ಸುಳ್ಯ:ಹಿರಿಯ ಕಾಂಗ್ರೆಸ್ ಮುಖಂಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯ, ನೋಟರಿ ವಕೀಲರಾದ ಐ.ಕುಂಞಿಪಳ್ಳಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಜೂ.27ರಂದು ಬೆಳಿಗ್ಗೆ 10.30ರ ವೇಳೆಗೆ ಪೈಚಾರಿನ ಅವರ ಮನೆಯಲ್ಲಿ ನಿಧನರಾದರು ಎಂದು ತಿಳಿದು ಬಂದಿದೆ.
ನ್ಯಾಯವಾದಿಯಾಗಿ, ನೋಟರಿಯಾಗಿ, ರಾಜಕಾರಿಣಿ ಯಾಗಿ, ಜನಪ್ರತಿನಿಧಿಯಾಗಿದ್ದ ಕುಂಣಿಪಳ್ಳಿಯವರು ಕೇನ್ಯ ಗ್ರಾಮದ
ಪ್ರತಿಷ್ಠಿತ ಐವತ್ತೊಕ್ಲು ಮನೆಯ ಪ್ರಗತಿಪರ ಕೃಷಿಕ ದಿ. ಹಾಜಿ ಮಮ್ಮಾಲಿ ಪಟೇಲ್ ಹಾಗೂ ಉಮ್ಮಾಲಮ್ಮ ದಂಪತಿಗಳ ಪುತ್ರರಾಗಿ 1938ರಲ್ಲಿ ಜನಿಸಿದರು. ಎಣ್ಮೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಪಂಜದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದ ಇವರು ಬೋರ್ಡ್ ಹೈಸ್ಕೂಲ್ ಪಂಜದಲ್ಲಿ 1955ರಲ್ಲಿ ತನ್ನ ಪ್ರೌಢ ಶಿಕ್ಷಣವನ್ನು ಪಡೆದರು.ಮುಂದೆ 1960ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ 1962ರಲ್ಲಿ ಕಾನೂನು ಪದವಿ (ಬಿ.ಎಲ್) ಯನ್ನು ಉನ್ನತ ಶ್ರೇಣಿಯಲ್ಲಿ ಪಡೆದುಕೊಂಡರು. ಸುಳ್ಯ ತಾಲೂಕಿನ ಮುಸ್ಲಿಂ ಸಮುದಾಯದಲ್ಲಿ ಮೊತ್ತ ಮೊದಲ ಕಾನೂನು ಪದವೀಧರ ಎಂಬ ಹಿರಿಮೆಗೆ ಪಾತ್ರರಾದರು.ಕಾನೂನು ಪದವಿ ಪಡೆದ ನಂತರ ಇವರು ಮಂಗಳೂರಿನಲ್ಲಿ, ಪುತ್ತೂರಿನಲ್ಲಿ ವಕೀಲಿ ವೃತ್ತಿ ನಡೆಸಿ 1969ರಲ್ಲಿ ಸುಳ್ಯದಲ್ಲಿ ನ್ಯಾಯಾಲಯ ಆರಂಭಗೊಂಡಾಗ ತನ್ನ ವೃತ್ತಿ ಸೇವೆಯನ್ನು ಇಲ್ಲಿ ಆರಂಭಿಸಿದರು.
ಪಂಜ ತಾಲೂಕು ಬೋರ್ಡ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸುಳ್ಯ ತಾಲೂಕು ಅಭಿವೃದ್ಧಿ ಮಂಡಳಿಗೆ ಸ್ಪರ್ಧಿಸಿ ಗೆಲುವು ಪಡೆದರು. ಸುಳ್ಯ ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ 3 ವರ್ಷ ಸೇವೆ ಸಲ್ಲಿಸಿದ್ದರು.
ಸುಳ್ಯ ಜಿಲ್ಲಾ ಪರಿಷತ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದ ಗೌಡ ಹಾಗೂ ಜನತಾ ಪಕ್ಷದ ಅಭ್ಯರ್ಥಿ ಎಂ.ಬಿ. ಸದಾಶಿವ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ದ.ಕ.ಜಿಲ್ಲಾ ಪರಿಷತ್ನ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ದ.ಕ. ಜಿಲ್ಲಾ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿಯಾಗಿಯೂ ಕಾರ್ಯನಿರ್ವಹಿಸಿರುತ್ತಾರೆ.
1993ರಲ್ಲಿ ಇವರು ಕರ್ನಾಟಕ ರಾಜ್ಯ ನೋಟರಿಯಾಗಿ ನೇಮಕಕೊಂಡು ನ್ಯಾಯವಾದಿಯಾಗಿಯೂ, ನೋಟರಿ ಪಬ್ಲಿಕ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಎಣ್ಣೂರು ಜುಮ್ಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಸುಳ್ಯ ತಾಲೂಕಿನ ಸಂಯುಕ್ತ ಜಮಾಯತಿನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಸಂತಾಪ:ಕುಂಞಿಪಳ್ಳಿ ಅವರ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ, ಅವರ ನಿಧನದಿಂದ ಸುಳ್ಯ ತಾಲ್ಲೂಕಿನ ಹಿರಿಯ ಚೇತನವನ್ನು ಕಳಕೊಂಡಿದ್ದು ಇದು ಸುಳ್ಯಕ್ಕೆ ಮತ್ತು ವೈಯುಕ್ತವಾಗಿ ನನಗೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.