಗೋಪಾಲ್

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಜು ಪಂಡಿತ್ ಸ್ವಾಗತಿಸಿ, ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ವಂದಿಸಿದರು.ಗಿರೀಶ್ ನಾರ್ಕೋಡು, ವೀರಪ್ಪ ಗೌಡ ಕಣ್ಕಲ್, ಚಂದ್ರಾಕ್ಷಿ ಜೆ ರೈ, ಪೂರ್ಣಿಮಾ ಮಡಪ್ಪಾಡಿ, ಕೆ.ಟಿ.ವಿಶ್ವನಾಥ್, ಡಿ.ಟಿ.ದಯಾನಂದ, ಡಾ.ಹರ್ಷವರ್ಧನ್.ಕೆ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ಡಾ.ಲಕ್ಷ್ಮೀಶ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಹರೀಶ್ ಬಂಟ್ವಾಳ್ ಸದಸ್ಯತ್ವ ಅಭಿಯಾನದ ಮಾಹಿತಿ ನೀಡಿದರು.
ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದ ಬಳಿಕ ಜೀವನ್ ಟಿ.ಎನ್.ಬೆಳ್ಳಾರೆ ಸಾರಥ್ಯದ ಡ್ಯಾನ್ಸ್ & ಬೀಟ್ಸ್ ತಂಡದವರಿಂದ ನೃತ್ಯ ಸಂಭ್ರಮ ನಡೆಯಿತು.