ಮುರೂರು:ಗಡಿ ಪ್ರದೇಶವಾದ ಮಂಡೆಕೋಲು ಗ್ರಾಮದ ಮುರೂರು, ದೇವರಗುಂಡ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದೆ. ಮುರೂರು ಸಮೀಪ ಆನೆಗಳ ಹಿಂಡು ಏ.3ರಂದು ಸಂಜೆಯ ವೇಳೆ ಕಂಡು ಬಂದಿದೆ. ಕಳೆದ 15 ದಿನಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟು ಕೃಷಿ ಹಾನಿ ನಡೆಸುತ್ತಿರುವ ಕಾಡಾನೆಗಳ ಹಿಂಡು ಕಾಡಿನಿಂದ ಇಳಿದು ಬಂದು ಪಯಸ್ವಿನಿ ನದಿಯ ನೀರಿನಲ್ಲಿ ನೀರಾಟ ಆಡುವುದು ಕಂಡು
ಬಂದಿದೆ. ಮರಿ ಆನೆ ಸೇರಿ 7 ಆನೆಗಳ ಹಿಂಡು ಕಂಡು ಬಂದಿದೆ. ಜನ ವಸತಿ ಪ್ರದೇಶ ಹಾಗೂ ಕೃಷಿ ಪ್ರದೇಶದ ಸಮೀಪದಲ್ಲಿಯೇ ಆನೆ ಹಿಂಡು ಬೀಡು ಬಿಟ್ಟಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಕಳೆದ ಅನೇಕ ವರ್ಷಗಳಿಂದ ಗಡಿ ಗ್ರಾಮವಾದ ಮಂಡೆಕೋಲು ಕಾಡಾನೆಗಳ ಹಾವಳಿಯಿಂದ ನಲುಗಿದೆ. ಇದೀಗ ಕಳೆದ 15 ದಿನಗಳಿಂದ ದೇವರಗುಂಡ, ಮುರೂರು ಭಾಗದಲ್ಲಿ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿವೆ. ಕಂಗು, ತೆಂಗು, ಬಾಳೆ ಸೇರಿದಂತೆ ಭಾರೀ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿದೆ.
ಪಯಸ್ವಿನಿಯಲ್ಲಿ ಮದಗಜಗಳ ನೀರಾಟ
ಅರಣ್ಯ ಇಲಾಖೆಯವರು, ಸಾರ್ವಜನಿಕರು ಸೇರಿ ಪಟಾಕಿ ಸಿಡಿಸಿ, ತಮಟೆ, ಚೆಂಡೆ ಬಾರಿಸಿ, ಬೆಂಕಿ ಉರಿಸಿ ಆನೆಗಳನ್ನು ಕಾಡಿಗೆ ಅಟ್ಟಿದರೂ ದೂರ ಸಾಗದೇ ಮತ್ತೆ ಮರಳಿ ಕೃಷಿ ಭೂಮಿಗೆ ಬರುತ್ತವೆ. ಒಂದು ತೋಟದಿಂದ ಇನ್ನೊಂದು ತೋಟಕ್ಕೆ ದಾಳಿಯಿಡುತ್ತದೆ. ಕತ್ತಲು ಕವಿಯುತ್ತಿದ್ದಂತೆ ಆನೆಗಳು ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿವೆ. ಕೃಷಿಕರಿಗೆ ನಿದ್ರೆಯಿಲ್ಲದ ರಾತ್ರಿ ಉಂಟಾಗಿದೆ. ‘ಯಾವ ಕಡೆಯಿಂದ ಯಾವಾಗ ಆನೆಗಳು ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ರಾತ್ರಿ ಪೂರ್ತಿ ಕಾದು ತೋಟದಿಂದ ಆನೆಗಳನ್ನು ಓಡಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಜನ ವಸತಿ ಪ್ರದೇಶದ ಸಮೀಪದಲ್ಲಿಯೇ ಆನೆಗಳು ಬೀಡು ಬಿಟ್ಟಿರುವ ಕಾರಣ ಜನರಲ್ಲಿ ಆತಂಕ ಉಂಟಾಗಿದೆ ಎನ್ನುತ್ತಾರೆ ಮಂಡೆಕೋಲು ಗ್ರಾಮದ ಮುರೂರಿನ ಚಂದ್ರಜಿತ್ ಮಾವಂಜಿ.