ಸುಳ್ಯ: ನಮ್ಮ ಆರಾಧನಾ ಕೇಂದ್ರಗಳು ಸಮಾಜವನ್ನು ಯಾವುದೇ ಭೇದ ಇಲ್ಲದೆ ಒಂದು ಗೂಡಿಸುವ ಕೇಂದ್ರಗಳಾಗಿವೆ. ಇದು ಧರ್ಮ ಮತ್ತು ಸಮಾಜದ ಉನ್ನತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಹೇಳಿದರು. ಸುಳ್ಯ ಶ್ರೀ ಗುರು ರಾಘವೇಂದ್ರ ಮಠದ 7ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ನಡೆದ
ಸಭಾ ಕಾರ್ಯಕ್ರಮದಲ್ಲಿ ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಅವರಿಗೆ ರಾಘವೇಂದ್ರ ಮಠದ ವತಿಯಿಂದ
ನೀಡುವ ಪ್ರಥಮ ಶ್ರೀಗುರುರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.
ನಮ್ಮ ಸಮಾಜಕ್ಕೆ,ಧರ್ಮಕ್ಕೆ ನಿವಾರ್ಯವಾಗಿರುವುದು ಆರಾಧನಾ ಕೇಂದ್ರಗಳು. ಈ ಆರಾಧನಾ ಕೇಂದ್ರಗಳ ಕೆಲಸ ಕಾರ್ಯಗಳು ಧರ್ಮದ ಸಮಾಜದ ಬೆಳವಣಿಗೆಗೆ ಕಾರಣವಾಗಿದೆ. ವೃಕ್ಷ ಯೋಗಿ ಆರ್.ಕೆ.ನಾಯರ್ ಅವರು ಗಡಿಯನ್ನು ಮೀರಿ ಬೆಳೆದು ಹಸಿರು ಕ್ರಾಂತಿ ಮಾಡಿದ್ದಾರೆ ಎಂದು ಹೇಳಿದರು. ಪ್ರಕೃತಿಯಲ್ಲಿ ದೇವರನ್ನು ಕಾಣುವುದು ನಮ್ಮ ಧರ್ಮ. ವೃಕ್ಷ ಕ್ರಾಂತಿಯ ಮೂಲಕ ದೇವತಾರಾಧನೆ ಮಾಡುವವರು. ಮುಟ್ಟಾಳೆ ಧರಿಸುವ ಮೂಲಕ ನಮ್ಮ ಪರಂಪರೆಯನ್ನು ಉಳಿಸಿಕೊಂಡು ಬಂದವರು ಆರ್.ಕೆ.ನಾಯರ್ ಅವರಿಗೆ ಮುಂದೆ ಪದ್ಮಶ್ರೀ ಪ್ರಶಸ್ತಿ ದೊರೆಯಲಿ ಎಂದು ಅವರು ಹಾರೈಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಆರ್.ಕೆ.ನಾಯರ್ ಪ್ರಕೃತಿಯೇ ಅನುಗ್ರಹಿಸಿದ ಪ್ರಶಸ್ತಿ ಇದು ಈ ಪ್ರಶಸ್ತಿ ಬಲು ಸಂತಸ ನೀಡಿದೆ ಎಂದರು. ಪವಿತ್ರವಾದ ನದಿ ತಟದಲ್ಲಿ ಮಠ ನಿರ್ಮಾಣ ಮಾಡಿ ಸಮಾಜದಲ್ಲಿ ಭಕ್ತಿ ಶ್ರದ್ಧೆಯನ್ನು ಪಸರಿಸುವ ರಾಘವೇಂದ್ರ ಮಠದ ಪ್ರಶಸ್ತಿ ಉಳಿದೆಲ್ಲಾ ಪ್ರಶಸ್ತಿಗಳಿಗಿಂತ ಶ್ರೇಷ್ಠವಾದುದು ಎಂದು ಅವರು ಹೇಳಿದರು.
ಧರ್ಮದ ಬೀಜ ನೆಟ್ಟು ಅದನ್ನು ಪೋಷಿಸಿ ಬೆಳೆಸಬೇಕು ಅದು ಗಿಡದಲ್ಲಿಯೇ ನಾಶವಾಗಬಾರದು. ಆದುದರಿಂದ ಮಕ್ಕಳಲ್ಲಿ ಧರ್ಮ, ಸಂಸ್ಕೃತಿ, ಸಂಸ್ಕಾರಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಮಾನವ ಧರ್ಮಕ್ಕಿಂತ ದೊಡ್ಡ ಧರ್ಮ ಬೇರೆ ಇಲ್ಲ. ಎಲ್ಲರೂ ಅವರವರ ಧರ್ಮವನ್ನು ಅನುಸರಿಸಿ, ಇನ್ನೊಬ್ಬರ ಧರ್ಮವನ್ನು ಗೌರವಿಸಬೇಕು ಎಂದ ಅವರು ಪರಿಸರ ವಿಕೋಪ, ನೀರಿನ ಅಭಾವ ಮೊದಲಾದ ಸವಾಲು ಎದುರಾಗಬಹುದು. ಇದನ್ನು ಎದುರಿಸಲು ವೃಕ್ಷಗಳನ್ನು ಬೆಳೆಸಿ ಪರಿಸರವನ್ನು ಉಳಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಮಾತನಾಡಿ ಆರ್.ಕೆ.ನಾಯರ್ ಎಲ್ಲರಿಗೂ ಸ್ಪೂರ್ತಿ. ಅವರ ಮಾರ್ಗದರ್ಶನ ಪಡೆದು ಎಲ್ಲರೂ ತಮ್ಮ ಮನೆಯ ಸಮೀಪ ಒಂದೊಂದು ಸಣ್ಣ ಸಣ್ಣ ವನಗಳನ್ನು ನಿರ್ಮಾಣ ಮಾಡಬೇಕು ಎಂದರು.
ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ಅಧ್ಯಕ್ಷತೆ ವಹಿಸಿ ಮಾತನಾಡಿ ಡಾ.ಆರ್.ಕೆ.ನಾಯರ್ ಅವರಿಗೆ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿ ಬರುವಂತಾಗಲಿ ಎಂದು ಆಶಿಸಿದರು.

ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಅಭಿದನಂದನಾ ಭಾಷಣ ಮಾಡಿ ಪ್ರಕೃತಿಗಾಗಿ, ಸಹಜೀವಿಗಳಿಗಾಗಿ ಮಿಡಿಯುವ ಹೃದಯ ಡಾ.ಆರ್.ಕೆ.ನಾಯರ್ ಅವರದ್ದು ಸ್ಮೃತಿ ವನ ನಿರ್ಮಾಣದ ಮೂಲಕ ಇಡೀ ನಾಡಿಗೆ ಹೊಸ ಚೈತನ್ಯ ನೀಡಿದವರು ಅವರು ಭೂಮಿಯ, ಮಾನವ ರಾಶಿಯ ರಕ್ಷಣೆಗಾಗಿ ಹಸಿರು ಕವಚವನ್ನು ರಚಿಸುತ್ತಿರುವವರು. ತನ್ನ ನಿಷ್ಠೆ, ಕರ್ತವ್ಯ ಪ್ರಜ್ಞೆಯಿಂದ ಸಾಧನೆಯ ಶಿಖರವನ್ನು ಏರಿದವರು ಎಂದರು.
ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಸುಬ್ರಹ್ಮಣ್ಯ ಮೂಡಿತ್ತಾಯ, ಕಾರ್ಯದರ್ಶಿ ರಾಮ್ ಕುಮಾರ್ ಹೆಬ್ಬಾರ್, ಕೋಶಾಧಿಕಾರಿ ಮುರಳೀಕೃಷ್ಣ ಡಿ.ಆರ್. ಉಪಸ್ಥಿತರಿದ್ದರು. ತನ್ಮಯಿ ಪ್ರಾರ್ಥಿಸಿದರು, ಜಯಶೀಲಾ ಕೊಳತ್ತಾಯ ಸ್ವಾಗತಿಸಿದರು.
ಕಾರ್ಯದರ್ಶಿ ರಾಮ್ ಕುಮಾರ್ ಹೆಬ್ಬಾರ್ ವಂದಿಸಿದರು. ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.